ರಾಷ್ಟ್ರ ಶಕ್ತಿ ಕೇಂದ್ರ

ರಾಷ್ಟ್ರಶಕ್ತಿ ಅಂದರೆ…

Posted in ಸಂವಾದ by yuvashakti on ಮಾರ್ಚ್ 26, 2010
ಬಹಳ ದಿನಗಳಾದವು. ಈ ನಡುವೆ ಜಾಗೋ ಭಾರತ್ ನೂರನೆ ಕಾರ್ಯಕ್ರಮದ ಮೇಲೆ ಹನ್ನೆರಡು ಕಾರ್ಯಕ್ರಮಗಳು ನಡೆದವು. ಚಕ್ರವರ್ತಿಯವರು ಕೃಷ್ಣದೇವರಾಯ ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಾಗೂ ಇಸ್ಲಾಮ್ ಮೂಲಭೂತವಾದದ ಮೂಲ ಸೆಲೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದು ಪುಸ್ತಕ ಬರೆಯಲಿದ್ದಾರೆ. ಇತಿಹಾಸ ಹೀಗೂ ಇದೆ ಅನ್ನುವುದು ತಿಳಿಯಬೇಕಾದರೆ ಈ ಕೃತಿಗಳ ಅಗತ್ಯವಿದೆ. ಅವು ಆದಷ್ಟು ಬೇಗ ಬರಲಿ ಎಂಬುದು ರಾಷ್ಟ್ರ ಶಕ್ತಿ ಕೇಂದ್ರದ ಅಪೇಕ್ಷೆ.
ಜೊತೆಗೆ ಮತ್ತಷ್ಟು ಸಮಾಜಮುಖಿ ಯೋಜನೆಗಳಿವೆ. ಈ ವರ್ಷದಲ್ಲಿ ಕಾರ್ಯಗತಗೊಳ್ಳಬೇಕಾದ ಪಟ್ಟಿ ಸಿದ್ಧವಿದೆ. ಕಾಲಕ್ರಮದಲ್ಲಿ ಎಲ್ಲವೂ ಸಾಧ್ಯವಾಗಬಹುದು.
ಖುಷಿಯ ವಿಷಯವೆಂದರೆ, ಜಾಗೋ ಭಾರತ್ ಆಶಯಗಳಿಗೆ ಯುವಕರ ಸ್ಪಂದನೆ. ಅದು ಉನ್ಮತ್ತ ಆರಾಧನೆಯಲ್ಲ. ಅಲ್ಲಿ ತೂಗಿ ನೋಡುವ ವೈಚಾರಿಕತೆಯಿದೆ. ಹಾಗಿಲ್ಲದೆ ಜಾತಿ-ಪಂಥ-ಭಾಷೆ ಭೇದವಿಲ್ಲದೆ ಜನರು ಜಾಗೋಭಾರತ್ ಗೆ ಒಲಿಯುತ್ತಿರಲಿಲ್ಲ. ಗೆಳೆಯರೊಬ್ಬರು ಕೇಳಿದ್ದರು, ‘ನೀವು ಜಾಗೋ ಭಾರತ್ ಮಾಡ್ತೀರಿ, ಜಾಗೋ ಮುಸ್ಲಿಮ್, ಜಾಗೋ ದಲಿತ್ ಎಲ್ಲ ಯಾಕೆ ಮಾಡಲ್ಲ’ ಅಂತ! ನಾನು ಹೇಳಿದೆ, ‘ನಮ್ಮ ಭಾರತದಲ್ಲಿ ದಲಿತರೂ ಇದ್ದಾರೆ, ಮುಸ್ಲಿಮರೂ ಇದ್ದಾರೆ. ನಾವು ಸೌಹಾರ್ದದ ಹೆಸರಲ್ಲಿ ನಡುವಿನ ಅಂತರವನ್ನು ಎತ್ತೆತ್ತಿ ತೋರಿಸುತ್ತ ಖಾಯಂ ಬಿರುಕಿಗೆ ಆಸ್ಪದ ಕೊಡುವಂಥವರಲ್ಲ’ ಎಂದು. ಸರಿಯಾಗಿದೆ ಅಲ್ಲವೆ?
ಜಾಗೋ ಭಾರತ್ ಆಶಯವೂ ಇದೇ. ಎಲ್ಲರೂ ಒಂದಾಗಿ ಮುನ್ನಡೆದಾಗ ಮಾತ್ರ ಭಾರತ ಮುನ್ನಡೆಯುತ್ತದೆ. ರಾಷ್ಟ್ರಶಕ್ತಿ ಅಂದರೆ ಈ ಸೀಮೆಯೊಳಗಿನ ಪ್ರತಿಯೊಬ್ಬನ ಶಕ್ತಿ. ಅದನ್ನು ಹಿಡಿದಿಡುವ ಕೇಂದ್ರ ದೇಶಪ್ರೇಮ.
ನಮ್ಮೊಂದಿಗಿರಿ.
ಇರುತ್ತೀರಲ್ಲ?
ಪ್ರೀತಿಯಿಂದ,
ರಾ.ಶ.ಕೇಂದ್ರ ಬಳಗ

