ರಾಷ್ಟ್ರ ಶಕ್ತಿ ಕೇಂದ್ರ

ಯುವ ದಿನದ ಹಿನ್ನೆಲೆಯಲ್ಲಿ…

Posted in ಚಕ್ರವರ್ತಿ ಅಂಕಣ by yuvashakti on ಜನವರಿ 14, 2010
ಮತ್ತೆ ಬಂತು ಸ್ವಾಮಿ ವಿವೇಕಾನಂದರ ಜಯಂತಿ.
ಈಗ ಎಲ್ಲೆಲ್ಲೂ ಅವರ ಫೋಟೋ ಇಟ್ಟು ಜಯಂತಿ ಆಚರಿಸುವ ಪರಿಪಾಠ ವ್ಯಾಪಕವಾಗಿಬಿಟ್ಟಿದೆ. ಎಂದಿನಂತೆ ಅದೇ ಗೋಳು. ಅವರನ್ನು ಮರೆತೇ ಬಿಟ್ಟಿದ್ದಾಗ ವಿವೇಕಾನಂದರ ಜಯಂತಿಯನ್ನು ಆಚರಿಸುವುದಿಲ್ಲವಲ್ಲಪ್ಪ ಎಂದು ಗೋಳಿಡುತ್ತಿದ್ದೆವು. ಕಳೆದ ವರ್ಷ ಸರ್ಕಾರವೇ ಅವರನ್ನು ನೆನಪಿಸಿಕೊಂಡು ಅವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿದ ನಂತರ ಈಗ ಎಲ್ಲೆಲ್ಲೂ ವಿವೇಕಾನಂದರೇ ವಿವೇಕಾನಂದರು. ಈಗಲೂ ನಮ್ಮ ಗೋಳು ತಪ್ಪಿಲ್ಲ ಬರೀ ಫೋಟೋ ಇಟ್ಟರಾಯಿತೇ? ಅವರ ಚಿಂತನೆಗೆ ತೆರೆದುಕೊಳ್ಳೋದು ಬೇಡ್ವೇ?
ಒಂದಂತೂ ಸತ್ಯ. ಗೋಳಿಡುವವರು ಅದೆಷ್ಟೇ ನೊಂದುಕೊಂಡರೂ ಭಾರತವನ್ನು, ಸರಿಯಾಗಿ ಗಮನಿಸಿದರೆ ಜಗತ್ತನ್ನೂ ತನ್ನ ಚಿಂತನೆಗಳಿಂದ ಅಲುಗಾಡಿಸಿದ ಮಹಾಸಂತ ಸ್ವಾಮಿ ವಿವೇಕಾನಂದ ಎಂಬುದರಲ್ಲಿ ಸಂಶಯವೇ ಇಲ್ಲ. ಸಂತರುಗಳ ಪರಂಪರೆಯೇ ನಮ್ಮಲ್ಲಿ ಆಗಿ ಹೋಗಿದ್ದರೂ ಸ್ವಾಮಿ ವಿವೇಕಾನಂದರು ಪಡೆಯುವ ಸ್ಥಾನ ಅಪರೂಪದ್ದೇ.. ಹೀಗೇಕೆ?
ವಿದೇಶಕ್ಕೆ ಹೋಗಿ ಮಾನ್ಯರಾದ್ದರಿಂದ ಎನ್ನುವುದಾದರೆ, ವಿವೇಕಾನಂದರ ನಂತರ ಅದೆಷ್ಟು ಸಂತರು ವಿದೇಶದ ನೆಲದಲ್ಲಿ ಓಡಾಡಿ, ಭಾರತದ ಹಿರಿಮೆ-ಗರಿಮೆಯನ್ನು ಸಾರಿ ಜಯಭೇರಿ ಬಾರಿಸಿ ಬರಲಿಲ್ಲ ಹೇಳಿ? ಚಿಂತನೆಗಳ ಪ್ರಖರತೆ ಎನ್ನುವುದಾದರೆ, ವಿವೇಕಾನಂದರು ಹೇಳಿದ್ದೇನೂ ಹಿಸತಲ್ಲ ಎಂಬುದನ್ನು ನಿನಪಿನಲ್ಲಿಡಬೇಕು. ನಾನು ಉಪನಿಷತ್ತಿನದನ್ನು ಬಿಟ್ಟರೆ ಮತ್ತೇನನ್ನೂ ಹೇಳಿಯೇ ಇಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಒಟ್ಟಾರೆ ಏನದು? ಸ್ವಾಮಿ ವಿವೇಕಾನಂದ ಎಂದೊಡನೆ ನಮ್ಮನ್ನು ಸೆಳೆಯುವ ಆ ಚುಂಬಕ ಶಕ್ತಿ ಯವುದದು?
ಅದೊಂದು ಪರಿಪೂರ್ಣ ಪ್ಯಾಕೇಜ್. ಮಾತಿಗೆ ತಕ್ಕಂತಹ ಆಕೃತಿ, ಅದಕ್ಕೆ ಸೂಕ್ತವಾದ ಘನತೆ, ಅತ್ಯಂತ ಶ್ರೇಷ್ಠ ನಾಡಿನವನು ಎಂಬ ಸಾತ್ವಿಕ ಅಹಂಕಾರದಿಂದ ಉಬ್ಬಿದ ಎದೆ, ದೀನ-ದಲಿತರಿಗಾಗಿಯೇ ಸದಾ ಮಿಡಿಯುವ ಹೃದಯ, ನೊಂದವರಿಗಾಗಿ ಕಂಬನಿ ಸುರಿಸಲು ಸಿದ್ಧವಿರುವ ಕಣ್ಣುಗಳು, ಕೆಲವೊಮ್ಮೆ ಕೈಲಾಗದ ಹೇಡಿಗಳಿಗಾಗಿ ಕೆಂಡ ಉಗುಳುವ ಅದೇ ಕಂಗಳು, ಮಸ್ತಿಷ್ಕದಲ್ಲಿ ತುಂಬಿ ತುಳುಕಾಡುವ ಜ್ಞಾನ ಸಂಪದ, ಅವಾಜ ಪ್ರೀತಿ, ತಪ್ಪುಗಳನ್ನು ಧಿಕ್ಕರಿಸಿ ಸರಿಯಾದುದನ್ನು ಅಪ್ಪಿಕೊಳ್ಳುವ ಛಾತಿ… ಅದೊಂದು ಅಪರೂಪದ ವ್ಯಕ್ತಿತ್ವ. ಇಪ್ಪತ್ತನೇ ಶತಮಾನದಲ್ಲಿ ಜಗತ್ತನ್ನು ಪ್ರಭಾವಿಸಿದ ವ್ಯಕ್ತಿಗಳು ಯಾರೆಂದು ಕೇಳಿದರೆ ನಿಸ್ಸಂಶಯವಾಗಿ ಈ ವ್ಯಕ್ತಿಯ ಚಿತ್ರ ಎದುರಿಗೆ ನಿಲ್ಲಲೇಬೇಕು.
ಜರ್ಮನಿಯ ಮಹಿಳೆಯೊಬ್ಬಳು ವಿವೇಕಾನಂದರ ಭಾಷಣಗಳನ್ನು ಕೇಳಿ ಅಚ್ಚರಿಗೊಳಗಾಗಿ ಒಂದು ಘಟನೆ ಹೇಳುತ್ತಾಳೆ. ಸ್ವಾಮೀಜಿಯವರ ಉಪನ್ಯಾಸ ಕೇಳಿದ ನಂತರ ಆಕೆ ಅದೊಮ್ಮೆ ಸ್ವಮೀಜಿಯ ಕೈ ಕುಲುಕಿದ್ದಳಂತೆ. ಆನಂತರ ಮೂರು ದಿನಗಳ ಕಾಲ ಆ ಕೈಗೆ ನೀರನ್ನೂ ತಾಕಿಸಿರಲಿಲ್ಲವಂತೆ. ಸ್ವಾಮೀಜಿ ಮುಟ್ಟಿದ ಆ ಫ್ಲೇವರ್ ಆರದಿರಲಿ ಅಂತ! ಈ ತರಹದ ಪ್ರಸಂಗಗಳು ಅದೆಷ್ಟೋ. ಅವರೊಡನೆ ಇರಬೇಕು, ಮಾತು ಕೇಳಬೇಕು, ಮಾತಾಡಬೇಕು ಎಂದು ಭಾವಿಸಿದವರೂ ಅಸಂಖ್ಯರು. ಬದುಕಿರುವಾಗ ಬಿಡಿ, ದೇಹತ್ಯಾಗದ ನಂತರವೂ ಅವರು ಮಾಡುತ್ತಿರುವ ಮೋಡಿ ಅಪರಂಪಾರ. ನೊಬೆಲ್ ಪ್ರಶಸ್ತಿ ಪಡೆದ ರೋಮರೋಲಾಗೆ ರವೀಂದ್ರರು ಹೇಳಿದ್ದರಂತೆ, ‘ಭಾರತವನ್ನು ಅರಿಯಬೇಕಾದರೆ ವಿವೇಕಾನಂದರನ್ನು ತಿಳಿಯಬೇಕು. ಆ ಮಾತಿಗೆ ಕಟ್ಟುಬಿದ್ದು ವಿವೇಕಾನಂದರ ಅಧ್ಯಯನಕ್ಕೆ ತೊಡಗಿದ ರೋಮಾರೋಲಾ ‘ಈ ವ್ಯಕ್ತಿಯನ್ನು ಒದಿದರೇನೇ ಎಲೆಕ್ಟ್ರಿಕ್ ಶಾಕ್ ಹೊಡೆದಮತಹ ಅನುಭವ. ಇನ್ನು ಮಾತುಗಳನ್ನು ನೆರವಾಗಿ ಕೆಳಿದವರ ಸ್ಥಿತಿ ಏನಾಗಬೇಡ?  ಎಂದು ಉದ್ಗರಿಸಿದ್ದ.
ಸ್ವಾಮೀಜಿಯವರದು ಅದೊಂಥರ ಡೈನಮಿಕ್ ಚಿಂತನೆ. ಹಳೆಯ ಮೌಲ್ಯಗಳನ್ನು ಚೂರೂ ಮಾಸದಂತೆ ಹೊಸ ಜನರಿಗೆ ತಲುಪಿಸುವುದು ಹೇಗೆಂಬ ಪಾಠವನ್ನು ಅವರಿಂದಲೇ ಕಲಿಯಬೇಕು. ಹಳೆಯ ಆದರ್ಶಗಳನ್ನೇ ಇಟ್ಟುಕೊಂಡು ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡುವ ಅವರ ಕಲ್ಪನೆ ಅಪರೂಪದ್ದು. ಹೀಗಾಗಿಯೇ ಸ್ವಾಮೀಜಿ ತಮ್ಮ ಜೀವನದ ಬಹುಮೂಲ್ಯ ಸಮಯವನ್ನು ವ್ಯಕ್ತಿ ನಿರ್ಮಾಣದ ಚಿಂತನೆಗೆ ಕೊಟ್ಟರು. ಅವರು ಶಿಕ್ಷಣದ ಕುರಿತೇ ಮಾತಾಡಲಿ, ಅಧ್ಯಾತ್ಮದ ಕುರಿತೇ ಮಾತನಾಡಲಿ, ಅವರು ಬೆರಳು ತೋರಿಸಿ ಮಾತನಾಡಿದಿದ್ದರೆ ಅದು ವ್ಯಕ್ತಿ ನಿರ್ಮಾಣದ ಬಗೆಗೇ.
‘ಸ್ವಾತಂತ್ರ್ಯವನ್ನು ೨೪ ಗಂಟೆಗಳೊಳಗೆ ಕೊಡಿಸುತ್ತೇನೆ, ಆದರೆ ಆ ಜವಾಬ್ದಾರಿಯನ್ನು ನಿಭಾಯಿಸಬಲ್ಲ ನಿಭಾಯಿಸಬಲ್ಲ ಪುರುಷರೆಲ್ಲಿದ್ದಾರೆ? ಎಂಬಲ್ಲಿ ಅವರ ಕಳಕಳಿಯೂ ಅದೇ. ಬಹುಶಹ ಅವರ ಮಾತುಗಲ ಒಳಾರ್ಥ ಹಿಂದೆಂದಿಗಿಂತಲೂ ಈಗ ನಮಗೆ ಚೆನ್ನಾಗಿ ಆಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ರಂಗಗಳಲ್ಲೂ ವ್ಯಕ್ತಿತ್ವಹೀನರನ್ನು ಕಂಡಾಗ ಸ್ವಾಮೀಜಿಯ ಕಾಳಜಿ ಏನಿತ್ತು ಎಂಬುದು ಕಣ್ಣಿಗೆ ರಾಚುತ್ತದೆ. ಹೀಗೆ ವ್ಯಕ್ತಿಗಳನ್ನು ನಿರ್ಮಾಣ ಮಾಡುವಲ್ಲಿ ಅವರದ್ದೇ ಆದ ವಿಧಾನವೊಂದಿತ್ತು. ಅದು ಆತ್ಮವಿಶ್ವಾಸದ ಜಾಗೃತಿಯ ಮಾರ್ಗ. ಶತಶತಮಾನಗಳಿಂದ ಅಮರಿಕೊಂಡಿದ್ದ ಗುಲಾಮಿ ಮಾನಸಿಕತೆಯನ್ನು ‘ಆತ್ಮವಿಸ್ಮೃತಿ ಎಂದೇ ಕರೆದ ಸ್ವಾಮೀಜಿ ಆ ವಿಸ್ಮೃತಿಯಿಂದ ಬಡಿದೆಬ್ಬಿಸಲು ಆತ್ಮವಿಸ್ಮೃತಿಯಿಂದ ಬಡಿದೆಬ್ಬಿಸಲು ಆತ್ಮಜಾಗೃತಿ ಉಂಟುಮಾಡಲು ಟೊಂಕ ಕಟ್ಟಿ ನಿಂತುಬಿಟ್ಟಿದ್ದರು. ಕೊಲಂಬೋದಿಂದ ಆಲ್ಮೊರದವರೆಗೆ ನಿರಂತರ ಪ್ರವಸ ಮಾಡುತ್ತ, ಉದ್ಬೋಧಕರ ಭಾಷಣ ಮಾಡುತ್ತ, ಮಲಗಿರುವ ಆತ್ಮಗಳನ್ನು ಬಡಿದೆಬ್ಬಿಸಿದರು ಸ್ವಾಮೀಜಿ.
ಸ್ವತಃ ಅತ್ಯಂತ ಸ್ವಾಭಿಮಾನದ, ಯಾರಿಗೂ ಬಾಗದ ಬದುಕು ಅವರದು. ಪರಿವ್ರಾಜಕರಾಗಿ ತಿರುಗಾಡುತ್ತಿದ್ದಾಗ, ‘ಊಟವನ್ನೂ ಯರ ಬಳಿ ಬೇಡಲಾರೆ, ಭಗವಂತ ಕೊಟ್ಟರೆ ಉನ್ಣುವೆ ಎಂದು ಹಠ ಹಿಡಿದು ಕುಳಿತವರು. ಸ್ವತಃ ಭಗವಂತನೇ ಸಹಾಯಕ್ಕೆ ಬಂದು ಬೇರೆಬೇರೆ ಮಾರ್ಗಗಳ ಮೂಲಕ ಉಣಿಸಿದ್ದು ಅವರ ಬದುಕಿನಲ್ಲಿ ಕಂಡು ಬರುತ್ತದೆ. ಇಂತಹ ಸ್ವಾಭಿಮಾನಿ ಯುವಕ, ತನ್ನ ದೇಶವಾಸಿಗಳು ನಿರಭಿಮಾನಿಗಳಾಗಿ, ಆಂಗ್ಲರ ಅಡಿಯಾಳಾಗಿ ಕುಳಿತಿದ್ದರು ಅದು ಹೆಗೆ ಸಹಿಸಿಯಾನು ಹೇಳಿ? ಸ್ವಾಮೀಜಿ ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಬಂದಮೇಲೆ ಇಲ್ಲಿನ ಯುವಕರನ್ನು ಚೆನ್ನಾಗಿಯೇ ತರಾಟೆ ತೆಗೆದುಕೊಂಡರು. ಅವರಲ್ಲಿನ ಪಶ್ಚಿಮದ ಮೋಹದ ಪೊರೆಯನ್ನು ಕಳಚಿ ಬಿಸುಟರು. ಆತ್ಮಹೀನತೆಯಿಂದ ನಿಸ್ತೆಜವಾಗಿದ್ದ ಯುವ ಜನಾಂಗಕ್ಕೆ ಚುರುಕು ಮುಟ್ಟಿಸಿ ಜಾಗೃತಿಯ ಹೊಸ ಪರ್ವ ಬರೆದರು. ಪಶ್ಚಿಮಕ್ಕೆ ಭಾರತ ಯಾವ ನಿಟ್ಟಿನಿಂದಲೂ ಕಡಿಮೆಯಿಲ್ಲವೆಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ವಿದೆಸದ ನೆಲದಲ್ಲಿ ಕ್ರಿಶ್ಚಿಯನ್ ಪಾದ್ರಿಗಳನ್ನು ಎದುರು ಹಾಕಿಕೊಂಡು ಹೆಡೆಮುರಿದುಕಟ್ಟಿದ ಕಥನಗಳಂತೂ ಈಗ ಭಾತರತೀಯರಲ್ಲಿ ಮಿಂಚಿನ ಸಂಚಾರ ಉಂಟುಮಾಡಿತ್ತು. ದೀರಘ ನಿದ್ರೆಯಿಂದ ಹಿಂದೂ ಸಮಾಜ ಮೈ ಕೊಡವಿ ಏಳುವ ಕಾಲ ಬಂದೇಬಿಟ್ಟಿತು. ಅಲ್ಲದೆ ಮತ್ತೆನು? ‘ನನಗೆ ಫುಟ್‌ಬಾಲ್ ಎಂದರೆ ಇಷ್ಟವಾದ ಆಟ. ಏಕೆಂದರೆ ಅಲ್ಲಿ ಪ್ರತಿಯೊಂದು ಕಿಕ್‌ಗೆ ಒಂದು ಕೌಂಂಟರ್ ಕಿಕ್ ಇದೆಯಲ್ಲ, ಅದಕ್ಕೆ ಎನ್ನುವ ಸ್ವಾಮೀಜಿಯವರ ಮಾತು ಗುಲಮೀತನದಲ್ಲಿರುವ, ಆಂಗ್ಲರ ಬೂಟು ನೆಕ್ಕುತ್ತಿದ್ದ ಭಾರತೀಯರಲ್ಲಿ ಚೈತನ್ಯ ಮೂಡಿಸಿದ್ದರಲ್ಲಿ ಅತಿಶಯೀಕ್ತಿ ಖಂಡಿತ ಇಲ್ಲ.
ಆಂಗ್ಲ ಪ್ರಭುತ್ವವು ಸ್ವಾಮೀಜಿಯ ಹಿಂದೆ ಬಿತ್ತು. ಗಲ್ಲಿಗಲ್ಲಿಗಳಲ್ಲೂ ಸ್ವಾಮೀಜಿಯವರನ್ನು ಹಿಂಬಲಿಸುವ ಆಂಗ್ಲ ಗುಪ್ತಚರರನ್ನು ಕಂಡು ಸೋದರಿ ನಿವೇದಿತೆಗೇ ಅಸಹ್ಯವಾಗಿತ್ತು. ಅದರೂ ಅವರು ಸ್ವಾಮೀಜಿಯನ್ನು ಹಿಡಿದು ಜೈಲಿಗೆ ತಳ್ಳುವಂತಿರಲಿಲ್ಲ. ಆತ್ಮವಿಶ್ವಾಸದ ಕುರಿತು ಅವರಾಡಿದ್ದ ಮಾತುಗಳು ಹೊಸತೇನಲ್ಲ. ಅವೆಲ್ಲವೂ ಶಾಸ್ತ್ರಗಳಿಂದ ಸ್ವೀಕರಿಸಿದ್ದಸೇ ಅಗಿತ್ತು. ‘ಅಭೀಃ (ಹೆದರದಿರು) ಎನ್ನುವ ಉಪನಿಷದ್ವಾಕ್ಯವನ್ನು ಅವರು ಪದೇಪದೇ ನೆನಪಿಸುತ್ತಿದ್ದರು. ಹೀಗಾಗಿಯೇ ಅವರಾಡುವ ಮಾತುಗಳು ಕೇಳುಗರಿಗೆ ಸರಿಯಾದ ದಿಕ್ಕು ತೋರಿದರೆ, ಆಳುವ ಸರ್ಕಾರ ಮಾತ್ರ ಅವರನ್ನು ಬಂಧಿಸಲಾಗದೆ ಚಡಪಡಿಸುತ್ತಿತ್ತು.
ಸ್ವಾಮೀಜಿಯವರ ಆ ಸಂದೇಶ ಇಂದು ಭಾರತಕ್ಕೆ ಮತ್ತೆ ಬೇಕಿದೆ. ಅವರ ಸ್ವಾಭಿಮಾನದ, ಆತ್ಮವಿಶ್ವಾಸದ ಕಿಚ್ಚು ನಮಗೂ ತಾಕಬೇಕಿದೆ. ಭಾರತ ಜಗತ್ತಿನ ಯಾವ ರಾಷ್ಟ್ರಗಳಿಗೂ ಕಡಿಮೆಯಿಲ್ಲ ಎನ್ನುವುದನ್ನು ನಾವು ಸಾಬೀತುಪಡಿಸಿ ತೋರಬೆಕಿದೆ. ಭಾರತದ ಕೀರ್ತಿಪತಾಕೆ ಹಾರಾಡದ ಜಾಗವೇ ಇಲ್ಲ ಎಂಬುದು ಜಗತ್ತಿಗೆ ತಿಳಿಯಲು ನಾವು ಶ್ರಮಿಸಬೇಕಿದೆ. ಸ್ವಾಮೀಜಿ ಹೇಳುತ್ತಾರಲ್ಲ, ಭಾರತವೆಂಬ ಹಡಗು ಶತಸತಮಾನಗಳಿಂದ ಜನರನ್ನು ದಡ ಸೇರಿಸುತ್ತಿದೆ. ಈಗ ಈ ಹಡಗಿಗೆ ತೂತು ಬಿದ್ದಿದೆ. ಹಾಗೆಂದು ಅದನ್ನು ಬಯ್ಯುತ್ತ ಕೂತರೆ ಪ್ರಯೋಜನವಿಲ್ಲ. ನಮ್ಮ ರಕ್ತಹರಿಸಿಯಾದರೂ ಈ ತೂತು ಮುಚ್ಚಬೇಕು. ಈ ಮಾತುಗಳಲ್ಲಿನ ಕಳಕಳಿ ಗಮನಿಸಿ. ಬಹುಶಃ ಇನ್ನು ಎಂಟು ಹತ್ತು ಶತಮಾನಗಳವರೆಗಾದರೂ ಈ ಮತಿನ ಬಿಸಿ ತಾಕುತ್ತಲೇ ಇರುತ್ತದೆ. ಇಷ್ಟನ್ನು ಅರಿತು ಸರಿಯಾಗಿ ನಡೆದರೆ ಭಾರತ ಪುರೋಗಾಮಿಯಾಗಲೆಬೇಕು.
ಸ್ವಾಮೀಜಿ  ಬರೀ ಆತ್ಮವಿಶ್ವಾಸ ತುಂಬುವ ಮಾತುಗಲನ್ನಷದಟೆ ಆಡುತ್ತ ಉಳಿಯಲಿಲ್ಲ. ಅಮಥವರಿಗೆ ಮುಂದಿನ ಕೆಲಸಗಳೇನು ಎಂಬುದನ್ನೂ ಹೇಳಿದರು. ಅಸ್ಪೃಶ್ಯತೆಯ ಕೊಳಕು ರಾಡಿಯಲ್ಲಿ ಬಿದ್ದು ಗುದ್ದಾಡುತ್ತಿದ್ದವರಿಗೆ ಎಚ್ಚರಿಕೆಯ ಸಂದೇಶ ಕೊಟ್ಟರು. ಮೇಲುಕೀಳು ಬೆದವನ್ನು ಎಲ್ಲರಿಗಿಂತ ಹೆಚ್ಚು ತೋರ್ಪಡಿಸ್ತಿದ್ದ ಕೆರಳವನ್ನು ಹುಚ್ಚರ ಸಂತೆ ಎಂದು ಜರಿದು, ‘ದೀನ ದಲಿತರ ಸೇವೆ ಮಾಡಿ, ಇಲ್ಲವೆ ಸಮುದ್ರಕ್ಕೆ ಬಿದ್ದು ಸಾಯಿರಿ ಎಂಬ ಕಟು ಮಾತುಗಳಿಂದ ಮೆಲ್ವರ್ಗವನ್ನು ತಿವಿದರು. ಸ್ವತಃ ಬದುಕಿನಲ್ಲಿ ಬಡಬಗ್ಗರೊಂದಿಗೆ, ತುಳಿತಕ್ಕೊಳಗಾದವರೊಂದಿಗೆ ನಿಂತು, ಅವರ ಜೀವನ ಮಟ್ಟವನ್ನು ಸುಧಾರಿಸುವ ಯತ್ನವನ್ನು ಸ್ವಾಮೀಜಿ ಮಾಡಿದರು.
ಸ್ವಾಮೀಜಿ ಅದಕ್ಕೇ ಅಷ್ಟೊಂದು ಇಷ್ಟವಾಗೋದು. ಅವರ ಮಾತುಗಳು ಬರಿಯ ಮಾತುಗಳಷ್ಟೇ ಆಗಿರಲಿಲ್ಲ. ಅವು ಕಾರ್ಯ ರೂಪಕ್ಕಿಳಿದ ಸಂತನ ಸಂಕಲ್ಪಗಳಾಗಿದ್ದವು. ಅವರೇ ಹೇಳಿದ್ದಾರಲ್ಲ, ‘ನಾನಾಡಿರುವ ಮಾತುಗಳು ಮುಂದಿನ ಸಾವಿರ ವರ್ಷಗಳವರೆಗೂ ದಾರಿತೋರಬಲ್ಲವು ಅಂತ. ಅವರ ಮಾತುಗಳು ಇಮದಿಗೂ ಸತ್ವಯುತವಾಗಿ ಕಾಣಲು ಅದೆ ಕಾರಣ. ಅನಿಸಿದ್ದನ್ನು ನೇರವಾಗಿ ಹೇಳುವ, ಮಾಡಬೇಕೆನಿಸಿದ್ದನ್ನು ಮಾಡುವ ಅವರ ಆ ಛಾತಿ ಇಂದಿನ ಯುವಜನತೆಗೆ ಪರಮಶ್ರೇಷ್ಠ ಆದರ್ಶ.
ನಾವು ಮಾಡಬೇಕಿರೋದು ಇಷ್ಟೇ. ಅವರು ನಡೆದುತೋರಿದ ಆ ಹಾದಿಯಲ್ಲಿ ಹೆಜ್ಜೆ ಹಾಕುವ ಯತ್ನ ಮಾಡಬೇಕು. ವಿವೇಕಾನಂದರ ಜಯಂತಿಯೆಂದರೆ ಹೂಹಾರ ಹಾಕಿ ಪೂಜಿಸಿ, ಸರ್ಕಾರೀ ಕಾರ್ಯಕ್ರಮ ಎಂಬ ಭಯಭಕ್ತಿಯಿಂದ ಸುಮ್ಮನಾಗಿಬಿಡೋದಲ್ಲ. ಅವರ ಚಿಂತನೆಗಲನ್ನು ಸಾಕ್ಷಾತ್ಕರಿಸಿಕೊಂಡು ಅವರ ಆಶಯಕ್ಕೆ ತಕ್ಕಂತೆ ಬದುಕುವುದು ಇಂದಿನ ಅಗತ್ಯ. ಅದು ಸಾಧ್ಯವಾಗುವುದಾದರೆ, ಆ ಜಯಮತಿಯ ಅಚರ್ಯಣೆಯೂ  ಸಾರ್ಥಕ.
ಹಾಗಾದಲ್ಲಿ, ನಿಮಗಿದೋ, ವಿವೇಕಾನಂದ ಜಯಂತಿಯ ಹಾರ್ದಿಕ ಶುಭ ಕಾಮನೆಗಳು.

ಇವೆಲ್ಲ ನಡೆದು ನೂರಾಹದಿನೈದು ವರ್ಷ!

Posted in ಚಕ್ರವರ್ತಿ ಅಂಕಣ by yuvashakti on ಸೆಪ್ಟೆಂಬರ್ 19, 2008

ಸೆಪ್ಟೆಂಬರ್ ಹನ್ನೊಂದು ಅಂತಾದರೂ ಕರೆಯಿರಿ, ೯/೧೧ ಅಂತಾದರೂ ಹೇಳಿ. ಮನಸ್ಸು ಅಮೆರಿಕಾದತ್ತ ಧಾವಿಸಿಬಿಡುತ್ತದೆ. ವಿಶ್ವ ವ್ಯಾಪರ ಕೇಂದ್ರದ ಎರಡು ಕಟ್ಟಡಗಳನ್ನು ಭಯೋತ್ಪಾದಕರು ಉರುಳಿಸಿದ್ದು ಕಣ್ಮುಂದೆ ಅಲೆಅಲೆಯಾಗಿ ತೇಲಿ ಹೋಗುತ್ತದೆ. ಅಲ್ಲದೆ ಮತ್ತೇನು? ಉರುಳುವ ಕಟ್ಟಡಗಳನ್ನು ಟಿವಿಯ ಮುಂದೆ ಕುಳಿತು ನೇರ ಪ್ರಸಾರದಲ್ಲಿ ನೋಡಿದವರಲ್ಲವೆ ನಾವು!?

ಆದರೆ ಈ ಅಮೆರಿಕಾ ಸೆಪ್ಟೆಂಬರ್ ಹನ್ನೊಂದರಂದೇ ಇನ್ನೊಂದು ಸಾತ್ತ್ವಿಕ ಸುನಾಮಿಗೆ ಸಿಲುಕಿ ಅಲುಗಾಡಿದ್ದು ಬಹುತೆಕರಿಗೆ ಮರೆತೇಹೋಗಿದೆ. ಅವತ್ತು ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದ ವೇದಿಕೆ ಮೆಲೆ ನಿಂತು, ಕೇವಲ ಮೂರೂವರೆ ನಿಮಿಷಗಳಲ್ಲಿ ಸಾಕ್ಷಾತ್ ಅಮೆರಿಕೆಯನ್ನೇ ಧರೆಗೆ ಕೆಡವಿದ್ದರು.

ಸ್ವಲ್ಪ ವಿಚಾರ ಮಾಡಿ. ಎರಡರಲ್ಲೂ ಅದೆಷ್ಟು ಅಂತರ! ರಾಕ್ಷಸೀ ವೃತ್ತಿಯಿಂದ, ಧರ್ಮಾಂಧತೆಯ ಮೂರ್ತ ರೂಪವಾಗಿದ್ದ ಲ್ಯಾಡೆನ್ ಕೆಡವಿದ್ದು ಅಮೆರಿಕೆಯ ಹೊರರೂಪದ ಎರಡು ಕಟ್ಟಡಗಳನ್ನು ಮಾತ್ರ. ಬಂದೂಕು, ಮದ್ದು ಗುಂಡುಗಳನೆಲ್ಲ ಬಳಸಿ ಲ್ಯಾಡೆನ್ ಮತ್ತವನ ಸಹಚರರು ಕಟ್ಟಡಗಳಿಗೆ ಧಕ್ಕೆ ನೀಡಿದರು, ಒಂದಷ್ಟು ಜೀವ ತೆಗೆದರು.
ಆದರೆ ಸ್ವಾಮಿ ವಿವೇಕಾನಂದರು ವೇದಿಕೆಯ ಮೇಲೆ ನಿಂತು ಬರೀ ಮಾತಿನ ತುಪಾಕಿಯಿಂದ ಅಮೆರಿಕನ್ನರ ಅಂತಃಸತ್ತ್ವವನ್ನೇ ಅಲುಗಾಡಿಸಿಬಿಟ್ಟರು. ಅಲ್ಲಿನ ಜ್ಞಾನಿಗಳು, ಪಂಡಿತರು, ಅಲ್ಲಿ ನೆರೆದಿದ್ದ ಅನ್ಯ ಧರ್ಮೀಯರೆಲ್ಲರೂ ತಲೆದೂಗುವಂತೆ ಮಾಡಿಬಿಟ್ಟರು. ಆಧ್ಯಾತ್ಮಿಕತೆಯ ಗಂಧ ಗಾಳಿಯಿಲ್ಲದ ಭೋಗ ಭೂಮಿಯ ಜನತೆಗೆ ಮಾತಿನ ಅಮೃತ ಸಿಂಚನ ಹರಿಸಿ ಜೀವದಾನ ಮಾಡಿದರು.

ಈ ಎರಡೂ ಘಟನೆಗಳ ಪರಿಣಾಮವೂ ಸ್ವಾರಸ್ಯಕರ. ಒಂದು ಘಟನೆಯ ನಂತರ ಅಮೆರಿಕಾ ಆಫ್ಘಾನಿಸ್ತಾನಕ್ಕೆ ನುಗ್ಗಿ, ಲ್ಯಾಡೆನ್ನನ ದೇಶವನ್ನು ಸಂಪೂರ್ಣ ನಾಶಗೈದರೆ, ವಿವೇಕಾನಂದರ ಮಾತಿಗೆ ಮರುಳಾದ ಪಾಶ್ಚಾತ್ಯರನೇಕರು ಭಾರತದ ಸೇವೆಗೆ ಸಿದ್ಧರಾಗಿ ನಿಂತರು!

ಸ್ವಾಮಿ ವಿವೇಕಾನಂದರ ಈ ಜೈತ್ರಯಾತ್ರೆ ನಿಜಕ್ಕೂ ಅದ್ಭುತ ಪವಾಡವೇ ಸರಿ. ಪರದೇಶಗಳ ಪರಿಚಯವೇ ಇಲ್ಲದ, ಹೊಟ್ಟೆ- ಬಟ್ಟೆಗಳ ಪರಿವೆ ಇಲ್ಲದ, ಎಲ್ಲಿಗೆ ಹೇಗುವುದು, ಏನು ಮಾತನಾಡುವುದೆಂಬುದರ ಅರಿವಿಲ್ಲದ, ಕೊನೆಗೆ- ತಾನಾರೆಂಬ ಪರಿಚಯ ಪತ್ರವೂ ಇಲ್ಲದ ವ್ಯಕ್ತಿಯೊಬ್ಬ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತನಾಗಿದ್ದು ಪವಾಡವಲ್ಲದೆ ಮತ್ತೇನು?

“ನ ರತ್ನಂ ಅನ್ವಿಷ್ಯತಿ ಮೃಗ್ಯಾತೇ ಹಿ ತತ್’ (ರತ್ನ ತಾನೇ ಯಾರನ್ನೂ ಅರಸುತ್ತ ಹೋಗುವುದಿಲ್ಲ, ಅದು ಹುಡುಕಲ್ಪಡುತ್ತದೆ) ಎನ್ನುವಂತೆ ವಿವೇಕಾನಂದರ ಪ್ರಭೆ ತಾನೇತಾನಾಗಿ ಹರಡಿತು. ಇವರ ಪ್ರಭಾವಕ್ಕೆ ಸಿಕ್ಕು ಮನೆಗೆ ಆಹ್ವಾನಿಸಿದ ಹಾರ್ವರ್ಡ್ ಯುನಿವರ್ಸಿಟಿಯ ಪ್ರೊಫೆಸರ್ ರೈಟ್ ಎರಡು ದಿನ ಇವರೊಡನೆ ಮಾತು ಕತೆಯಾಡಿ ಉದ್ಗರಿಸಿದ್ದರು- “ಅಮೆರಿಕದ ನೆಲದ ಮೇಲೆ ಕಳೆದ ನಾಲ್ಕುನೂರು ವರ್ಷಗಳಲ್ಲಿ ಇಂತಹ ಜ್ಞಾನಿ ತಿರುಗಾಡಿದ ಉಲ್ಲೇಖಗಳೇ ಇಲ್ಲ!” ಎಂದು. ಸ್ವಾಮೀಜಿ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಮ್ಮ ಬಳಿ ಪರಿಚಯ ಪತ್ರವಿಲ್ಲ ಎಂದಾಗ ಆತ ನಕ್ಕುಬಿಟ್ಟಿದ್ದರು. “ನೀವು ಯಾರೆಂದು ಕೇಳುವುದೂ, ಸೂರ್ಯನಿಗೆ ಹೊಳೆಯಲು ಏನಧಿಕಾರ ಎಂದು ಕೇಳುವುದೂ ಒಂದೇ!!” ಎಂದಿದ್ದರು.

ಚಿಕಾಗೋ ವೇದಿಕೆಯ ಮೇಲಿಂದ ಭುವಿ ಬಿರಿಯುವಂತೆ ಮೊಳಗಿದ ವಿವೇಕಾನಂದನ ಪಾದ ಚುಂಬಿಸಲು ಅಮೆರಿಕವೇ ಸಿದ್ಧವಾಗಿ ನಿಂತಿತ್ತು. (ಕ್ರಿಶ್ಚಿಯನ್ ಪಾದ್ರಿಗಳನ್ನು ಬಿಟ್ಟು. ಏಕೆಂದರೆ, ಅವರ ಉದ್ಯೋಗಕ್ಕೇ ಈತ ಸಂಚಕಾರ ತಂದುಬಿಟ್ಟಿದ್ದ!). ವಿವೇಕಾನಂದ ಎಗ್ಗಿಲ್ಲದೆ ನುಡಿದ. ಕ್ರಿಶ್ಚಿಯನ್ನರ ನಾಡಿನಲ್ಲಿ ನಿಂತು, ನಮ್ಮ ನಾಡಿಗೆ ಬೇಕಾಗಿದ್ದುದು ಅನ್ನವೇ ಹೊರತು ಧರ್ಮವಲ್ಲವೆಂದ. ಸಾಧ್ಯವಿದ್ದರೆ ಅನ್ನ ಕೊಡಿ, ಇಲ್ಲವಾದರೆ ತೆಪ್ಪಗಿರಿ ಎಂದುಬಿಟ್ಟ. ತನ್ನ ರಾಷ್ಟ್ರದ ಬಗ್ಗೆ, ಧರ್ಮದ ಶ್ರೇಷ್ಠತೆಯ ಬಗ್ಗೆ ಆತನಿಗೆ ಹೆಮ್ಮೆಯಿತ್ತು. ಅವನು ಮಾತಾಡಿದ್ದು ಸಂಗೀತವಾಯ್ತು. ನುಡಿದಿದ್ದೆಲ್ಲ ತುಪಾಕಿಯ ಗುಂಡಾಯ್ತು. ಶ್ರೀಮತಿ ಅನಿಬೆಸೆಂತರು ಹೇಳಿದರು; “ಆತ ಸಂನ್ಯಾಸಿಯಲ್ಲ, ತಾಯಿ ಭಾರತಿಯ ಅಂತರಾಳದ ಮಾತುಗಳನ್ನಾಡುವ ಯೋಧ”. ಅಮೆರಿಕದ ಪತ್ರಿಕೆ ಬರೆಯಿತು;“ಇವನಂತಹ ಬುದ್ಧಿವಂತರಿರುವ ನಾಡಿಗೆ ಮಿಷನರಿಗಳನ್ನು ಕಳಿಸುವುದೇ ಮೂರ್ಖತನ. ಭರತದಿಂದ ಇವನಂತಹ ಮಿಷನರಿಗಳನ್ನು ನಾವು ಕರೆಸಿಕೊಳ್ಳಬೇಕಷ್ಟೆ!”

ಗುಲಾಮರ ನಾಡಿನಿಂದ ಹೊರಟಿದ್ದವ ಚಕ್ರವರ್ತಿಯಾಗಿಬಿಟ್ಟಿದ್ದ. ತನ್ನ ಹೃದಯ ತುಂಬಿದ್ದ ಪ್ರೇಮದ ಸುಧೆಯಿಂದ ಎಲ್ಲರನ್ನೂ ತೋಯಿಸಿಬಿಟ್ಟಿದ್ದ. ಜರ್ಮನಿಯ ಥಾಮಸ್ ಕುಕ್ ಹೇಳಿದ್ದರು; “ಅದೊಮ್ಮೆ ಅವರ ಕೈಕುಲುಕಿ ಮೂರು ದಿನ ಕೈ ತೊಳೆದುಕೊಂಡಿರಲಿಲ್ಲ. ಆವರ ಪ್ರೇಮದ ಸ್ಪರ್ಷ ಆರದಿರಲೆಂದು!”

ರಕ್ ಫೆಲ್ಲರನಂತಹ ಸಿರಿವಂತರು ಅವನಡಿಗೆ ಬಿದ್ದರು. ಪಾದಗಳಿಗೆ ಅರ್ಪಿತವಾದ ಕುಸುಮವಾದರು. ವಿವೇಕಾನಂದರು ಗರ್ವದಿಂದ ಬೀಗಲಿಲ್ಲ. ಬದಲಿಗೆ ತಾಯಿ ಭಾರತಿಯೆಡೆಗೆ ಮತ್ತಷ್ಟು ಬಾಗಿದ. ನಿಮ್ಮ ಸೇವೆ ಮಾಡಬೇಕೆಂಬ ಮನಸಿದೆ. ಏನು ಮಾಡಲಿ?” ಎಂದು ಕೇಳಿದವರಿಗೆ, “ನನ್ನ ಸೇವೆ ಮಾಡಬೇಕೆಂದರೆ ಭಾರತವನ್ನು ಪ್ರೀತಿಸಿ” ಎಂದ. ಸಿದ್ಧರಾದವರನ್ನು ಕರೆತಂದ. ಹಗಲಿರುಳು ಭಾರತದ ಏಳ್ಗೆಯ ಕುರಿತು ಚಿಂತಿಸಿದ. ಅಮೆರಿಕದ ಬೀದಿಬೀದಿಗಳಲ್ಲಿ ತನ್ನ ಆಳೆತ್ತರದ ಕಟೌಟು ರಾರಾಜಿಸುತ್ತಿದ್ದರೂ ತಾನು ಸರಳವಾಗೇ ಉಳಿದ. ಭಾರತಕ್ಕೆ ಮರಳಿದ. ಭಾರತದ ಜಪ ಮಾಡುತ್ತಲೇ ದೇಹ ತ್ಯಾಗ ಮಾಡಿದ.
ಹಾಗೆ ದೇಹ ಬಿಟ್ಟ ವಿವೇಕಾನಂದರಿಗೆ ಕೇವಲ ಮೂವತ್ತೊಂಭತ್ತು ವರ್ಷ.

ಸ್ವಾಮೀ ವಿವೇಕಾನಂದರು ಚಿಕಾಗೋ ಭಾಷಣ ಮಾಡಿ ಸೆಪ್ಟೆಂಬರ್ ಹನ್ನೊಂದಕ್ಕೆ ನೂರಾ ಹದಿನೈದು ವರ್ಷಗಳಾದವು. ಅದಕ್ಕೇ ಇವೆಲ್ಲ ನೆನಪಾಯ್ತು. ಅಷ್ಟೇ.

– ಚಕ್ರವರ್ತಿ ಸೂಲಿಬೆಲೆ

ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸ

Posted in ನಮ್ಮ ಇತಿಹಾಸ by yuvashakti on ಸೆಪ್ಟೆಂಬರ್ 17, 2008
 

ಸ್ವಾಮಿ ವಿವೇಕಾನಂದರ ಸರ್ವಧರ್ಮ ಸಮ್ಮೇಳನದ ‘ಚಿಕಾಗೋ ಉಪನ್ಯಾಸ’ ಎಂದೇ ಖ್ಯಾತವಾದ ಭಾಷಣದ ಕನ್ನಡಾನುವಾದವಿದು. ಇದನ್ನು ಪರಮ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರ ‘ವಿಶ್ವ ವಿಜೇತ ವಿವೇಕಾನಂದ’ ಪುಸ್ತಕದಿಂದ ಸಂಗ್ರಹಿಸಲಾಗಿದೆ.

 

ವಿವೇಕಾನಂದ

 “ಅಮೆರಿಕದ ಸೋದರಿಯರೇ ಮತ್ತು ಸೋದರರೇ!
ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬೌದ್ಧ ಧರ್ಮ, ಜೈನ ಧರ್ಮಗಳೆರಡೂ ಯಾವುದರ ಶಾಖೆಗಳು ಮಾತ್ರವೋ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತ್ತು ವಿವಿಧ ಜಾತಿ ಮತಗಳಿಗೆ ಸೇರಿದ ಕೋತ್ಯಂತರ ಹಿಂದುಗಳ ಪರವಾಗಿ ನಾನು ನಿಮಗೆ ಖ್ರುತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ, ‘ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತಾಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆ’ ಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

 ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವ ಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದುಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು.

ಪ್ರಪಂಚದ ಎಲ್ಲ ಧರ್ಮಗಳ ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವಿತ್ತ ರಾಷ್ಟ್ರಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ರೋಮನ್ನರ ದಬ್ಬಾಳಿಕೆಗೆ ಗುರಿಯಾಗಿ ತಮ್ಮ ಪವಿತ್ರ ದೇವಾಲಯವು ನುಚ್ಚುನೂರಾದಾಗ ದಕ್ಷಿಣಭಾರತಕ್ಕೆ ವಲಸೆ ಬಂದ ಇಸ್ರೇಲೀಯರ ಒಂದು ಗುಂಪನ್ನು ನಾವು ಆಶ್ರಯಕೊಟ್ಟು ಮಡಿಲಲ್ಲಿಟ್ಟುಕೊಂಡಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ. ಘನ ಜರತೃಷ್ಟ್ರ ಜನಾಂಗದ ಅವಶೇಷಕ್ಕೆ ಆಶ್ರಯವಿತ್ತ ಹಾಗೂ ಅವರನ್ನು ಈಗಲೂ ಪೋಷಿಸುತ್ತಿರುವ ಧರ್ಮಕ್ಕೆ ನಾನು ಸೇರಿದವನೆಂಬುದು ನನ್ನ ಹೆಮ್ಮೆ.

ಸೋದರರೇ, ನಾನು ಬಾಲ್ಯದಿಂದಲೂ ಪಟಿಸುತ್ತಿದ್ದ, ಮತ್ತು ಈಗಲೂ ಲಕ್ಷಾಂತರ ಹಿಂದೂಗಳು ಪಠಿಸುವ ಶ್ಲೋಕವೊಂದರಿಂದ ಕೆಲ ಸಾಲುಗಳನ್ನು ಉದ್ಧರಿಸಿ ನಿಮಗೆ ಹೇಳುತ್ತೇನೆ;
ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣಮತಿ|
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ||
ರುಚೀನಾಂ ವೈಚಿತ್ರ್ಯಾತ್ ಋಜ್ ಕುಟಿಲ ನಾನಾ ಪಥ ಜುಷಾಂ|
ನೃಣಾಮೇಕೋ ಗಮ್ಯಃ ತ್ವಮಸಿ ಪಯಸಾಂ ಅರ್ಣವ ಇವ||

ಎಂದರೆ, “ಹೇ ಭಗವಂತ! ಭಿನ್ನ ಭಿನ್ನ ಸ್ಥಾನಗಳಿಂದ ಉದಿಸಿದ ನದಿಗಳೆಲ್ಲವೂ ಹರಿದು ಕೊನೆಯಲ್ಲಿ ಸಾಗರವನ್ನು ಸೇರುವಂತೆ, ಮಾನವರು ತಮ್ಮತಮ್ಮ ವಿಭಿನ್ನ ಅಭಿರುಚಿಗಳಿಂದಾಗಿ ಅನುಸರಿಸುವ ಅಂಕುಡೊಂಕಿನ ಬೇರೆಬೇರೆ ದಾರಿಗಳೆಲ್ಲವೂ ಕೊನೆಗೆ ಬಂದು ನಿನ್ನನ್ನೇ ಸೇರುತ್ತವೆ”

ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆಸಲ್ಪಟ್ಟ ಮಹಾದ್ಭುತ ಸಮ್ಮೇಳನಗಳಲ್ಲಿ ಒಂದಾದ ಇಂದಿನ ಈ ಸಭೆಯು, ಭಗವದ್ಗೀತೆಯು ಬೋಧಿಸಿರುವ ಈ ಅದ್ಭುತ ತತ್ತ್ವಕ್ಕೆ ಸಾಕ್ಷಿಯಾಗಿದೆ, ಮತ್ತು ಅದನ್ನೇ ಸಾರುತ್ತದೆ;
ಯೇ ಯಥಾಂ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ|
ಮಮ ವರ್ತ್ಯಾನುವರ್ತಂತೇ ಮನುಷ್ಯಾಃ ಪಾರ್ಥಃ ಸರ್ವಶಃ||

ಅರ್ಥ- ‘ಯಾರು ಯಾರು ನನ್ನಲ್ಲಿಗೆ ಯವ ಯವ ಮಾರ್ಗದಿಂದ ಬರುತ್ತಾರೋ ಅವರವರನ್ನು ನಾನು ಅದದೇ ಮಾರ್ಗದಿಂದ ತಲುಪುತ್ತೇನೆ. ಮಾನವರು ಅನುಸರಿಸುವ ಮಾರ್ಗಗಳೆಲ್ಲ ಕೊನೆಗೆ ಬಂದು ಸೇರುವುದು ನನ್ನನ್ನೇ’

ಗುಂಪುಗಾರಿಕೆ, ತಮ್ಮ ಮತದ ಬಗ್ಗೆ ದುರಭಿಮಾನ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂಧತೆಗಳು ಬಹುಕಾಲದಿಂದ ಈ ಸುಂದರ ಭೂಮಿಯನ್ನು ಆಕ್ರಮಿಸಿಕೊಂಡಿವೆ. ಅವು ವಿಶ್ವವನ್ನು ಹಿಂಸೆಯಿಂದ ತುಂಬಿ, ಮತ್ತೆಮತ್ತೆ ಮಾನವನ ರಕ್ತದಿಂದ ತೋಯಿಸಿವೆ; ಅದೆಷ್ಟೋ ನಾಗರಿಕತೆಗಳನ್ನು ನಾಶ ಮಾಡಿವೆ. ದೇಶದೇಶಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಆ ಘೋರ ರಾಕ್ಷಸತನವಿಲ್ಲದಿದ್ದಲ್ಲಿ ಮಾನವ ಸಮಾಜವು ಈಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಮುಂದುವರೆದಿರುತ್ತಿತ್ತು. ಆದರೆ ಈಗ ಆ ರಾಕ್ಷಸತನದ ಅಂತ್ಯಕಾಲ ಸಮೀಪಿಸಿದೆ. ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಿಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ, ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ- ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ”

ಈ ಭಾಷಣ ಅಂದಿನ ಅತ್ಯಂತ ಪ್ರಭಾವೀ ಭಾಷಣವೆಂದು ಪರಿಗಣಿಸಲ್ಪಟ್ಟಿತ್ತು. ಎಲ್ಲ ದೇಶ-ಧರ್ಮಗಳ ಸಭಿಕರು- ಶ್ರೋತೃಗಳು ಸ್ವಾಮೀಜಿಯವರ ತೇಜಸ್ಸಿಗೆ, ವಾಗ್ವೈಖರಿಗೆ, ಪಂಡಿತ್ಯಕ್ಕೆ, ಹಿಂದೂ ಧರ್ಮದ ಶ್ರೇಷ್ಠತೆಗೆ ಮಾರುಹೋದರು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಣದ ಆರಂಭದಲ್ಲಿನ ಅವರ ಸಂಬೋಧನೆ ಅವರೆಲ್ಲರನ್ನೂ ಭಾವೋನ್ನತಿಗೆ ಏರಿಸಿಬಿಟ್ಟಿತ್ತು.

ಈ ಭಾಷಣವನ್ನು ಸ್ವಾಮೀಜಿ ಮಾಡಿದ್ದು ಸಾವಿರಾರು ಶ್ರೋತೃಗಳ ಎದುರಿಗೆ. ಗುಲಾಮಗಿರಿಯಿಂದ ನರಳುತ್ತಿದ್ದ ದೇಶವೊಂದರಿಂದ ಬಂದ ಬಡ ಸಂನ್ಯಾಸಿಯಾಗಿದ್ದರು ಅವರು. ಈ ಹಿನ್ನೆಲೆಯನ್ನೂ, ಭಾಷಣಾನಂತರದ ಪರಿಣಾಮಗಳನ್ನೂ ತಾಳೆ ಹಾಕಿದಾಗ ಸ್ವಾಮಿ ವಿವೇಕಾನಂದರ ಪ್ರಭಾವ ಎಷ್ಟಿತ್ತು ಎನ್ನುವುದು ಅರ್ಥವಾಗುತ್ತದೆ.

9/11- ಅವತ್ತು ಅಮೆರಿಕೆಯೇನು? ಇಡೀ ಜಗತ್ತೇ ನಡುಗಿತ್ತು!

Posted in ನಮ್ಮ ಇತಿಹಾಸ by yuvashakti on ಸೆಪ್ಟೆಂಬರ್ 10, 2008

ನಡುಗಿತ್ತು ಅಮೆರಿಕ…

ಯಾರೇ ಆಗಲಿ, ತಾವು ಎಷ್ಟೇ ಬಲಶಾಲಿಗಳೆಂದು ಬೀಗಿದರೂ ಅವರಿಗಿಂತ ಸರ್ವಶಕ್ತನಾದ ಭಗವಂತನೊಬ್ಬ ಇದ್ದೇ ಇದ್ದಾನೆ.
ಕ್ರೈಸ್ತ ಜನಾಂಗ ವಿಶ್ವದ ಇತರ ರಾಷ್ಟ್ರಗಳ ಮೇಲೆ ದಾಳಿ ಮಾಡಿ, ಹಿಂಸೆಯಿಂದ, ಕುಯುಕ್ತಿಯಿಂದ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿತು. ಕೊಳ್ಳೆಹೊಡೆದ ಹಣದ ಮದದಿಂದಲೇ ಜಗತ್ತನ್ನು ಅಡಿಯಾಳಗಿಸಿಕೊಳ್ಳಲು ಹವಣಿಸಿತು.
ಒಸಾಮಾ ಬಿನ್ ಲ್ಯಾಡೆನ್, ಇಂತಹ ಮದದಿಂದ ಬೀಗುತ್ತಿದ್ದ ಅಮೆರಿಕೆಯ ಮೇಲೇರಿಹೋಗಿ ಭಯೋತ್ಪಾದನೆಯ ಮೂಲಕ (ಅದಂತೂ ಧರ್ಮಾಂಧತೆಯ ಮತ್ತೊಂದು ಮುಖ) ವರ್ಲ್ಡ್ ಟ್ರೇಡ್ ಬಿಲ್ಡಿಂಗನ್ನು ಕೆಡವಿ ಅಮೆರಿಕೆಯನ್ನು ಗಲಗಲ ಅಲುಗಿಸಿಬಿಟ್ಟ. ಎರಡು ಕ್ರೂರ ಜನಾಂಗಗಳು ಧರ್ಮಾಂಧತೆಯ ಅಂಧಕಾರದಲ್ಲಿ ವರ್ತಿಸಿದ ಪರಿ ಇದು. ಹಾಗೆ ಲ್ಯಾಡೆನ್ ವಿಮಾನದ ಮೂಲಕ ಕಟ್ಟಡಗಳ ಮೇಲೆ ತನ್ನ ಬಂಟರನ್ನು ಛೂಬಿಟ್ಟಿದ್ದು, ಈಗ್ಗೆ ಎಳು ವರ್ಷಗಳ ಕೆಳಗೆ, 2001ರ ಸೆಪ್ಟೆಂಬರ್ 11ರಂದು.

ಅವತ್ತು ಇಡೀ ಜಗತ್ತೇ ನಡುಗಿತ್ತು!

ಸುಮಾರು ನೂರಾ ಹದಿನೈದು ವರ್ಷಗಳ ಹಿಂದಿನ ಮಾತು. ಆಗ ಕೂಡ ಜಗತ್ತಿನ ಇತರೆಲ್ಲ ಧರ್ಮಗಳು ನಡುಗಿದ್ದವು. ತಲೆ ತಗ್ಗಿಸಿ ಕುಳಿತಿದ್ದವು. ಆಗ ಯಾವುದೇ ಹಿಂಸೆ ನಡೆದಿರಲಿಲ್ಲ. ಹಾಗೆ ನಡುಗಿಸಿದವನ ಮನದಲ್ಲಿ ಮೌಢ್ಯವಿರಲಿಲ್ಲ, ಆತ ಧರ್ಮಾಂಧನೂ ಆಗಿರಲಿಲ್ಲ.
ಕಾವಿಯುಟ್ಟ, ಉದಾತ್ತ ನಿಲುವಿನ ಆ ವೀರ ಸಂನ್ಯಾಸಿ ತನ್ನ ಧರ್ಮಕ್ಕೆ ತಕ್ಕ ಸಂಸ್ಕಾರದಿಂದ ಜಗತ್ತನ್ನುದ್ದೇಶಿಸಿ ಮಾತನಾಡಿದ್ದ. ನಿಜವಾದ ಧರ್ಮ ಇಂಥದ್ದು ಎಂದು ಗುಡುಗಿದ್ದ. ಆವರೆಗೂ ಭಾರತೀಯರೆಂದರೆ ಹುಟ್ಟಿದ ಮಗುವನ್ನು ಮೊಸಳೆಗೆಸೆಯುವವರು ಎಂಬ ಮೌಢ್ಯಕ್ಕೆ ಬಲಿಯಾಗಿದ್ದ ಜನ ಆ ಸಿಂಹ ವಾಣಿಗೆ ನಡುಗಿಹೋದರು. ಭರತೀಯತೆಯ, ಹಿಂದುತ್ವದ ನೈಜ ಪರಿಚಯ ಅಂದು ಜಗತ್ತಿನ ಮೂಲೆ ಮೂಲೆಗಳನ್ನೂ ತಲುಪಿತು. ತನ್ನ ನಾಡಿನಲ್ಲಿ ನಿರಂತರ ದೌರ್ಜನ್ಯ ನಡೆಸುತ್ತಿದ್ದ ಕ್ರೈಸ್ತರಿಗೆ ಆತ ಅಮೆರಿಕೆಯ ನೆಲದಲ್ಲಿ ನಿಂತು ಛಡಿಯೇಟು ಕೊಟ್ಟಿದ್ದ.
ಅದು, ವಿಶ್ವ ಧರ್ಮ ಸಮ್ಮೆಳನದ ಸಂದರ್ಭ. ಸ್ಥಳ- ಅಮೆರಿಕೆಯ ಚಿಕಾಗೋ, ದಿನಾಂಕ- 1893ರ ಸೆಪ್ಟೆಂಬರ್ 11 !
ಹಾಗೆ ಹಿಂದುತ್ತ್ವದ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ವ್ಯಕ್ತಿ- ಸ್ವಾಮಿ ವಿವೇಕಾನಂದ!!

ಧರ್ಮಾಂಧತೆಗೂ ಧರ್ಮ ಶ್ರದ್ಧೆಗೂ ಎಷ್ಟೊಂದು ವ್ಯತ್ಯಾಸ!?
ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿ ಆಡಿದ ಮಾತುಗಳ ಸಾರಾಂಶ ನೀಡಲಿದ್ದೇವೆ ಕನ್ನಡದಲ್ಲಿ, ಅತಿ ಶೀಘ್ರದಲ್ಲಿ.