ಪ್ರೀತಿಯಿಂದ,ರಾ.ಶ.ಕೇಂದ್ರ ಬಳಗ

ನೆರೆ ಸಂತ್ರಸ್ತರ ನಿಧಿಗೆ ಜಾಗೋಭಾರತ್ ‘ಅಳಿಲು ಕಾಣಿಕೆ’

Posted in ಕಾರ್ಯಕ್ರಮ- ವರದಿ by yuvashakti on ನವೆಂಬರ್ 18, 2009

ಉತ್ತರ ಕರ್ನಾಟಕದ ಬಹುಭಾಗ ನದಿಯಲ್ಲಿ ನೆಂದು, ನೊಂದು ತಿಂಗಳು ಕಳೆದಿದೆ. ಆದರೆ ಅಲ್ಲಿನ ಜನತೆಯ ನೋವು, ಬದುಕಿನ ಅನಿಶ್ಚಿತತೆ ಇನ್ನೂ ಹಾಗೇ ಇದೆ. ಮಕ್ಕಳು ಶಾಲೆಗೆ ಹೋಗಲಾಗದೆ, ಹೋಗಲು ಶಾಲೆಯೇ ಇಲ್ಲದೆ, ಇದ್ದರೂ ಮಕ್ಕಳ ಪುಸ್ತಕ- ಪಾಟಿ ಚೀಲಗಳು ಉಳಿದಿರದೆ ಎಲ್ಲ ಬಗೆಯ ದುರವಸ್ಥೆಗಳೂ ಉಂಟಾಗಿರುವುದು ನಿಮಗೂ ಗೊತ್ತಿದೆ.

ಈಗಾಗಲೇ ನಾಡಿನ ಜನತೆ ಈ ದುರಂತಕ್ಕೆ ವ್ಯಾಪಕವಾಗಿ ಸ್ಪಂದಿಸಿ ಉದಾರ ಮನಸಿನ ದೇಣಿಗೆ ನೀಡುತ್ತ ಸಹಾಯ ಹಸ್ತ ನೀಡುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ನೀಡುತ್ತ ನಿಧಿ ಸಂಗ್ರಹ ಮಾಡಿ ಸಂತ್ರಸ್ತರಿಗೆ ಒದಗಿಸುವ ಸತ್ಕಾರ್ಯದಲ್ಲಿ ನಿರತವಾಗಿವೆ.

ಜಾಗೋ ಭಾರತ್ ಕೂಡ ಇಂತಹ ಒಂದು ಕಾರ್ಯಕ್ರಮದ ಯೋಜನೆ ಹಾಕಿಕೊಂಡಿತ್ತು. ಇದಕ್ಕೆ ರಾಮಕೃಷ್ಣಾಶ್ರಮದ ‘ವಿವೇಕ ಹಂಸ’ ಪತ್ರಿಕಾ ಬಳಗ ಸಹಕಾರ ನೀಡಲು ಮುಂದಾಯಿತು. ಅದರಂತೆ ಈಗ ದಿನಾಂಕ 22.11.2009ರ ಸಂಜೆ 5:30 ರಿಂದ 9:00 ರವರೆಗೆ, ರಾಜರಾಜೇಶ್ವರಿ ನಗರದ ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಜಾಗೋ ಭಾರತ್ ರಾಷ್ಟ್ರ ಕಥನ- ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕೆ ರೂ.10ರ ಟಿಕೆಟ್ ಇಟ್ಟಿದ್ದು, ಆಸಕ್ತರು ಅದನ್ನು ಕೊಳ್ಳಬಹುದು. ಇಲ್ಲವಾದಲ್ಲಿ ಉಚಿತ ಪ್ರವೇಶವಂತೂ ಇದ್ದೇ ಇದೆ. ನೀವು ನೀಡುವ ಧನ ಸಹಾಯ ಪೂರ್ತಿಯಾಗಿ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮ ನಡೆಸುತ್ತಿರುವ ಪರಿಹಾರಕಾರ್ಯಕ್ಕೆ ಸೇರುತ್ತದೆ. ಬನ್ನಿ, ನಮ್ಮ ಈ ಅಳಿಲು ಸೇವೆಯಲ್ಲಿ ಕೈಜೋಡಿಸಿ….

~ ಚಕ್ರವರ್ತಿ ಸೂಲಿಬೆಲೆ ಮತ್ತು ಜಾಗೋ ಭಾರತ್ ತಂಡ

ಸೂ: ಕಾರ್ಯಕ್ರಮ ನಡೆಯುವ ಸ್ಥಳದ ವಿಳಾಸ: ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರ; ಡಬಲ್ ರೋಡ್, BEML ಕಾಂಪ್ಲೆಕ್ಸ್, BEML ಲೇ ಔಟ್, 3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು.