ರಾಷ್ಟ್ರ ಶಕ್ತಿ ಕೇಂದ್ರ

‘ಜಾಗೋ ಭಾರತ್’… ಒಂದು ಹೊಸ ಪ್ರಯತ್ನ

Posted in ಕಾರ್ಯಕ್ರಮ- ವರದಿ by yuvashakti on ನವೆಂಬರ್ 18, 2008

ರಾಷ್ಟ್ರ ಪ್ರಜ್ಞೆ ಹೊಂದಿರುವುದು ಅಂದ್ರೆ ಏನು?
ದೈನಂದಿನ ಬದುಕಿನ ಪ್ರತಿಯೊಂದು ಸಂಗತಿಯಲ್ಲೂ ರಾಷ್ಟ್ರದ ಏಳಿಗೆ, ತನ್ಮೂಲಕ ಜಾಗತಿಕ ಪ್ರಗತಿ ಬಯಸುವುದಷ್ಟೆ. ರಾಷ್ಟ್ರ ಪ್ರಜ್ಞಾವಂತರಾಗುವುದೆಂದರೆ ಅದೇನೂ ಘನಘೋರ ವಿಚಾರವಲ್ಲ.
ಸರ್ವೇ ಸಾಧಾರಣ ಜೀವನ ನಡೆಸುತ್ತಲೇ ನಾವು ಇದನ್ನು ಮಾಡಬಹುದು. ದೇಶಹಿತವನ್ನು ಚಿಂತಿಸುವಲ್ಲಿ ನಾವು ಕಳೆದುಕೊಳ್ಳುವಾದದರೂ ಏನು ಹೇಳಿ?

ಹೀಗೆ ಭಾಷಣ, ಸಾಹಿತ್ಯ ಮಾತ್ರವಲ್ಲದೆ ನಾಡು- ನುಡಿಯೆಡೆಗಿನ ಪ್ರೇಮವನ್ನು ಜಾಗೃತಗೊಳಿಸುವ ಇನ್ನಿತರ ಮಾಧ್ಯಮಗಳತ್ತ ಗಮನ ಹೊರಳಿದಾಗ ಉದಿಸಿದ್ದೇ, ‘ಜಾಗೋ ಭಾರತ್’ ಎನ್ನುವ ಕಾನ್ಸೆಪ್ಟು. ಹಾಗಂತ ಈ ಪ್ರಯತ್ನ ಮಾಡ್ತಿರುವವರಲ್ಲಿ ನಾವೇ ಮೊದಲಿಗರೇನಲ್ಲ. ಆದರೆ, ಕನ್ನಡದಲ್ಲಿ ನಮ್ಮದು ವಿಭಿನ್ನ ಪ್ರಯೋಗ ಎಂದು ಹೆಮ್ಮೆಯಿಂದ ಹೇಳಬಲ್ಲೆವು.

ಜಾಗೋ ಭಾರತ್ ತಂಡದ ಸಂಪೂರ್ಣ ಪ್ರಮಾಣದ ಮೊದಲ ಕಾರ್ಯಕ್ರಮ ನಡೆದಿದ್ದು ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ, ನೂರಾರು ಯುವ ವಿದ್ಯಾರ್ಥಿಗಳ ಮುಂದೆ. ಅಂದು ಸಿಕ್ಕ ಸ್ಪಂದನ ನಮ್ಮನ್ನು ಧೈರ್ಯದಿಂದ ಮುನ್ನಡಿಯಿಡುವಂತೆ ಪ್ರೇರೇಪಿಸಿತು. ಈ ಕಾರ್ಯಕ್ರಮದ ವಿವರವನ್ನು ನೀವು ಇಲ್ಲಿ ನೋಡಬಹುದು.

ನಮ್ಮ ತಂಡದ ಎರಡನೆ ಪ್ರಯೋಗ ನಡೆದಿದ್ದು, ಜಯನಗರದ ಮಾನಂದಿ ಸಭಾ ಭವನದಲ್ಲಿ.
ಶ್ರೀ ರಾಘವೇಂದ್ರ ಶೆಣೈ ಅವರು ಸ್ವಾಮಿ ರಾಮ ತೀರ್ಥ ಫೌಂಡೇಶನ್ ವತಿಯಿಂದ ಪ್ರತಿ ಮೂರನೆಯ ಶನಿವಾರದಂದು ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಈ ಬಾರಿ ರಾಜ್ಯೋತ್ಸವದ ಅಂಗವಾಗಿ ನಮ್ಮ ತಂಡದಿಂದ ‘ನಿತ್ಯೋತ್ಸವ’ ಎನ್ನುವ ಕಾರ್ಯಕ್ರಮದ ಅಯೋಜನೆಯಾಗಿತ್ತು.
ಆರಂಭದಲ್ಲಿ ‘ಜೈ ಭರತ ಜನನಿಯ ತನುಜಾತೆ’ ಸಮೂಹ ಗಾನ. ಅನಂತರ ‘ಹಚ್ಚೇವು ಕನ್ನಡದ ದೀಪ…’ ಎನ್ನುತ್ತ ಸಭಿಕರಲ್ಲಿ ಭಾವೋದ್ದೀಪನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.
ಕವಿ ರಾಜ ಮಾರ್ಗದಿಂದ ಆರಂಭವಾದ ಗೀತ ಗಾಯನ, ನಿಸಾರರ ನಿತ್ಯೋತ್ಸವ ಗೀತೆಯೊಂದಿಗೆ ಮುಕ್ತಾಯಗೊಂಡಿತು. ಗಣೇಶ್ ದೇಸಾಯಿ ಅತ್ಯಂತ ಸ್ಫುಟವಾಗಿ ಕವಿರಾಜ ಮಾರ್ಗದ ಚರಣವೊಂದನ್ನು ಹಾಡಿದರು. ಮಾಲಿನಿ ಕೇಶವ ಪ್ರಸಾದರು ಕುಮಾರ ವ್ಯಾಸ ಭಾರತದ ಗಮಕವನ್ನು ಹಾಡಿದರು. ಹೀಗೆ ಹಳೆಗನ್ನಡದಿಂದ ಇಂದಿನವರೆಗಿನ ಒಟ್ಟು ಹನ್ನೆರಡು ಗೀತೆಗಳನ್ನು ಪ್ರಸ್ತುತಪಡಿಸಲಾಯ್ತು. ಇದಕ್ಕೆ ಸರಿಯಗಿ ಚಕ್ರವರ್ತಿ ಸೂಲಿಬೆಲೆ ಅವರ ಕಥನ ಶೈಲಿಯ ನಿರೂಪಣೆ, ಗೀತೆಗಳ ಅರ್ಥೈಸುವಿಕೆಗೊಂದು ಭೂಮಿಕೆ ಒದಗಿಸಿಕೊಡುತ್ತಿತ್ತು. ಅವರು, ಖ್ಯಾತ ಕವಿಗಳ ಜೀವನ ಚಿತ್ರಣವನ್ನು ಬಿಡಿಸಿಡುತ್ತಾ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದ್ದು ಬಹಳ ಸ್ವಾರಸ್ಯಕರವಾಗಿತ್ತು.

ಗಣೇಶ್ ದೇಸಾಯಿ ಅವರ ‘ಬ್ರಮ್ಮ ನಿಂಗೆ ಜೋಡಿಸ್ತೀನಿ..’ ಗಾಯನ ಕೇಳುಗರನ್ನು ಮತ್ತರನ್ನಾಗಿಸಿಬಿಟ್ಟಿತ್ತೆಂದರೆ ಅತಿಶಯವಲ್ಲ. ಅದಕ್ಕೆ ಸರಿಯಾಗಿ ಪಕ್ಕ ವಾದ್ಯಗಳೂ ಭರ್ಜರಿ ಸಾಥು ಕೊಟ್ಟವು. ಮಾಲಿನಿ, ‘ನಾಗರ ಹಾವೇ, ಹಾವೊಳು ಹೂವೇ…’ ಎನ್ನುತ್ತ ಮೈಮರೆಸಿದರೆ, ಭವಾನಿ ಹೆಗಡೆ- ಕರುಣಾಳು ಬಾ ಬೆಳಕೆ ಹಾಡಿ ತಣಿಸಿದರು. ಇದೇ ಮಾಲಿನಿ ಅವರು ಟೀಚರ್ಸ್ ಕಾಲೇಜಿನ ಕಾರ್ಯಕ್ರಮದಲ್ಲಿ ‘ಐ ಲವ್ ಮೈ ಇಂಡಿಯಾ…’ ಹಾಡಿ ಅಪಾರ ಮೆಚ್ಚುಗೆ ಗಳಿಸಿದ್ದರು.

ಸಂಜೆ ಆರೂವರೆಗೆ ಆರಂಭವಾದ ಕಾರ್ಯಕ್ರಮ ಮುಗಿದಿದ್ದು ರಾತ್ರಿ ಒಂಭತ್ತಕ್ಕೆ! ಅಲ್ಲೀವರೆಗೂ ಜಯನಗರಿಗರು ಉಲ್ಲಾಸದಿಂದ ಕುಳಿತಿದ್ದರು. ಅಲ್ಲಿನ ಶಾಸಕ ಶ್ರೀ ವಿಜಯ್ ಕುಮಾರ್ ಅವರೂ ಕೊನೆವರೆಗೆ ಕುಳಿತಿದ್ದು, ವೇದಿಕೆಯೇರಿ ಮೆಚ್ಚುಗೆಯ ಮಾತುಗಳನ್ನಾಡಿದ್ದೊಂದು ವಿಶೇಷ.

ಜಾಗೋ ಭಾರತ್ ತಂಡದ ವೈಶಿಷ್ಟ್ಯವೆಂದರೆ, ಕೇವಲ ನಾಡುನುಡಿಗೆ ಸಂಬಂಧಿಸಿದಂತಹ ವಿಶಿಷ್ಟ ಹಾಡುಗಳ ಗಾಯನ. ಅದು ಸಿನೆಮಾದ್ದಾಗಿದ್ದರೂ ಸರಿಯೇ. ‘ಒಳ್ಳೆಯದು ಎಲ್ಲ ಕಡೆಯಿಂದಲೂ ಬರಲಿ’ ಎನ್ನುವುದು ನಮ್ಮ ಆಶಯ. ಚಕ್ರವರ್ತಿಯ ನಿರೂಪಣೆ ಈ ತಂಡದ ಕಾರ್ಯಕ್ರಮಗಳಿಗೊಂದು ಗರಿ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ತಂಡದ ಕಾರ್ಯಕ್ರಮಗಳು ಚಿತ್ರದುರ್ಗ, ಚಿಕ್ಕ ಮಗಳೂರು ಮತ್ತು ಮೈಸೂರುಗಳಲ್ಲಿ ನಡೆಯಲಿವೆ.

‘ಜಾಗೋ ಭಾರತ್’, ರಾಷ್ಟ್ರ ಶಕ್ತಿ ಕೇಂದ್ರದ ಮನರಂಜನಾ ವಿಭಾಗ. ಇದೊಂದು ಸಾಂಘಿಕ ಪ್ರಯತ್ನ.
ನಿಮ್ಮೆಲ್ಲರ ಸಹಕಾರವನ್ನು ಅಪೇಕ್ಷಿಸುತ್ತಾ….

ವಂದೇ.
ರಾಷ್ಟ್ರ ಶಕ್ತಿ ಕೇಂದ್ರ ಬಳಗದ ಪರವಾಗಿ,
ಚೇತನಾ ತೀರ್ಥಹಳ್ಳಿ.

ಭಾರತ ಭಾಗ್ಯ ವಿಧಾತರು-೩

Posted in ನಮ್ಮ ಇತಿಹಾಸ by yuvashakti on ನವೆಂಬರ್ 17, 2008

ವಿನೋಬಾ ಭಾವೆ

’ಭೂ ದಾನ’ ಚಳವಳಿಯ ಹರಿಕಾರ ಎಂದು ಖ್ಯಾತರಾಗಿರುವವರು ಶ್ರೀ ವಿನೋಬಾ ಭಾವೆ.  ಇವರು ಜನಿಸಿದ್ದು ಮಹಾರಾಷ್ಟ್ರದ ಕೋಲಬಾ ಜಿಲ್ಲೆಯ ಗಾಗೋದೆ ಗ್ರಾಮದಲ್ಲಿ .  ಬಾಲ್ಯದಲ್ಲಿಯೇ eನೇಶ್ವರಿಯ ಅಧ್ಯಯನ ಮಾಡಿ ಅರಗಿಸಿಕೊಂಡಿದ್ದರು.  ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಗಾಂಧೀಜಿಯವರ ಅನುಯಾಯಿಯಾಗುವುದರೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಭಾವೆ ಅನಂತರ ತಿರುಗಿ ನೋಡಲಿಲ್ಲ.

ವಿನೋಬಾ ಭಾವೆ ಸಮರ್ಥ ಲೇಖಕರಾಗಿದ್ದರು.  ೧೯೨೩ ರಲ್ಲಿ ’ಮಹಾರಾಷ್ಟ್ರ ಧರ್ಮ’ ಪತ್ರಿಕೆಯ ಸಂಪಾದಕರಾದರು.  ನಾಗಪುರದ ’ಧ್ವಜಸತ್ಯಾಗ್ರಹ’ ದಲ್ಲಿ ಬಂಧಿತರಾದರು ಮತ್ತು ಕೇರಳದ ’ವೈಕೋಮ್ ಸತ್ಯಾಗ್ರಹ’ಕ್ಕೆ ಹೊರಟುನಿಂತರು.  ಇವೆಲ್ಲದರ ನಡುವೆಯೂ ನಿರಂತರ ಅಧ್ಯಯನಶೀಲರಾಗಿದ್ದ ಅವರು ಮರಾಠಿಯಲ್ಲಿ ಗೀತಾಭಾಷ್ಯ ಬರೆದರು. 
 
ವಿನೋಬಾ ಭಾವೆ ಒಬ್ಬ ಹಠವಾದಿ ಸತ್ಯಾಗ್ರಹಿ.  ಅಹಿಂಸಾ ಮಾರ್ಗದಲ್ಲಿ ಅಪ್ರತಿಮ ನಿಷ್ಠೆಯಿರಿಸಿದ್ದರು. ಉಪವಾಸ ಸತ್ಯಾಗ್ರಹದಲ್ಲಿ ಇವರು ಅಗ್ರಗಣ್ಯರು. ವಿನೋಬಾ ಅವರು ಜಾತೀಯತೆಯ ಭೇದ ಅಳಿಸಿ ಎಲ್ಲರೂ ಸೌಹಾರ್ದದಿಂದ ಬಾಳಬೇಕೆಂಬ ಕನಸು ಕಟ್ಟಿ ಅದನ್ನು ನೆರವೇರಿಸಲು ಅವರು ಹರಿಜನರೊಡನೆ ವಿವಿಧ ಮತೀಯರೊಡನೆ ದೇವಾಲಯಗಳಿಗೆ ಪ್ರವೇಶಿಸಿ ಮತ್ತೆ ಮತ್ತೆ  ಸೆರೆವಾಸ ಅನುಭವಿಸಿದರು. ಆದರೆ ಅವರ ಪ್ರಯತ್ನಗಳು ಎಲ್ಲರ ಮನ್ನಣೆಗಳಿಸಿ ಹೊಸ ಕ್ರಾಂತಿಗೆ ನಾಂದಿಯಾಯಿತು.

ಸಂತರಂತೆ ಬಾಳಿದ್ದ ವಿನೋಬಾರವರ ಅಂತಃಸತ್ತ್ವ ಬಹಳ ಪ್ರಭಾವಶಾಲಿಯಾಗಿತ್ತು , ೧೯೬೦ರಲ್ಲಿ ಚಂಬಲ್  ಕಣಿವೆಯ ಡಕಾಯಿತರು, ೧೯೭೨ರಲ್ಲಿ ವಿವಿಧ ಭಾಗದ ನೂರಾರು ಡಕಾಯಿತರು ಅವರಿಗೆ ಶರಣುಬಂದಿದ್ದು ಅದಕ್ಕೊಂದು ಉದಾಹರಣೆ. ಈ ಡಕಾಯಿತರೆಲ್ಲರೂ ಮುಂದೆ ಭಾವೆಯವರ ಸಹವಾಸದಲ್ಲಿ ಜೀವನ ಕಳೆದರು. ೧೯೫೧ರಲ್ಲಿ ’ಭೂದಾನ ಚಳುವಳಿ’ಗೆ ಚಾಲನೆ ನೀಡಿದ ಭಾವೆಗೆ ಅದನ್ನು ವ್ಯಾಪಕಗೊಳಿಸಿ ಅಸಂಖ್ಯ ಭೂದಾನಕ್ಕೆ ಪ್ರೇರಣೆ ನೀಡಿದರು.  ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಓಡಾಡಿದರು.  ಸಹಸ್ರಾರು ಸಾಮಾಜಿಕ ಕಾರ್ಯಕರ್ತರಿಗೆ ಪ್ರೇರಣೆಯಾಗಿ ನಿಂತರು.  ಎಂಬತ್ತೇಳು ವರ್ಷಗಳ ಸಾರ್ಥಕ ಜೀವನ ನಡೆಸಿದ ವಿನೋಬಾ ಭಾವೆಯವರು ೧೯೮೭ರಲ್ಲಿ ಕಾಲವಶರಾದರು.

ಮಹಾತ್ಮಾ ಗಾಂಧಿ

ಮಹಾತ್ಮಾ ಗಾಂಧಿ ಎಂದು ವಿಶ್ವಾದ್ಯಂತ ಚಿರಪರಿಚಿತವಾಗಿರುವ ಮೋಹನದಾಸ್ ಕರಮಚಂದ ಗಾಂಧಿಯವರು ೧೮೬೯ ರಲ್ಲಿ ಗುಜರಾತಿನ ಪೋರ್‌ಬಂದರಿನಲ್ಲಿ ಜನಿಸಿದರು.  ಬ್ಯಾರಿಸ್ಟರ್ ಪದವಿ ಗಳಿಸುವ ಸಲುವಾಗಿ ಇಂಗ್ಲೆಂಡಿಗೆ ತೆರಳಿದ ಕರಮಚಂದರು ವಕೀಲಿ ವೃತ್ತಿ ಆರಂಭಿಸಿದ್ದು ದಕ್ಷಿಣ ಆಫ್ರಿಕಾದ ಡರ್ಬನ್ನಿನಲ್ಲಿ.  ಅಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬ್ರಿಟೀಷರಿಂದ ಆದ ಅವಮಾನ ಅವರ ಜೀವನದಲ್ಲಿ ಮಹತ್ತರ ತಿರುವು ನೀಡಿತು. ದಕ್ಷಿಣ ಆಫ್ರಿಕಾದಲ್ಲಿ ಮೊದಲಬಾರಿಗೆ ’ಸತ್ಯಾಗ್ರಹ’ ಹೋರಾಟ ಆರಂಭಿಸಿದ ಗಾಂಧೀಜಿ ಭಾರತಕ್ಕೆ ಮರಳಿದ ನಂತರ ಇಲ್ಲಿಯೂ ಅದನ್ನು ಮುಂದುವರೆಸಿದರು.

ಗಾಂಧೀಜಿ ಭಾರತಕ್ಕೆ ಮರಳಿದ ಸಮಯದಲ್ಲಿಯೇ ಬಾಲಗಂಗಾಧರ ತಿಲಕರ ನಿಧನವಾಯಿತು.  ಭಾರತದ ಜನತೆ ಹೊಸ ನಾಯಕನ ಅಗತ್ಯದಲ್ಲಿತ್ತು. ಗಾಂಧೀಜಿ ಆ ಸ್ಥಾನವನ್ನು ತುಂಬಿದರು.  ೧೯೨೧ ರಿಂದ ಸತ್ಯಾಗ್ರಹ ಚಳುವಳಿಯನ್ನು ವ್ಯಾಪಕಗೊಳಿಸಿದ ಗಾಂಧೀಜಿ ಅಸಹಕಾರ ಆಂದೋಲನಕ್ಕೆ  ಕರೆನೀಡಿದರು.  ರಾಜದ್ರೋಹದ ಆಪಾದನೆ ಹೊತ್ತು ಮತ್ತೆ ಮತ್ತೆ ಸೆರೆವಾಸ ಅನುಭವಿಸಿದರು.

ಗಾಂಧೀಜಿ ನಡೆಸಿದ ಹೋರಾಟಗಳಲ್ಲಿ ಉಪ್ಪಿನ ಸತ್ಯಾಗ್ರಹ (ದಂಡಿ -೧೯೩೦) ಚಲೇಜಾವ್ ಚಳುವಳಿ (೧೯೪೨) ಪ್ರಮುಖವಾದವು. ಅಹಿಂಸಾತ್ಮಕ ಹೋರಾಟ ಮಾತ್ರದಿಂದಲೇ ಸ್ವಾತಂತ್ರ ಪ್ರಾಪ್ತಿಯಾಗಬೇಕೆಂಬ ಬಯಕೆ ಹೊಂದಿದ್ದ ಅವರು ತಾವು ಆರಂಭಿಸಿದ ಚಳುವಳಿಗಳು ಹಿಂಸೆಯ ಸ್ವರೂಪಕ್ಕೆ ತಿರುಗಿದಾಗ ಅದನ್ನು ಹಿಂಪಡೆದರು.  ಅಸಹಕಾರ ಚಳುವಳಿ, ಚಲೇಜಾವ್ ಚಳುವಳಿಗಳೆರಡೂ ಹಾಗಯೇ ಆದವು.

ಮಹಾತ್ಮಾಗಾಂಧಿಯವರು ಸ್ವದೇಶೀಯತೆ ಮತ್ತು ಸ್ವಾವಲಂಬನೆಗಳಿಗೆ  ಹೆಚ್ಚಿನ ಒತ್ತು ಕೊಟ್ಟರು.  ತಾವು ಆರಂಭಿಸಿದ ಆಶ್ರಮದಲ್ಲಿ ಸ್ವತಃ ತಾವೇ ಚರಕದಲ್ಲಿ ನೂಲುವ ಮೂಲಕ ಇತರರಿಗೂ ಮಾದರಿಯಾಗಿ ನಿಂತರು.  ಅವರ ಶಿಕ್ಷಣದ ಬಗೆಗಿನ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ. ಗಾಂಧೀಜಿ ಮದ್ಯಪಾನವೂ ಸೇರಿದಂತೆ ಸಮಾಜಕ್ಕೆ ಮಾರಕವೆನಿಸುವಂತಹ ದುರ್ನಡತೆ, ಮೌಢ್ಯಾಚರಣೆಗಳನ್ನು  ಪ್ರಬಲವಾಗಿ ಖಂಡಿಸಿದರು. 

ಲಕ್ಷೋಪಲಕ್ಷ ಭಾರತೀಯರ ಹೋರಾಟ, ಬಲಿದಾನಗಳ ಪರಿಣಾಮವಾಗಿ ೧೯೪೭ರಲ್ಲಿ ಆಗಷ್ಟ್ ೧೫ ರಂದು ಭಾರತ ಸ್ವತಂತ್ರವಾಯಿತು, ಜೊತೆಗೇ ಭಾರತ ವಿಭಜನೆಯ ದುರಂತವೂ ನಡೆಯಿತು. ಈ ಸಂದರ್ಭಗಳಲ್ಲಿ ಅನೇಕ ಹಿಂದೂಗಳ ಮಾರಣಹೋಮವಾಯಿತು.  ಇದಕ್ಕೆ ಪ್ರತೀಕಾರವೆಂಬಂತೆ ನಾಥೂರಾಮ್ ಗೂಡ್ಸೆ ಎನ್ನುವಾತನು ೧೯೪೮ರ ಜನವರಿ ೩೦ರಂದು ಮಹಾತ್ಮನನ್ನು ಗುಂಡಿಕ್ಕಿ ಕೊಂದು ಬಿಟ್ಟನು.    

ಗಾಂಧೀಜಿಯವರ ಹೋರಾಟ ತತ್ತ್ವ ಚಿಂತನೆಗಳು ಎಲ್ಲ ಕಾಲಕ್ಕೂ , ಎಲ್ಲ ರಾಷ್ಟ್ರಗಳಿಗೂ ಮಾದರಿಯಾಗಿವೆ.

ಶ್ರೀ ಮಾತೆ ಮಿರಾ ಅದಿತಿ

ಯೋಗಿ ಅರವಿಂದರ ಆಧ್ಯಾತ್ಮಿಕ ಜೀವನದ ಕುರಿತು ಹೇಳುವಾಗ ಶ್ರೀ ಮಾತೆ ಮಿರಾ ಅದಿತಿಯವರನ್ನು ಉಲ್ಲೇಖಿಸದೇ ಹೋದರೆ ಅದು ಅಪೂರ್ಣವಾದಂತೆಯೇ ಸರಿ.  ೧೮೭೮ ರಲ್ಲಿ ಪ್ಯಾರಿಸ್ಸಿನಲ್ಲಿ ಜನಿಸಿದ ಮಿರಾ ರಿಚರ್ಡ್ ಮೊದಲ ಬಾರಿಗೆ ಪಾಂಡಿಚೇರಿಯ ಅರವಿಂದೋ ಆಶ್ರಮಕ್ಕೆ ಭೇಟಿ ಇತ್ತಿದ್ದು ತಮ್ಮ ೩೬ ನೇ ವಯಸ್ಸಿನಲ್ಲಿ ಪಾಶ್ಚಾತ್ಯ ಸಿರಿವಂತ ಕುಟುಂಬದಲ್ಲಿ ವೈಭೋಗದ ಜೀವನ ನಡೆಸುವ ದಂಪತಿಗಳ ಪುತ್ರಿಯಾಗಿದ್ದರೂ ಬಾಲ್ಯದಿಂದಲೂ ಅವರಲ್ಲಿ ಕೆಲವು ಅಲೌಕಿಕ ಗುಣಗಳು ಸಂಪನ್ನವಾಗಿದ್ದವು.  ಮಿರಾ ಅವರ ಪ್ರಥಮ ಭೇಟಿಯಲ್ಲಿಯೇ ಶ್ರೀ ಅರವಿಂದರು ಈ ವೈಶಿಷ್ಟವನ್ನು ಗುರುತಿಸಿದ್ದರು.  
 
೧೯೨೦ ರಲ್ಲಿ ಮಿರಾ ಅವರು ಶಾಶ್ವತವಾಗಿ ಭಾರತದಲ್ಲಿ  ನೆಲೆಸುವ ಪಾಂಡಿಚೆರಿ ಆಶ್ರಮದ ಏಳ್ಗೆಗಾಗಿ, ಆಮೂಲಕ ಶ್ರೀ ಅರವಿಂದರ ’ಪೂರ್ಣ ಯೋಗ’ದ ಪ್ರಸರಣಕ್ಕಾಗಿ ಟೊಂಕಕಟ್ಟಿ ನಿಂತರು.

ಶ್ರೀ ಅರವಿಂದರು ಮಿರಾ ಅವರನ್ನು ತಮಗೆ ಸಮನಾದ ಸಾಧಕಿ ಎಂದೇ ಪರಿಗಣಿಸುತ್ತಿದ್ದರು.  ಶ್ರೀ ಮಾತೆ ಮಿರಾ ಅವರಲ್ಲಿ ಆ ಸಾಮರ್ಥ್ಯವಿದ್ದೇ ಇತ್ತು ಅವರ ಆದೇಶದಂತೆ ಶ್ರೀ ಮಾತೆಯವರು ೧೯೨೬ ರಲ್ಲಿ  ಅರವಿಂದೋ ಆಶ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರು.  ಮುಂದಿನ ದಿನಗಳಲ್ಲಿ ’ಶ್ರೀ ಅರವಿಂದೋ ಇಂಟರ್ ನ್ಯಾಶನಲ್ ಸೆಂಟರ್ ಆಫ್ ಎಜುಕೇಷನ್’ ಸಂಸ್ಥೆಯನ್ನು ಆರಂಭಿಸಿ ವಿಶ್ವಾದ್ಯಂತ ಶಿಕ್ಷಣಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಟ್ಟರು.  ಅರವಿಂದರು ಇಹಲೋಕ ವ್ಯವಹಾರ ಮುಗಿಸಿ ದೀರ್ಘಸಮಾಧಿಗೆ ತೆರಳಿದ ನಂತರ ಶ್ರೀ ಮಾತೆಯವರು ಆಶ್ರಮದ ಅನುಯಾಯಿಗಳಿಗೆ ಪಥದರ್ಶಕರಾಗಿ ಮುಂದುವರೆದರು.

ಮನುಕುಲದ ಐಕ್ಯತೆಯ ಸದುದ್ಧೇಶದಿಂದ ಶ್ರೀ ಮಾತೆಯವರು ಆರಂಭಿಸಿದ ’ಅರೋವಿಲ್ಲ’ ನಿರ್ಮಾಣಕ್ಕೆ ಯುನೆಸ್ಕೋ ಸಹಾಯ ಹಸ್ತ ಚಾಚಿತು ಜಗತ್ತಿನ ಎಲ್ಲಾ ಭಾಗದ, ಎಲ್ಲಾ ವರ್ಗದ, ಎಲ್ಲಾ ವಿಧದ ಜನರು ಶಾಂತಿ-ಸೌಹಾರ್ದದಿಂದ ಬಾಳಬೇಕು ಎನ್ನುವುದು ಈ ನಿರ್ಮಾಣದ ಹಿಂದಿನ ಉದ್ಧೇಶವಾಗಿತ್ತು ೧೯೬೮ ರಲ್ಲಿ ಉದ್ಘಾಟನೆಗೊಂಡ ’ಅರೋವಿಲ್ಲ’ ಉದ್ಘಾಟನಾ ಸಮಾರಂಭದಲ್ಲಿ ೧೨೧ ದೇಶಗಳ ಮತ್ತು ಭಾರತದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ತಮ್ಮ ತಮ್ಮ ಪ್ರಾಂತ್ಯದಿಂದ ಒಂದು ಮುಷ್ಟಿ ಮಣ್ಣನ್ನು ತಂದು ಆ ಪ್ರದೇಶದಲ್ಲಿ ಸ್ಥಾಪಿಸಿದ್ದರು.  ಇಂದಿಗೆ ಅರೋವಿಲ್ಲ ಪ್ರದೇಶದಲ್ಲಿ ೩೫ ರಾಷ್ಟ್ರಗಳ ಸುಮಾರು ೧೭೦೦ ಜನರು ನೆಲೆಸಿರುವರು.

ಶ್ರೀ ಮಾತೆ ಮೀರಾ ಅದಿತಿ ಅವರು ತಮ್ಮ ೯೫ ನೆಯ ವಯಸ್ಸಿನಲ್ಲಿ ನಿಧನರಾದರು.

ಭಾರತ ಭಾಗ್ಯವಿಧಾತರು- ೨

Posted in ನಮ್ಮ ವೀರರು by yuvashakti on ನವೆಂಬರ್ 12, 2008

ಚಾಫೇಕರ್ ಸಹೋದರರು

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾವು ಆರಿದ ನಂತರ ಮೊತ್ತ ಮೊದಲ ಕ್ರಾಂತಿ ಕಹಳೆ ಊದಿದ್ದು ವಾಸುದೇವ ಫಡ್ಕೆ.  ಅದನ್ನು ಮುಂದುವರಿಸಿದ್ದು ಚಾಫೇಕರ್ ಸಹೋದರರು.  ಮಹಾರಾಷ್ಟ್ರದಲ್ಲಿ ಜನಿಸಿದ ದಾಮೋದರ, ಬಾಲಕೃಷ್ಣ, ವಾಸುದೇವ ಎಂಬ ಈ ಮೂವರು ಸಹೋದರರು ಬಲಿದಾನದ ಪಾಠವನ್ನು ಸಾರಿ ಸ್ಫೂರ್ತಿ ತುಂಬಿದವರು.  ಸ್ವಾತಂತ್ರ್ಯ ಹೋರಾಟಕ್ಕೆ ಸಮರ್ಪಣೆಯಾಗಬೇಕೆಂಬ ಅಸೀಮ ಉತ್ಸಾಹಕರೊಂದಿಗೆ ಅದಕ್ಕೆ ಅಗತ್ಯವಿರುವ ಪ್ರತಿಯೊಂದನ್ನೂ ರೂಢಿಸಿಕೊಂಡರು.  ಅವರು ಒಬ್ಬೊಬ್ಬರೂ ಪ್ರತಿ ದಿನವೂ ೧೨೦೦ ಸೂರ್ಯ ನಮಸ್ಕಾರಗಳನ್ನು ಹಾಕುತ್ತ ತಮ್ಮ ಶರೀರವನ್ನು ಹುರಿಗೊಳಿಸಿಕೊಂಡಿದ್ದರು, ಕೀರ್ತನೆ ನಡೆಯುತ್ತ ತಂದೆಯೊಂದಿಗೆ ಊರೂರು ಸುತ್ತುತ್ತಿದ್ದ ಅವರು ಈ ಪ್ರವಾಸಗಳಿಂದಲೇ ಸಾಕಷ್ಟು ಅನುಭವ ಗಳಿಸಿದರು, ’ಚಾಫೇಕರ್ ಕ್ಲಬ್’ ಆರಂಭಿಸಿ, ಗೆಳೆಯರನ್ನು ಕಲೆಹಾಕಿ ಕ್ರಾಂತಿಕಾರ್ಯಕ್ಕೆ ಸಜ್ಜಾದರು.  ಈ ಕಾಲಕ್ಕೆ ಹಿರಿಯ ದಾಮೋದರನಿಗೆ ೨೬ ವರ್ಷ, ಮಧ್ಯಮನಿಗೆ ೨೨ ವರ್ಷ, ಕಿರಿಯವನಿಗೆ ಕೇವಲ ೧೬ ವರ್ಷ!

ಮಹಾರಾಷ್ಟ್ರಕ್ಕೆ ತಗುಲಿಕೊಂಡ ಪ್ಲೇಗ್ ಮಾರಿ ದುಷ್ಟ ಅಧಿಕಾರಿ ರ್‍ಯಾಂಡನ್‌ನ ಕ್ರೂರ ಮುಖವನ್ನು ಪರಿಚಯಿಸಿತು. ರೋಗ ನಿರ್ಮೂಲನೆ ಹೆಸರಿನಲ್ಲಿ ಆತ ರೋಗಿಗಳ ಸಹಿತ ಅವರ ಮನೆಗಳನ್ನು ಸುಟ್ಟು ಹಾಕುವಂತೆ ಆದೇಶ ನೀಡಿಬಿಟ್ಟ! ಔಷಧ, ಅನ್ನ-ನೀರಿಗೂ ಕೊರತೆಯಾಗತೊಡಗಿತು.  ಜನರಿಗೆ ಅಕ್ಷರಶಃ ’ನರಕ’ದರ್ಶನವಾಗತೊಡಗಿತು.  ರ್‍ಯಾಂಡನ್‌ನ ಸಂಹಾರವಾಗದೆ ಅವರಿಗೆ ಮುಕ್ತಿಯೇ ಇರಲಿಲ್ಲ.  ಚಾಫೇಕರ್ ಸಹೋದರರು ತಡಮಾಡಲಿಲ್ಲ.  ಸೂಕ್ತ ಮುಹೂರ್ತ ಆರಿಸಿ ತೆಗೆದರು. ಧ್ಯಾನ, ಜಪ ಪೂರೈಸಿ, ಉಪವಾಸ ಮಾಡಿ ಯಶಸ್ಸಿಗೆ ಪ್ರಾರ್ಥಿಸಿದರು.  ವಿಕ್ಟೋರಿಯಾ ರಾಣಿಯ ಪಟ್ಟಾಭಿಷೇಕದ ವಜ್ರಮಹೋತ್ಸವದ ಆಚರಣೆಗೆ ಬಂದಿದ್ದ ರ್‍ಯಾಂಡನ್ ಪಾಲಿಗೆ ಆ ದಿನವೇ ಕೊನೆಯ ದಿನವಾಗಿತ್ತು.   ದಾಮೋದರ, ವಾಸುದೇವರು ಅವನ ಕಥೆ ಮುಗಿಸಿದರು. ಆದರೆ, ಚಾಣಾಕ್ಷಮತಿಗಳಾಗಿದ್ದ ಅವರು ಸಿಕ್ಕಿಬೀಳಲಿಲ್ಲ.  ಈ ನಡುವೆ ಗಣೇಶ ಶಂಕರ ದ್ರವಿಡ ಎಂಬ ದ್ರೋಹಿ ’ಚಾಫೇಕರ್ ಕ್ಲಬ್’ ವಿವರಗಳನ್ನು ಪೋಲಿಸರಲ್ಲಿ ಬಹಿರಂಗಗೊಳಿಸಿದ. ವಿಚಾರಣೆ ನಾಟಕ ನಡೆದು ದಾಮೋದರನಿಗೆ ಮರಣದಂಡನೆ ವಿಧಿಸಲಾಯ್ತು. ೧೮೯೮ ರ ಏಪ್ರಿಲ್ ೧೮ ರಂದು ಫಾಸಿಯಾಯ್ತು. ಈ ವೇಳೆಗೆ ರ್‍ಯಾಂಡನ್ ಹತ್ಯೆ ಸಂದರ್ಭದಲ್ಲಿ ಸಂಹರಿಸಲ್ಪಟ್ಟಿದ್ದ ಆರ್ಯಸ್ಟನ್ ಸಾವಿಗೆ ಬಾಲಕೃಷ್ಣನನ್ನು ಆರೋಪಿಯನ್ನಾಗಿಸಲಾಗಿತ್ತು, ಪೋಲಿಸರು ಅವನ ತಲಾಷೆಯಲ್ಲಿದ್ದರು.

ದ್ರವಿಡ ಸಹೋದರರ ವಿದ್ರೋಹ ಚಾಫೇಕರ್ ಸಹೋದರರಿಗೆ ಕಿಚ್ಚು ಹಚ್ಚಿತ್ತು. ಉಪಾಯದಿಂದ ಯೋಜನೆ ಹೆಣೆದ ಅವರು, ಅವರಿಬ್ಬರನ್ನು ಕೊಂದು ದ್ರೋಹಕ್ಕೆ ತಕ್ಕ ಶಿಕ್ಷೆ ವಿಧಿಸಿದರು.  ಮುಂದೆ ಬಾಲಕೃಷ್ಣ ಮತ್ತು ವಾಸುದೇವ ಬಂಧನವಾಯಿತು.  ಒಂದು ತಿಂಗಳ ಅವಧಿಯಲ್ಲಿಯೇ( ವಾಸುದೇವ- ೮/೫/೧೮೯೯, ಬಾಲಕೃಷ್ಣ ೧೨/೫/೧೮೯೯) ಅವರಿಬ್ಬರಿಗೂ ಫಾಸಿಯಾಯ್ತು.  ಅವರಿಗೆ ಸಹಕಾರ ನೀಡಿದ್ದ ರಾನಡೆ ಎಂಬಾತನೂ ಗಲ್ಲಿಗೇರಿಸಲ್ಪಟ್ಟ.
ಹೀಗೆ ಮಾತೃಭೂಮಿಯ ಪೂಜೆಗಾಗಿ ಒಂದೇ ಕುಟುಂಬದ ಮೂರು ಪುಷ್ಪಗಳು ಅರ್ಪಣೆಯಾದವು.

      ಶ್ರೀ ನಾರಾಯಣ ಗುರು

 ಪ್ರವಾದಿ, ಸಂತ, ಋಷಿ, ಸಮಾಜಸುಧಾರಕ… ಹೀಗೆ ಹಲವು  ಬಗೆಯಲ್ಲಿ ಗುರುತಿಸಲ್ಪಡುವ  ಕ್ರಾಂತಿಯೋಗಿ ಶ್ರೀನಾರಾಯಣ ಗುರುಗಳು. ಸಮಾಜದ ಏಳ್ಗೆಗೆ ಆಧ್ಯಾತ್ಮಿಕ ಬದುಕು ಪೂರಕವಾಗಿರಬೇಕೆಂದು ಸಾಧಿಸಿತೋರಿದರು. ಮುಖ್ಯವಾಗಿ ಅವರು ಹಿಂದೂ ಧರ್ಮಕ್ಕೆ ಮುಸುಕಿನಂತೆ ಆವರಿಸಿಕೊಂಡಿರುವ ಜಾತಿಪದ್ಧತಿ-ಅಸಮಾನತೆಗಳ ನಿರ್ಮೂಲನಕ್ಕೆ ಬಹುವಾಗಿ ಶ್ರಮಿಸಿದರು.

ನಾರಾಯಣ ಗುರುಗಳು ಜನಿಸಿದ್ದು ಕೇರಳದ ತಿರುವನಂತಪುರ ಸಮೀಪದ ಒಂದು ಹಳ್ಳಿಯಲ್ಲಿ.  ಅವರ ತಂದೆ ಕೃಷಿ ಕಾರ್ಯದ ಜೊತೆಗೆ ಪುರಾಣ ವಾಚನವನ್ನು ಮಾಡುತ್ತಿದ್ದರು.  ಇದರಿಂದಾಗಿ ನಾರಾಯಣರಿಗೆ ಬಾಲ್ಯದಿಂದಲೇ ಧಾರ್ಮಿಕ ಸಂಗತಿಗಳಲ್ಲಿ ಆಸಕ್ತಿ ಬೆಳೆಯುವಂತಾಯಿತು.  ವಯಸ್ಕರಾದಂತೆಲ್ಲ ಅವರ ಆಂತರಿಕ ಜಗತ್ತಿನ ಹಂಬಲ ಬಲಿತು, ತಮ್ಮ ತಂದೆ ಮತ್ತು ಪತ್ನಿ ತೀರಿಕೊಂಡ ಬಳಿಕ ಮನೆಬಿಟ್ಟು ಹೊರಟು ಪರಿವ್ರಾಜಕ ಬದುಕನ್ನು ಪ್ರವೇಶಿಸಿದರು.  ಮುಂದಿನ ದಿನಗಳಲ್ಲಿ ಹಠಯೋಗ ಸಾಧನೆ ಬದುಕನ್ನು ಪ್ರವೇಶಿಸಿದರು.  ಇದು ಅವರ ಆಧ್ಯಾತ್ಮಿಕ ಬದುಕನ್ನು ಮತ್ತಷ್ಟು ಪ್ರಕರಗೊಳಿಸಿತು.  ಅವರು ಕನ್ಯಾಕುಮಾರಿ ಬಳಿಯ ಗುಹೆಯೊಂದರಲ್ಲಿ ಏಳೆಂಟು ವರ್ಷಗಳ ಕಾಲ ನಿರಂತರ ತಪಶ್ಚರ್ಯೆಯಲ್ಲಿ ತೊಡಗಿಕೊಂಡಿದ್ದರು.
ಶಕ್ತಿಯನ್ನು(ಅಂಬಾ) ಇಷ್ಟದೇವತೆಯಾಗಿ ಸ್ವೀಕರಿಸಿದ ಗುರುಗಳು ದೇವಾಲಯ ಕಟ್ಟಿ ಪೂಜೆಯಲ್ಲಿ ನಿರತರಾಗುವುದಕ್ಕಿಂತ ಶಾಲೆಯನ್ನು ತೆರೆದು ಜ್ಞಾನದಾಸೋಹ ಮಾಡುವುದೇ ಶ್ರೇಷ್ಠವೆಂದು ಬಗೆದರು.

ತ್ರಿಶೂರ್, ಕಣ್ಣೂರ್, ಕಲ್ಲಿಕೋಟೆ, ಮಂಗಳೂರುಗಳಲ್ಲಿ ದೇವಾಲಯಗಳನ್ನು ತೆರೆದು ಅಲ್ಲಿ ಎಲ್ಲ ವರ್ಗದ ಜನರಿಗೂ ಮಕ್ತ ಪ್ರವೇಶ ಘೋಷಿಸುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ನಾಂದಿ ಹಾಡಿದರು.  ೧೯೧೩ರ ಸುಮಾರಿಗೆ ’ಅದ್ವೈತ ಆಶ್ರಮ’ ವೊಂದನ್ನು ಸ್ಥಾಪಿಸಿ ಓಂ ಸಹೋದರ್ಯಮ್  ಸರ್ವತ್ರ (ಭಗವಂತನ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು) ಎಂಬ ಧ್ಯೇಯ ವಾಕ್ಯವನ್ನು ಹೊರಡಿಸಿದರು ಮತ್ತು ಅದನ್ನು ನೆರವೇರಿಸಲು ತಮ್ಮ ಬದುಕನ್ನು ಮುಡಿಪಾಗಿಟ್ಟರು.  ಆಧ್ಯಾತ್ಮಿಕ ಬಲದ ಜೊತೆ ಜೊತೆಗೆ ಪ್ರತಿಯೊಬ್ಬ ಮನುಷ್ಯನ ಶಿಕ್ಷಣ, ಶುಚಿತ್ವ , ಭಕ್ತಿ , ಕೃಷಿಗಾರಿಕೆ, ವ್ಯವಹಾರ-ಕುಶಲತೆ, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಮತ್ತು ಅದನ್ನು ಪಡೆಯಲು ಎಲ್ಲಾ ವರ್ಗದವರಿಗೂ ಅಧಿಕಾರವಿದೆ ಎಂದು ಶ್ರೀ ನಾರಾಯಣ ಗುರುಗಳು ನುಡಿದರು.  ೧೯೨೮ ರಲ್ಲಿ ತಮ್ಮ ೭೩ನೇ ವಯಸ್ಸಿನಲ್ಲಿ ಚಿರಸಮಾಧಿಗೆ ತೆರಳಿದ ನಾರಯಣಗುರುಗಳು ಇಂದಿಗೂ ಕೇರಳದಲ್ಲಿ ’ಸಾಮಾಜಿಕ ಕ್ರಾಂತಿಯ ಹರಿಕಾರ’ ಎಂದು ನೆನೆಯಲ್ಪಡುತ್ತಾರೆ .  ೧೯೯೯ ರಲ್ಲಿ ಕೇರಳದ ಪ್ರಮುಖ ವೃತ್ತಪತ್ರಿಕೆ ’ಮಲಯಾಳ ಮನೋರಮಾ’ ನಾರಾಯಣ ಗುರುಗಳನ್ನು ಶತಮಾನದ ವ್ಯಕಿ ಎಂದು ಕರೆದು ಗೌರವಿಸಿದೆ.

ಕಿತ್ತೂರು ಚೆನ್ನಮ್ಮ

ಬ್ರಿಟಿಷರ ದೆಬ್ಬಾಳಿಕೆ ಮಿತಿ ಮೀರಿದಾಗ ಮೊಟ್ಟ ಮೊದಲ ಬಾರಿಗೆ ಅದಕ್ಕೆ ಸೆಡ್ಡುಹೊಡೆದು ನಿಂತು ಸ್ವಾತಂತ್ರ್ಯಹೋರಾಡಿದ ಕಹಳೆಯೂದಿದ ಭಾರತದ ವೀರನಾರಿ ನಮ್ಮ ಹೆಮ್ಮೆಯ ಚೆನ್ನಮ್ಮಾಜಿ.

ಚೆನ್ನಮ್ಮ ಹುಟ್ಟಿದ್ದು ಬೆಳಗಾವಿಯಲ್ಲಿ.  ಮದುವೆಯಾಗಿ ಸೇರಿದ್ದು ಮಲ್ಲಸರ್ಜನ ಪತ್ನಿಯಾಗಿ-ಕಿತ್ತೂರು ಸಂಸ್ಥಾನವನ್ನು, ಚೆನ್ನಮ್ಮಳಿಗೆ ಮಕ್ಕಳಾಗದ ಕಾರಣ ಅವಳು ತನ್ನ ಮಲ ಮಗ ಶಿವಲಿಂಗರುದ್ರ ಸರ್ಜನನ್ನೇ ತನ್ನ ಮಗನಂತೆ ಕಾಣುತ್ತಿದ್ದಳು.  ಪತಿಯ ಮರಣಾನಂತರ ಆತನಿಗೇ ಪಟ್ಟಕಟ್ಟಿ ಆಡಳಿತ ನಡೆಸಿದಳು.  ಆದರೆ ಶಿವಲಿಂಗರುದ್ರನೂ ಮಕ್ಕಳಿಲ್ಲದೆ ತೀರಿಕೊಂಡ.  ಅದಕ್ಕೆ ಮುನ್ನ ಆತ ಶಿವಲಿಂಗಪ್ಪ ಎನ್ನುವ ಬಾಲಕನನ್ನು ದತ್ತುತಗೆದುಕೊಂಡ.  ಆ ವೇಳೆಗೆ ಬ್ರಿಟಿಷರು’ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎನ್ನುವ ದುರ್ನೀತಿಯನ್ನು ಜಾರಿ ಮಾಡಿದ್ದರು.  ಇದೇ ಕಾರಣವೊಡ್ಡಿ ಧಾರವಾಡದ ಕಲೆಕ್ಟರನಾಗಿದ್ದ ಥ್ಯಾಕರೆ ಈ ದತ್ತಕವನ್ನು ಪ್ರಶ್ನಿಸಿ ತನಗೆ ನಿಷ್ಠರಾಗಿದ್ದ ಮಲ್ಲಪ್ಪ ಶೆಟ್ಟಿ ಹಾಗೂ ವೆಂಕಟರಾಯನನ್ನು ಪ್ರತಿನಿಧಿಯಾಗಿ ನೇಮಿಸಿಬಿಟ್ಟ.

ಆದರೆ ಚೆನ್ನಮ್ಮ ಸುಮ್ಮನಗಲಿಲ್ಲ, ರಾಜಮನೆತನಕ್ಕೆ ಬೆಂಬಲವಾಗಿದ್ದವರ ಸಹಕಾರದಿಂದ ಮೊಮ್ಮಗನಿಗೆ ಪಟ್ಟಕಟ್ಟಿ, ತಾನು ರಕ್ಷಣೆಗೆ ನಿಂತಳು. ಕಪ್ಪ ಕೇಳಲು ಬಂದ ಥ್ಯಾಕರೆಗೆ ಮಾರುತ್ತರ ನೀಡಿ ಕಳುಹಿಸಿ ತನ್ನ ಕೆಚ್ಚು ಮೆರೆದಳು.  ಮುಂದೆ, ಕೋಟೆಗೆ ಮುತ್ತಿಗೆ ಹಾಕಲು ಬಂದ ಥ್ಯಾಕರೆ ತನ್ನ ಜೀವ ಕಳೆದುಕೊಂಡ. ಇಷ್ಟೆಲ್ಲ ಹೋರಾಟದ ನಡುವೆಯೂ ಸ್ವಜನರ ದ್ರೋಹದಿಂದ ಚೆನ್ನಮ್ಮ ಬ್ರಿಟಿಷರ ಸೆರೆಯಾಳಾಗುವ ದುರ್ದಿನ ಬಂದೇ ಬಂತು.  ಆದರೂ ಈ ವೀರರಾಣಿ ಅಂತಿಮ ಕ್ಷಣದವರೆಗೂ ತನ್ನ ಪ್ರತಿರೋಧ ತೋರಿದಳು.  ಸೆರೆಮನೆಯಿಂದಲೇ ಸಂಗೊಳ್ಳಿ ರಾಯಣ್ಣ ಎಂಬ ವೀರನಿಗೆ ಮಾರ್ಗದರ್ಶನ ನೀಡುತ್ತಿದ್ದಳು.  ಆದರೂ ಸ್ವಾತಂತ್ರ್ಯ ಕಳೆದುಕೊಂಡು ಬೋನಿಗೆ ಬಿದ್ದ ಸಿಂಹಿಣಿಯಂತಾಗಿದ್ದ ಕಿತ್ತೂರಿನ ರಾಣಿ ಚೆನ್ನಮ್ಮ ಜರ್ಝರಿತಳಾಗಿ ಹೋಗಿದ್ದಳು.  ನಾಲ್ಕು ವರ್ಷ ಸೆರೆವಾಸ ಅನುಭವಿಸಿ ಅಸುನೀಗಿದಳು.

Tagged with:

ಭಾರತ ಭಾಗ್ಯ ವಿಧಾತರು- ೧

Posted in ನಮ್ಮ ವೀರರು by yuvashakti on ನವೆಂಬರ್ 11, 2008

ಕನ್ನಡದಲ್ಲಿಭಾರತದ ಮಹಾನ್ ವ್ಯಕ್ತಿಗಳ ಕಿರುಪರಿಚಯ ಬೇಕೆಂದಾದಲ್ಲಿ ಇದೊಂದು ಸಣ್ಣ ಆಕರವಾಗಲಿ ಎಂಬ ಬಯಕೆಯಿಂದ ‘ಭಾರತ ಭಾಗ್ಯ ವಿಧಾತರು’ ಎಂಬ ಅಂಕಣವನ್ನು ಇಲ್ಲಿ ಆರಂಭಿಸಲಾಗಿದೆ.
ಸಹಕಾರವಿರಲಿ.
ಧನ್ಯವಾದ.

ಸಮರ್ಥ ರಾಮದಾಸರು

ಸ್ವದೇಶ, ಸ್ವಧರ್ಮದ ರಕ್ಷಣೆಗಾಗಿ ಹೋರಾಡಿ ಹಿಂದು ಧರ್ಮದ ಉನ್ನತಿಗೆ ಕಾರಣರಾದ ಛತ್ರಪತಿ ಶಿವಾಜಿ ಮಹಾರಾಜರ ಸಾಧನೆಯ ಹಿಂದೆ ಇದ್ದ ಮಹಾಪುರುಷರು ಸಮರ್ಥ ರಾಮದಾಸರು. ತುಕಾರಾಮರ ಭಕ್ತಿ ಭಾವ ಕಂಡು ಉದ್ವಿಗ್ನರಾಗಿ ಶಿವಾಜಿ, ತಾವು ಆಧ್ಯಾತ್ಮ ಸಾಧನೆಯಲ್ಲಿ ತೊಡಗಬೇಕೆಂದು ಬಯಸಿದಾಗ, ಅವರಿಗೆ ತಮ್ಮ ಕರ್ತವ್ಯದ ನೆನಪುಮಾಡಿಕೊಟ್ಟು ಸೂಕ್ತ ನಿರ್ದೇಶನ ಮಾಡಿ, ಮೊದಲು ಸ್ವದೇಶದ ಚಿಂತನೆ, ಆಧ್ಯಾತ್ಮಕ್ಕೆ ಅದರ ನಂತರದ ಸ್ಥಾನ ಎಂದು ಶಿವಾಜಿಗೆ ರಾಮದಾಸರು ಉಪದೇಶ ನೀಡಿದರು, ಅವರಿಗೆ ಪ್ರೇರಣೆಯಾಗಿ ನಿಂತರು. 

ಸಮರ್ಥ ರಾಮದಾಸರ ಮೂಲ ಹೆಸರು ನಾರಾಯಣ ಪಂತ, ಬಾಲ್ಯದಿಂದಲೇ ಹನುಮನ ಆರಾಧಕರಾಗಿ, ತಾನು ಆತನಂತೆಯೇ ಅಖಂಡ ಬ್ರಹ್ಮಚಾರಿಯಾಗಬೇಕೆಂದು ಸಂಕಲ್ಪ ತೊಟ್ಟಿದ್ದರು.  ಅಂತೆಯೇ ತಾಯಿಯ ಒತ್ತಾಯಕ್ಕೆ ಮಣಿದು ಹಸೆಮಣೆಯಮೇಲೆ ನಿಂತಾಗ ಸುಲಗ್ನೇ ಸಾವಧಾನ.. ಮಂತ್ರ ಕಿವಿಗೆ ಬೀಳುತ್ತಲೇ ಅಲ್ಲಿಂದ ಪರಾರಿ ಆಗಿ, ಪರಿವ್ರಾಜಕರಾಗಿ ಊರೂರು ಅಲೆದರು. ಭಾರತ ದರ್ಶನಮಾಡಿ ಅನ್ಯರ ಆಡಳಿತದಿಂದ
ಮುಕ್ತರಾಗದೇ ಧರ್ಮ ಉಳಿಯದು, ದೇಶ ಉಳಿಯದು ಎಂಬ ಸತ್ಯವನ್ನು ಮನಗಂಡರು. ಕಾಶಿಯಲ್ಲಿ ಹನುಮಾನ್ ಘಟ್ಟದಲ್ಲಿ ಹನುಮಂತನನ್ನು ಪ್ರತಿಷ್ಠಾಪಿಸಿ ತಾವೂ ರಾಮದಾಸ ಆದರು.  ಅವರ ಸಾಮರ್ಥ್ಯವೇ ಅವರಿಗೆ ಸಮರ್ಥ ಎನ್ನುವ ಅಭಿದಾನವನ್ನು ತಂದುಕೊಟ್ಟಿತು. ಸಮರ್ಥ ರಾಮದಾಸರು, ತಮ್ಮ ಹೆಸರಿಗೆ ತಕ್ಕಂತೆ ಶ್ರೀರಾಮನ ವಿನಮ್ರ ಸೇವಕನಾಗಿ ಆತನ ಆದರ್ಶಗಳನ್ನು ಬೋಧಿಸುವ, ಕಾರ್ಯರೂಪಕ್ಕೆ ತರುವ ಹೊಣೆಹೊತ್ತರು.

ಸಮರ್ಥ ರಾಮದಾಸರು ಮರಾಠಿಯಲ್ಲಿ ಹಲವು ಗೀತೆಗಳನ್ನು ರಚಿಸಿದರು.  ಅವರ ದಾಸಬೋಧೆ ಒಂದು ಪ್ರಬೋಧಕರ ಜನಪ್ರಿಯ ಮಹಾಕೃತಿ. ಅವರು ಶಿವಾಜಿ ಮಹಾರಾಜರ ಕೊನೆಯ ಘಳಿಗೆಯವರೆಗೂ ಅವರ ಗುರುಗಳಾಗಿದ್ದು ಮಾರ್ಗದರ್ಶನ ಮಾಡಿದರು.  ೧೬೦೮ರ ರಾಮನವಮಿಯಂದು ಜನಿಸಿದ ಸಮರ್ಥ ರಾಮದಾಸರು ೧೬೮೨ರ ಮಾಘ ಬಹುಳ ನವಮಿಯಂದು ಕಾಲವಾದರು. ಅವರು ತೀರಿಕೊಂಡ ದಿನವನ್ನು
ಇಂದಿಗೂ ದಾಸ ನವಮಿಯೆಂದು ಆಚರಿಸಲಾಗುತ್ತದೆ.

ತಾತ್ಯಾಟೋಪಿ

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನೇತಾರನಾಗಿ ಕೊನೆಕ್ಷಣದವರೆಗೂ ಹೋರಾಡಿದ ಪುರುಷಸಿಂಹ ತಾತ್ಯಾಟೋಪಿ. ಇವರ ಮೂಲ ಹೆಸರು ರಘುನಾಥ ಪಂತ. ಇವರು ಜನಿಸಿದ್ದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೇವಲೆ ಎಂಬಲ್ಲಿ, ೧೮೧೪ರಲ್ಲಿ. ರಘುನಾಥ ಅತ್ಯಂತ ತೇಜಸ್ವಿ ಬಾಲಕನಾಗಿದ್ದು, ಪೇಶ್ವೆ ೨ನೇ ಬಾಜೀರಾಯರ ಪ್ರೀತಿಗೆ ಪಾತ್ರನಾಗಿದ್ದನು. ಬಾಜೀರಾಯರು ಅವನ ಮೇಲಿನ ವಿಶ್ವಾಸದಿಂದ ರತ್ನ ಖಚಿತವಾದ ಟೋಪಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದ ಎಲ್ಲರ ತಾತ್ಯಾ (ರಘುನಾಥನ ಮುದ್ದಿನ ಹೆಸರು) ತಾತ್ಯಾಟೋಪಿಯಾದರು.
ತನ್ನ ಬಾಲ್ಯದ ಸಂಗಾತಿಗಳಾದ ನಾನಾಸಾಹೇಬ(ಬಾಜೀರಾಯರ ದತ್ತುಪುತ್ರ), ಲಕ್ಷ್ಮೀಬಾಯಿ(ಬಾಲ್ಯದಲ್ಲಿ ಛಬೇಲಿ) ಇವರೊದಿಗೆ ಸ್ವಾತಂತ್ರ್ಯದ, ಬ್ರಿಟಿಷ್ ಮುಕ್ತ ಭಾರತದ ಕನಸು, ತಾತ್ಯಾಟೋಪಿ ಅದರ ಸಾಕಾರಕ್ಕೆ ಜೀವವನ್ನೇ ಮುಡುಪಿಟ್ಟರು. ಮರಾಠಿಗರಿಗೆ ವಿಶಿಷ್ಠವೆನಿಸಿದ ಗೆರಿಲ್ಲಾ ಯುದ್ಧದಲ್ಲಿ ನಿಪುಣನಾಗಿದ್ದ ತಾತ್ಯಾ ಬ್ರಿಟಿಷರಿಗೆ ಸಾಕಷ್ಟು ಪೆಟ್ಟು ನೀಡಿದನು. ಕಾಲ್ಫಿಯನ್ನು ಕೇಂದ್ರವಾಗಿಟ್ಟುಕೊಂಡು ದೇಶದುದ್ಧಗಲಕ್ಕೂ ಮಿಂಚಿನ ಸುಳಿಯಂತೆ ಓಡಾಡಿ ರಾಜರನ್ನು, ಸೈನ್ಯವನ್ನು ಒಗ್ಗೂಡಿಸಿದನು. ಈತನ ಬಲಿಷ್ಟ ಸವಾಲನ್ನು ನೇರವಾಗಿ ಎದುರಿಸಿ ಸೆರೆಹಿಡಿಯಲಾಗದ ಬ್ರಿಟಿಷ್ ಸೇನೆ ವಂಚನೆಯಿಂದ ಅದನ್ನು ಸಾಧಿಸಿತು. ಮಾನಸಿಂಗ ಎಂಬುವವನಿಂದ ಮಿತ್ರದ್ರೋಹ ಮಾಡಿಸಿ, ಕಾಡಿನಲ್ಲಿ ಸಿಂಹವನ್ನು ಸೆರೆಹಿಡಿದಂತೆ ಪಾರಣವೆಂಬ ನಿಬಿಡಾರಣ್ಯದಲ್ಲಿ ಅರ್ಧರಾತ್ರಿಯಲ್ಲಿ ನಿದ್ರಿಸುತ್ತಿದ್ದ ತಾತ್ಯಾನನ್ನು ಸೆರೆ ಹಿಡಿಯಲಾಯಿತು. ೧೮೫೯ರ ಏಪ್ರಿಲ್ ೧೮ರಂದು ಈ ಮಹಾನ್ ಕ್ರಾಂತಿವೀರನನ್ನು ಬ್ರಿಟಿಷ್ ಸರ್ಕಾರ ದಂಗೆಕೋರನೆಂದು ತೀರ್ಪಿತ್ತು ನೇಣಿಗೇರಿಸಿತು. 
ಆದರೇನು? ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮಹಾ ಸೇನಾನಿಯೆಂದು
ತಾತ್ಯಾಟೋಪಿಯ ಹೆಸರು ಇಂದಿಗೂ ಅಜರಾಮರವಾಗಿದೆ.

 

 

ಲೋಕಮಾನ್ಯ ಬಾಲಗಂಗಾಧರ್ ತಿಲಕ್

 ಸ್ವಾತಂತ್ರ್ಯ ನಮ್ಮ ಆಜನ್ಮ ಸಿದ್ಧ ಹಕ್ಕು. ಅದನ್ನು ನಾನು ಪಡೆದೇ ತೀರುತ್ತೇನೆ ಹೀಗೆಂದು ಕೆಚ್ಚಿನಿಂದ ಘರ್ಜಿಸಿ, ಅದರಂತೇ ಹೋರಾಡಿದವರು ಲೋಕಮಾನ್ಯ ಬಾಲಗಂಗಾಧರ್ ತಿಲಕ್. ಭಾರತದ ಸ್ವಾತಂತ್ರ್ಯ ಜೊತೆಜೊತೆಗೆ ಅದರ ಉಳಿಕೆಗೆ  ಅಗತ್ಯವಿರುವ ಭಾರತೀಯ ಸಮಾಜದ ಸುಧಾರಣೆ – ಇವೆರಡು ಉದ್ದೇಶಕ್ಕಾಗಿ ಜೀವನ ಮುಡಿಪಿಟ್ಟರು. ಆದ್ದರಿಂದಲೇ ಲೋಕಮಾನ್ಯ ಎನಿಸಿದರು.                                                      
ತಿಲಕರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರದ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಹೋರಾಟದ ಮೊದಲನೇ ಜನಪ್ರಿಯ ನಾಯಕರೆಂದು ಗುರುತಿಸಲ್ಪಡುತ್ತಾರೆ. ಭಾರತೀಯ ಶಿಕ್ಷಣ, ಆಚಾರ-ವಿಚಾರಗಳು, ಆರೋಗ್ಯ ಮೊದಲಾದ ಸಂಗತಿಯಲ್ಲಿ ಸುಧಾರಣೆ ತಂದು ಆಧುನಿಕ ಭಾರತದ ಜನಕ ಎಂದು ಕರೆಯಲ್ಪಡುತ್ತಾರೆ. ಅವರಿಗೆ ಈ ಅಭಿದಾನ ನೀಡಿದವರು ಮತ್ತೋರ್ವ ಸುಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧೀಜಿಯವರು.

ತಿಲಕರು ಪದವಿ ಪಡೆದ ನಂತರ ಶಿಕ್ಷಕರಾಗಿ ಕೆಲಕಾಲ ಸೇವೆ ಸಲ್ಲಿಸಿದರು. ಆದರೆ ಅವರು ಸ್ವಾತಂತ್ರ್ಯ ಹೋರಾಟದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದು ಪತ್ರಕರ್ತರಾಗಿ ಕಾರ್ಯ ನಿರ್ವಹಿಸತೊಡಗಿದ ನಂತರ. ಅವರು ನಡೆಸುತ್ತಿದ್ದ ಕೇಸರಿ ಮತ್ತು ಮರಾಠಾ ಪತ್ರಿಕೆಗಳು ಜನಮಾನಸದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿತು. ಅವರು ಬರೆಯುತ್ತಿದ್ದ ಲೇಖನ-ಸಂಪಾದಕೀಯಗಳು ಬ್ರಿಟಿಷ್ ಸತ್ತೆಯ ಬೇರನ್ನು ನಡುಗಿಸುತ್ತಿದ್ದವು. ಕಾಂಗ್ರೆಸ್ಸಿನ ಸದಸ್ಯರಾಗಿದ್ದರೂ ಅವರೊಬ್ಬ ಅಪ್ಪಟ ರಾಷ್ಟ್ರೀಯವಾದಿಯಾಗಿ, ಕ್ರಾಂತಿಕಾರರಾಗಿ ಚಿಂತನೆ ನಡೆಸುತ್ತಿದ್ದರು.

ಸ್ವಾತಂತ್ರ್ಯ ಹೋರಾಟದ ಹೊರತಾಗಿ ತಿಲಕರು ಭಾರತೀಯರ ಶಿಕ್ಷಣ ಮಟ್ಟ ಸುಧಾರಣೆ, ಮದ್ಯಪಾನ ನಿಷೇಧ ಮೊದಲಾದ ಸಾಮಾಜಿಕ ಸಂಗತಿಗಳತ್ತ ಕಳಕಳಿಯಿಂದ ಸ್ಪಂದಿಸಿದರು. ಗಣಿತಜ್ಞರು, ಖಗೋಳಶಾಸ್ತ್ರಜ್ಞರೂ ಆಗಿದ್ದ ತಿಲಕರು ಆ ನಿಟ್ಟಿನಲ್ಲಿಯೂ ಸಾಕಷ್ಟು ಸಂಶೋಧನೆಗಳನ್ನು ನಡೆಸಿರುವರು. ಅವರು ರಚಿಸಿರುವ ‘ಗೀತಾ ರಹಸ್ಯ’ ಭಗವದ್ಗೀತಾ ಭಾಷ್ಯ ಒಂದು ಪ್ರಸಿದ್ಧ ಕೃತಿ.
೧೮೫೬ರ ಜುಲೈ ೨೩ರಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದ ತಿಲಕರು ಅಗಸ್ಟ್ ೧, ೧೯೨೦ರಂದು ವಿಧಿವಶರಾದರು.

Tagged with:

ಹಿಂದೂ… ಧರ್ಮ ಮತ್ತು ಸಂಸ್ಕೃತಿ

Posted in ನಮ್ಮ ಇತಿಹಾಸ by yuvashakti on ನವೆಂಬರ್ 8, 2008

ಜಗತ್ತಿನ ಪ್ರಪ್ರಾಚೀನ ಸಂಸ್ಕೃತಿಗಳಲ್ಲಿ ಹಿಂದೂ ಸಂಸ್ಕೃತಿಗೆ ಮಹತ್ತ್ವದ ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ ‘ಹಿಂದೂ’ ಎನ್ನುವುದು ‘ಜಾತಿ’ವಾಚಕ ಪದವಾಗಿ ಅರ್ಥಾಂತರಗೊಂಡಿರುವುದರಿಂದ, ಈ ಸಂಸ್ಕೃತಿಯು ಉಗಮಗೊಂಡು ಬೆಳೆದುಬಂದಿರುವ ಭಾರತ ದೇಶವನ್ನು ಆಧಾರವಾಗಿಟ್ಟುಕೊಂಡು ‘ಭಾರತೀಯ ಸಂಸ್ಕೃತಿ’ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಇಷ್ಟಕ್ಕೂ ‘ಹಿಂದೂ’ ಎನ್ನುವುದು ಒಂದು ಧರ್ಮ. ‘ಧರ್ಮ’ ಅಂದರೆ ‘ಜಾತಿ’ಯಲ್ಲ. ಅದು ಜೀವನ ವಿಧಾನ. ಈ ಜೀವನ ವಿಧಾನದಿಂದ ಮಾನವನ ಆಂತರಿಕ ಪ್ರಗತಿಯುಂಟಾಗಿ ‘ಸಂಸ್ಕೃತಿ’ಯೂ, ಲೌಕಿಕ ಪ್ರಗತಿಯುಂಟಾಗಿ ‘ನಾಗರಿಕತೆ’ಯೂ ಬೆಳೆದುಬಂದವು. ಆಂತರಿಕ ಬೆಳವಣಿಗೆಯ ಪರಿಣಾಮವಾದ ‘ಭಾರತೀಯ ಸಂಸ್ಕೃತಿ’ ಇಂದಿಗೂ ಉಳಿದುಬಂದಿದ್ದರೆ, ಬಾಹ್ಯ ಬೆಳವಣಿಗೆಯ ಭವ್ಯ ಕುರುಹಾಗಿದ್ದ ‘ಸಿಂಧೂ ನಾಗರಿಕತೆ’ ನಶಿಸಿಹೋಯ್ತು.
ಭಾರತದ ಇತಿಹಾಸ ಇಸವಿಗಳ ಲೆಕ್ಕಾಚಾರಕ್ಕೆ ಸಿಕ್ಕುವಂಥದ್ದಲ್ಲ. ನಮ್ಮ ವೈದಿಕ ಪರಂಪರೆಯ ಕಾಲಮಾನ ಸುಮಾರು ಕ್ರಿ.ಪೂ. ೧೦,೦೦೦ದಿಂದ ೭,೦೦೦ ವರ್ಷಗಳು ಎಂದು ಹೇಳಲಾಗುತ್ತದೆ. ಉತ್ಖನನ, ಅಧ್ಯಯನಗಳ ಪುರಾವೆಯಂತೆ, ಇದು ಕನಿಷ್ಠ ಪಕ್ಷ ಕ್ರಿ.ಪೂ. ೫,೦೦೦ವರ್ಷಗಳಿಗಿಂತ ಹಿಂದಿನದು.

ಹಿಂದೂ ಧರ್ಮದ ಮೌಲ್ಯಗಳನ್ನೊಳಗೊಂಡ ‘ಹಿಂದೂ ಜಾತಿ’- ಜಾತಿಯಾಗಿ ಗುರುತಿಸಲ್ಪಟ್ಟಿದ್ದು, ಇಸ್ಲಾಮ್, ಇಸಾಯಿ ಮತಗಳ ಉಗಮದ ನಂತರವಷ್ಟೇ. ಅವಕ್ಕೆ ಮುಂಚಿನ ಬೌದ್ಧ , ಜೈನ ಪಂಥಗಳು ಮೋಕ್ಷ ಸಾಧನೆಗಾಗಿ ಕವಲೊಡೆದ ಮಾರ್ಗಗಳಾಗಿ ಗುರುತಿಸಲ್ಪಟ್ಟಿದ್ದವು. ಹಾಗೆಂದೇ ನಾವು ಬೌದ್ಧ- ಜೈನ ಪಂಥಗಳ ದೇವತೆಗಳು, ಪುರಾಣಗಳು, ದೇವಾಲಯಗಳಲ್ಲಿ ಹಿಂದೂ ಧರ್ಮದ ಸಾಮ್ಯತೆ- ಪ್ರಭಾವಗಳನ್ನು ಧಾರಾಳವಾಗಿ ಕಾಣಬಹುದು. ದುರ್ಂತವೆಂದರೆ, ಇಂದು ಹಿಂದೂ ಜಾತಿ, ಹಿಂದೂ ಧರ್ಮದ ಉದಾತ್ತ ಮೌಲ್ಯಗಳನ್ನು ಮರೆಯುತ್ತ, ಅವನ್ನು ಅಪಮೌಲ್ಯಗೊಳಿಸುತ್ತ, ಮಾತೃಧರ್ಮಕ್ಕೆ ಧಕ್ಕೆಯುಂಟು ಮಾಡುತ್ತ ಸಾಗಿರುವುದು. ಇಂದು ನೈಜ ಹಿಂದೂ ಧರ್ಮದ ಪ್ರತಿಪಾದಕರು, ಅನುಚರರು ಕಾಣುವುದು ಅತಿ ವಿರಳ. 

ಭಾರತೀಯ ಪರಂಪರೆ ಯಾವುದೋ ಒಬ್ಬ ಚಕ್ರವರ್ತಿ, ಒಬ್ಬ ಮಹರ್ಷಿ, ಒಬ್ಬ ಪ್ರವಾದಿ ಕಟ್ಟಿಕೊಟ್ಟಿದ್ದಲ್ಲ. ಅಥವಾ ಕೆಲವೇ ಮೇಲ್ವರ್ಗದ ಜನರ ಸೊತ್ತೂ ಅಲ್ಲ. ವೇದಗಳಲ್ಲಿ ಉಲ್ಲಿಖಿತವಾಗಿರುವಂತೆ ಇದು ಪ್ರತಿಯೊಂದು ವರ್ಗದ, ವರ್ಣದ ಮಾನವನ ಕೊಡುಗೆ. ಸಿಂಧೂ ನದಿಯ ತಟದಲ್ಲಿ ಅಭಿವೃದ್ಧಿ ಹೊಂದಿದ ಈ ಸಂಸ್ಕೃತಿಯನ್ನು ಸಹಸ್ರಮಾನಗಳ ಹಿಂದಿನಿಂದಲೂ ಒಡನಾಟದಲ್ಲಿರುವ ಪರ್ಷಿಯನ್ನರು ೧ಹಿಂದೂ’ ಎಂದು ಕರೆದರು. (ಅವರಲ್ಲಿ ‘ಸ’ಕಾರ ‘ಹ’ಕಾರವಾಗಿ ಉಚ್ಚರಿಸಲ್ಪಡುತ್ತದೆ)
ಕ್ರಮೇಣ ಹಿಂದೂ ಸಂಸ್ಕೃತಿಯವರು ಆಚರಿಸುತ್ತಿದ್ದ ಸನಾತನ ಧರ್ಮ- ಹಿಂದೂ ಧರ್ಮವಾಗಿಯೂ ಅದರ ಸದಸ್ಯರು ಹಿಂದೂಗಳಾಗಿಯೂ ಸ್ಥಾಪಿತರಾದರು. ಹೀಗೊಂದು ಹೆಸರಿನಿಂದ ಬಂಧಿಸಲ್ಪಟ್ಟ ಸನಾತನ ಧರ್ಮದ ಬೆಳವಣಿಗೆ ನಿಂತುಹೋಯಿತು. ಮುಂದೆ, ಇದೇ ಚೌಕಟ್ಟಿನೊಳಗೆ ಹಲವು ಪ್ರಯೋಗಗಳು ನಡೆದು ವಿಭಿನ್ನ- ವಿಶಿಷ್ಟ ‘ಭಾರತೀಯ ಸಂಸ್ಕೃತಿಯ’ ಉಗಮವಾಯ್ತು.

ಸನಾತನ ಧರ್ಮವನ್ನು ‘ಆಧ್ಯಾತ್ಮದ ತೊಟ್ಟಿಲು’ ಎಂದೂ, ‘ಎಲ್ಲ ಧರ್ಮಗಳ ತಾಯಿ’ ಎಂದೂ ಕರೆಯಲಾಗುತ್ತದೆ. ಈ ತೊಟ್ಟಿಲನ್ನು ತೂಗಿದ ಭಾರತ, ಹತ್ತುಹಲವು ಮತಪಂಥಗಳ ಪ್ರಯೋಗಶಾಲೆಯಾಗಿ ಬಳಕೆಯಾಗಿದೆ. ಯಾವುದನ್ನೂ ತಿರಸ್ಕರಿಸದೆ, ಪ್ರತಿಯೊಂದಕ್ಕೂ ತನ್ನೊಡಲಲ್ಲಿ ಜಾಗ ನೀಡಿ ತಾಯ್ತನ ಮೆರೆದಿದೆ.

(ಮುಂದುವರೆಯುವುದು…)

ರಾಷ್ಟ್ರ ಶಕ್ತಿ ಕೇಂದ್ರದ ಸದಸ್ಯರಾಗುವುದು ಹೇಗೆ?

Posted in Uncategorized by yuvashakti on ಅಕ್ಟೋಬರ್ 17, 2008

“ರಾಷ್ಟ್ರ ಶಕ್ತಿ ಕೇಂದ್ರದ ಸದಸ್ಯರಾಗುವುದು ಹೇಗೆ?”  ಎಂದು ಬಹಳಷ್ಟು ಜನ ಪ್ರಶ್ನಿಸುತ್ತಲೇ ಇದ್ದಾರೆ. ನಾವು ಕೂಡ ಕೇಂದ್ರದ ಹೊಸ ಶಾಖೆಗಳನ್ನು ಆರ್ಂಭಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. 2009ರ ಜನವರಿ 12ರಂದು ( ಅಂದು ‘ಯುವ ದಿನ’) ಕೇಂದ್ರದ ಚಟುವಟಿಕೆಗಳನ್ನು ವಿಸ್ತೃತಗೊಳಿಸಿ ಹೆಚ್ಚು ಜನರನ್ನು ತಲುಪಬೇಕೆನ್ನುವ ಯೋಜನೆ ಇದೆ.  ಆ ವೇಳೆಗೆ ಸದಸ್ಯರ ಬಲವೂ ಹೆಚ್ಚುವ ನಿರೀಕ್ಷೆ ಇದೆ.

ರಾಷ್ಟ್ರ ಶಕ್ತಿ ಕೇಂದ್ರದ ಸದಸ್ಯರಾಗಬಯಸುವವರು ದಯವಿಟ್ಟು ತಮ್ಮ ಓದು, ಆಸಕ್ತಿ, ಕಳಕಳಿಗಳ ಕಿರು ವಿವರವನ್ನು ನಮಗೆ ರವಾನಿಸಬೇಕಾಗಿ ವಿನಂತಿ. ರಾಷ್ಟ್ರದ ಪ್ರಗತಿಗೆ ನೀವೇನು ಕೊಡುಗೆ ನೀಡಬಲ್ಲಿರಿ? ಈ ಬಗ್ಗೆ ನಿಮಗೆ ನಿಮ್ಮದೇ ಆದ ಕಲ್ಪನೆಗಳಿವೆಯೇ? ಇದ್ದರೆ, ಅದರ ಸ್ವರೂಪವೇನು? ಈ ಕುರಿತೂ ಒಂದೆರಡು ಸಾಲು ಬರೆದು ಹಾಕಿದರೆ ಚೆನ್ನ.

ಮತ್ತೊಂದು ಮಾತು… ರಾಷ್ಟ್ರ ಶಕ್ತಿ ಕೇಂದ್ರ, ರಾಷ್ಟ್ರದ ಅಡಿಪಾಯ ಭದ್ರಪಡಿಸಬೇಕೆಂಬ ಆಶಯದಿಂದ ರೂಪಿತವಾದ ಸಂಘಟನೆ. ಇಲ್ಲಿ ಎಲ್ಲರೂ ಸದಸ್ಯರು, ಪ್ರತಿಯೊಬ್ಬರೂ ಕಾರ್ಯಕರ್ತರೇ.  ಇಲ್ಲಿ ಮಾತು, ಮಾತಿನ ಜೊತೆಜೊತೆಗೆ ಕೃತಿ- ಎರಡಕ್ಕೂ ಸಮಾನಾವಕಾಶವಿದೆ. ಮಾತಿನ ಮೂಲಕ ಕೃತಿಗೆ ಪ್ರೇರೇಪಿಸುವುದು, ಸ್ವತಃ ಕೆಲಸದಲ್ಲಿ ತೊಡಗಿ ಮಾದರಿಯಾಗುವುದು ನಮ್ಮ ಉದ್ದೇಶ.

ನಿಮ್ಮ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ.

Please mail to: rsk_ys@in.com

ಒನ್ ಮ್ಯಾನ್ ಆರ್ಮಿ- ಗಾಂಧಿ!

Posted in ಚಕ್ರವರ್ತಿ ಅಂಕಣ by yuvashakti on ಅಕ್ಟೋಬರ್ 1, 2008

ಸೋಮನಾಥ ದೇವಾಲಯ ಹಿಂದೂಗಳ ಮೇಲಿನ ಅತ್ಯಾಚಾರದ ಪ್ರತೀಕವಾಗಿ ನಿಂತಿತ್ತು. ಅದನ್ನು ಮತ್ತೆ ನಿರ್ಮಣ ಮಾಡಿ, ದಾಳಿಕೋರರ ಅತ್ಯಾಚಾರದ ನೆನಪುಗಳನ್ನು ಮೆಟ್ಟಿನಿಲ್ಲುವ ಕೆಲಸ ಆಗಬೇಕಿತ್ತು. ವಿಷಯ ಪ್ರಧಾನಿ ನೆಹರೂ ಬಳಿ ಬಂದಾಗ, ಸರ್ಕಾರ ಒಂದು ಪೈಸೆ ಕೊಡಲಾರದು ಎಂದುಬಿಟ್ಟರು. ಸೋಮನಾಥ ಮಂದಿರ ಕಟ್ಟುವುದರಿಂದ ಮುಸಲ್ಮಾನರಿಗೆ ನೋವಾದೀತೆಂಬ ಭಯ ಅವರಿಗಿತ್ತು. ಗೃಹ ಮಂತ್ರಿ ಪಟೇಲರು ಕಂಗಾಲಾದರು, ಗಾಂಧೀಜಿ ಬಳಿ ಓಡಿದರು. ನೆಹರೂಗೆ ಬುದ್ಧಿ ಹೇಳುವಂತೆ ಗೋಗರೆದರು. ಆಗ ‘ಸೋಮನಾಥ ದೇವಾಲಯ ಹಿಂದೂಗಳ ಶ್ರದ್ಧೆಯ ತಾಣ. ಅದರ ನಿರ್ಮಾಣಕ್ಕೆ ಸರ್ಕಾರ ಹಣ ಕೊಡಲಾರದೆಂದರೆ ತಿರಸ್ಕರಿಸೋಣ. ಒಬ್ಬೊಬ್ಬ ಹಿಂದೂವಿನಿಂದಲೂ ಹಣ ಸಂಗ್ರಹಿಸೋಣ. ಅಲ್ಲಿನ ಒಂದೊಂದು ಇಟ್ಟಿಗೆಯೂ ಹಿಂದೂವಿನದೇ ಆಗಿರಲಿ’ ಎಂದವರು ಗಾಂಧೀಜಿ! ಪಟೇಲರ ಶಕ್ತಿ ನೂರ್ಮಡಿಯಾಯಿತು. ಸೋಮನಾಥ ದೇವಾಲಯದ ನಿರ್ಮಾಣಕ್ಕೆ ಮುಂದಡಿಯಿಟ್ಟರು.

ಸ್ವಾತಂತ್ರ್ಯ ಹೋರಾಟದ ಅಂತಿಮ ಹಂತದ ಸಮಯ. ನೌಖಾಲಿಯಲ್ಲಿ ಇದ್ದಕ್ಕಿದ್ದ ಹಾಗೆ ದೊಂಬಿಗಳು ಶುರುವಿಟ್ಟವು. ಮುಸಲ್ಮಾನರು ಹಿಂದೂಗಳ ಮೇಲೆ ಆಘಾತಕಾರಿ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಹಿಂದೂಗಳು ತಿರುಗಿಬೀಳುವ ಹೊತ್ತಿಗೆ ಸರಿಯಾಗಿ ಈಗಿನ ಬಾಂಗ್ಲಾ ಪ್ರಾಂತ್ಯದಲ್ಲಿ ಬಹು ಸಂಖ್ಯಾತ ಮುಸಲ್ಮಾನರು ಹಿಂದೂಗಳನ್ನು ಕೊಲ್ಲತೊಡಗಿದರು. ಮೌಂಟ್ ಬ್ಯಾಟನ್ ೧೫ ಸಾವಿರ ಸೈನಿಕರನ್ನು ಅತ್ತ ಕಳಿಸಿಕೊಟ್ಟ. ನೌಖಾಲಿಗೆ ಗಾಂಧೀಜಿ ಒಬ್ಬಂಟಿ ಹೊರಟರು. “ಅಲ್ಲಿನ ಹಿಂದೂಗಳನ್ನು ನೀವು ರಕ್ಷಿಸಿ, ಇಲ್ಲಿನ ಮುಸಲ್ಮಾನರನ್ನು ರಕ್ಷಿಸುವ ಹೊಣೆ ನನಗಿರಲಿ” ಎಂದರು. ರಕ್ತಪಾತ ನಿಲ್ಲುವವರೆಗೆ ಉಪವಾಸ ಕುಳೀತುಕೊಳ್ಳುತ್ತೇನೆ ಎಂದರು. ಸೇಡಿನ ಕಿಚ್ಚಿನಿಂದ ಹಪಹಪಿಸುತ್ತಿದ್ದವರೂ ಗಾಂಧೀಜಿಯ ಮುಂದೆ ಮಂಡಿಯೂರಿ ಕುಳಿತರು. ಮೌಂಟ್ ಬ್ಯಾಟನ್ ಉದ್ಗರಿಸಿದ. “ದಂಗೆ ನಿಯಂತ್ರಿಸಿದ್ದು ಎರಡು ಸೇನೆಗಳು. ಒಂದೆಡೆ ೧೫ಸಾವಿರ ಸೈನಿಕರ ಸಮೂಹ, ಇನ್ನೊಂದೆಡೆ ಸಿಂಗಲ್ ಮ್ಯಾನ್ ಆರ್ಮಿ- ಗಾಂಧೀ!!”

 ಇವು ಅಷ್ಟಾಗಿ ಚರ್ಚೆಗೆ ಬರದ ಗಾಂಧೀಜಿಯವರ ಚಿತ್ರಣಗಳು. ಗಾಂಧೀಜಿಗೆ ಹಿಂದೂ ಧರ್ಮ ಗ್ರಂಥಗಳ ಬಗ್ಗೆ ಅಪಾರ ಗೌರವ. ಗೀತೆಯ ಬಗ್ಗೆ ಅವರು ಸೊಗಸಾಗಿ ಬರೆದಿದ್ದಾರೆ. ರಾಷ್ಟ್ರದ ಸಮಸ್ಯೆಗಳಿಗೆ ಅದರಿಂದಲೇ ಪರಿಹಾರ ಹೇಳುತ್ತಾರೆ. ಇಷ್ಟಾಗಿಯೂ ಹಿಂದೂಗಳು ಅವರನ್ನು ತಮ್ಮ ನಾಯಕರೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅತ್ತ ಮುಸಲ್ಮಾನರು ಗಾಂಧೀಜಿಯನ್ನು ಹಿಂದೂಗಳ ನಾಯಕರೆಂದು ದೂರೀಕರಿಸುತ್ತಾರೆ. ಯಾವ ಹರಿಜನರ ಉದ್ಧಾರಕ್ಕಾಗಿ ತಮ್ಮ ಬದುಕಿನ ಪ್ರತಿಯೊಂದು ಹನಿ ಬೆವರನ್ನೂ ಸುರಿಸಿದರೋ, ಅದೇ ಹರಿಜನರ ಪಾಲಿಗೆ ಗಾಂಧೀಜಿ ಮೆಚ್ಚಿನ ನಾಯಕರಲ್ಲ. ಇತ್ತ ಮೇಲ್ವರ್ಗದ ಜನ ಕೂಡ ಅವರನ್ನು ಆರಾಧಿಸುವುದಿಲ್ಲ. ಸಮಾಜದ ಎಲ್ಲ ವರ್ಗದವರಿಗೂ ಗಾಂಧೀಜಿಯೇ ಅಸ್ಪೃಶ್ಯರಾಗಿಬಿಟ್ಟರು!

ದೇಶ- ಧರ್ಮಗಳ ಚಿಂತನೆ ಮಾಡದೇ, ಅನ್ಯಾಯವನ್ನು ಪ್ರತಿಭಟಿಸದೇ ಎಲ್ಲರಂತೆ ಇದ್ದುಬಿಟ್ಟಿದ್ದರೆ ಅವರೊಬ್ಬ ಶ್ರೀಮಂತ ಬ್ಯಾರಿಸ್ಟರ್ ಆಗಿರುತ್ತಿದ್ದರು. ಹಾಗಾಗಲಿಲ್ಲ. ಶ್ರೀಮಂತಿಕೆಯ ಬದುಕಿಗೊಂದು ಸಲಾಮು ಹೊಡೆದು, ತುಂಡು ಧೋತಿ ಧರಿಸಿ ರಾಷ್ಟ್ರ ಸೇವೆಗೆ ಧುಮುಕಿದರು. ಯಾವ ವರ್ಗವನ್ನು ವಿವೇಕಾನಂದರ ನಂತರ ಯಾರೂ ಪ್ರತಿನಿಧಿಸಿರಲಿಲ್ಲವೋ ಅಂಥಹ ಬಡ- ದರಿದ್ರರ ದನಿಯಾದರು. ವಿದೇಶದಲ್ಲಿರುವಾಗಲೇ ಬಿಳಿಯರು ಕರಿಯರ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯನ್ನು ವಿರೋಧಿಸಿದರು. “ಹೊಡೆದರೆ ಹೊಡೆಸಿಕೊಳ್ಳಿ. ಬಡಿದರೆ ಬಡಿಸಿಕೊಳ್ಳಿ. ಬಡಿಯುವವರು ಎಷ್ಟೂಂತ ಬಡಿದಾರು? ” ಎಂಬ ಸಿದ್ಧಾಂತವನ್ನು ಹೋರಾಟಗಾರರ ಕೈಗಿತ್ತರು. ದಬ್ಬಾಳಿಕೆಗೆ ಒಳಗಾದವರೂ ಮೊದಲು ಇವರನ್ನು ವಿರೋಧಿಸಿದರು. ಆಮೇಲೆ ಅಪಹಾಸ್ಯಗೈದರು. ಇಷ್ಟಾದರೂ ಆಸಾಮಿ ಜಗ್ಗದಿದ್ದಾಗ ಅವರನ್ನೇ ಅನುಸರಿಸಿದರು! ತಮ್ಮ ನಾಯಕನಾಗಿ ಸ್ವೀಕರಿಸಿದರು. ದೂರ ದೇಶದಿಂಡ ಬಂದವನೊಬ್ಬ ನೊಂದವರ ಕಣ್ಣೀರೊರೆಸುವುದು ತಮಾಷೆಯ ಕೆಲಸವಲ್ಲ. ಇಡೀ ಬ್ರಿಟಿಷ್ ಸಮುದಾಯ ಹೋರಾಟಾದ ಈ ಹೊಸ ಅಸ್ತ್ರಕ್ಕೆ ಬೆದರಿತು. ಇಂಗ್ಲೆಂಡಿನ ಪತ್ರಿಕೆಗಳೂ ಅವರನ್ನು ಹಾಡಿ ಹೊಗಳಿದವು. ನೋಡನೋಡುತ್ತಿದ್ದಂತೆಯೇ ಗಾಂಧೀಜಿ ಕಣ್ಣೂಕೋರೈಸುವಷ್ಟು ಎತ್ತರಕ್ಕೆ ಬೆಳೆದುಬಿಟ್ಟಿದ್ದರು.

ಇದೇ ಜಾಗತಿಕ ಖ್ಯಾತಿಯೊಂದಿಗೆ ಅವರು ಭಾರತಕ್ಕೆ ಬಂದಾಗ ಇಲ್ಲಿನ ಎಲ್ಲ ವರ್ಗಗಳೂ ಆಸಕ್ತಿಯಿಂದ ಕಾದಿದ್ದವು. ಗಾಂಧೀಜಿ ಅದ್ಭುತ ವಾಗ್ಮಿಯೇನಲ್ಲ. ಆದರೂ ಅವರು ಮಾತಾಡಲಿಕ್ಕೆ ನಿಂತರೆ ಜನಸ್ತೋಮವಿಡೀ ನಿಶ್ಶಬ್ದವಾಗುತ್ತಿತ್ತು. ಗಾಂಧೀಜಿಯವರ ಒಂದೊಂದು ಮಾತನ್ನೂ ವ್ಯರ್ಥವಾಗಲು ಬಿಡದೆ ಕೇಳಿಸಿಕೊಳ್ಳುವ ಶ್ರದ್ಧೆಯಿರುತ್ತಿತ್ತು. ಅದು, ಗಾಂಧೀಜಿ ವ್ಯಕ್ತಿತ್ವದ ತಾಖತ್ತು.

ಕ್ರಾಂತಿಕಾರಿಗಳ ಹೋರಾಟ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದಾಗ, ಗಾಂಧೀಜಿ ರಾಷ್ಟ್ರೀಯ ಚಳುವಳಿಯನ್ನು ಅತಿ ಕೆಳ ವ್ಯಕ್ತಿಯವರೆಗೂ ಕೊಂಡೊಯ್ದಿದ್ದರು. ಅಸಹಕಾರ ಚಳುವಳಿಗೆಂದು ಗಾಂಧೀಜಿ ನೀದಿದ ಒಂದೇ ಕರೆಗೆ ದೇಶದ ಎಲ್ಲ ವರ್ಗದ ಜನ ಸೆಟೆದು ನಿಂತಿದ್ದರು. ತಿಲಕರು ಸ್ವರಾಜ್- ಸ್ವದೇಶ್ ಪದಗಳನ್ನು ಹುಟ್ಟುಹಾಕಿದರು. ನಿಜ. ಗಾಂಧೀಜಿ ಅವುಗಳ ಕಲ್ಪನೆಯನ್ನು ಸಾಕಾರಗೊಳಿಸುವ ಮಾರ್ಗವನ್ನು ಜನರ ಮುಂದಿಟ್ಟರು.

ಗಾಂಧೀಜಿ ಮತ್ತು ಸುಭಾಷರ ಬಾಂಧವ್ಯದ ಬಗ್ಗೆಯೂ ಒಂದಷ್ಟು ವಿಷಯಗಳನ್ನು ಬೇಕೆಂದೇ ಮುಚ್ಚಿಡಲಾಗುತ್ತದೆ. ಅವರಿಬ್ಬರ ಸಂಬಂಧ ತಂದೆ- ಮಗನಂತಿತ್ತು ಅನ್ನೋದು ಬಹಳ ಜನರಿಗೆ ಗೊತ್ತೇ ಇಲ್ಲ. ಪತ್ರ ಬರೆವಾಗಲೆಲ್ಲ ಗಾಂಧೀಜಿ “ನಮ್ಮಲ್ಲಿನ ವೈಚಾರಿಕ ಭೇದ ನಮ್ಮ ಸಂಬಂಧಕ್ಕೆ ಧಕ್ಕೆ ತರಬಾರದು” ಎನ್ನುತ್ತಿದ್ದರು. ಒಮ್ಮೆಯಂತೂ ಪತ್ರದಲ್ಲಿ “ನನ್ನ ನಿನ್ನ ವಿಚಾರಗಳು ವಿಮುಖವಾದವು. ನಾನು ಮುದುಕ, ನೀನು ತರುಣ. ನಿನ್ನ ಚಿಂತನೆ- ವಾದಗಳೇ ಸರಿಯಾಗಿರಲಿ ಎಂದು ಆಶಿಸುತ್ತೆನೆ. ನಿನ್ನ ವಾದದಿಂದಲೇ ದೇಶಕ್ಕೆ ಲಾಭ ಎನ್ನುವುದಾದರೆ ನಾನು ಮಾಜಿ ಸತ್ಯಾಗ್ರಹಿಯಾಗಿ ನಿಷ್ಠೆಯಿಂದ ನಿನ್ನನ್ನು ಅನುಸರಿಸುತ್ತೇನೆ” ಎಂದಿದ್ದರು. ನಮ್ಮ ಸುಭಾಷ್ ದೇಶಭಕ್ತರ ಗುಂಪಿನಲ್ಲಿ ಮಿಂಚುವ ವೀರ ಎಂದು ಹೆಮ್ಮೆಪಡುತ್ತಿದ್ದರು. ಇನ್ನೊಂದೆಡೆ ಸುಭಾಷರು ಗಾಂಧೀಜಿ ರಾಷ್ಟ್ರಕ್ಕೇ ತಂದೆಯಿದ್ದಂತೆ, ಅವರೇ ‘ರಾಷ್ಟ್ರ ಪಿತ’ ಎಂದು ಹೇಳಿದ್ದರು!

ನಮ್ಮ ಕ್ರಾಂತಿಕಾರಿಗಳೆಲ್ಲ ಫ್ರಾನ್ಸು, ಅಮೆರಿಕ, ಜರ್ಮನಿ, ಇಟಲಿಗಳಿಂದ ಸ್ಫೂರ್ತಿಪಡೆದವರು, ಅಲ್ಲಿನ ಹೋರಾಟ ಕ್ರಮವನ್ನು ಅನುಸರಿಸಿದವರು. ಆದರೆ ಗಾಂಧೀಜಿ ಮಾತ್ರ ಈ ದೇಶದ ಸಂಸ್ಕೃತಿಯ ಆಳದಿಂದೆದ್ದು ಬಂದ ಸತ್ಯ- ಅಹಿಂಸೆಗಳೊಂದಿಗೆ ಹೋರಾಟ ಸಂಘಟಿಸಿದವರು. ಅದನ್ನು ಜಗತ್ತಿಗೆ ತೋರಿಸಿಕೊಟ್ಟವರು! ಭಾರತದ ನೈಜ ತತ್ತ್ವವನ್ನು ಬಿಂಬಿಸಿದವರು ಗಾಂಧಿ. ನೂರೊಂದು ಅಸಹನೆಗಳಲ್ಲಿ ಕುದಿಯುತ್ತಿರುವ ಭಾರತಕ್ಕೆ ಇಂದು ಗಾಂಧಿಯವರಲ್ಲದೆ ಮತ್ಯಾರು ಸೂಕ್ತ ಮದ್ದಾಗಬಲ್ಲರು ಹೇಳಿ?

ರಾಣಿ ಪದ್ಮಿನಿ ಬೆಂಕಿಗೆ ಹಾರಿ, ಅಲ್ಲಾ ಉದ್ದಿನ್ ಕಾಲದಲ್ಲಿ… ಅಲ್ಲಾ ಉದ್ದಿನ್ ಕಾಲದಲ್ಲಿ…

Posted in ಕಥಾ ಕಾಲಕ್ಷೇಪ by yuvashakti on ಸೆಪ್ಟೆಂಬರ್ 26, 2008

ಅಲ್ಲಾವುದ್ದಿನ್ ಖಿಲ್ಜಿ ಮೇವಾಡದ ಗಡಿಗೆ ಸೈನ್ಯ ಸಮೇತ ಬಂದುಬಿಟ್ಟ. ತಾನು ಬರುವ ಸುದ್ದಿ ರಜಪೂತ ದೊರೆ ಭೀಮ ದೇವ ಸಿಂಹನಿಗೆ ತಿಳಿಯದಿರಲೆಂದು ಸಾಕಷ್ಟು ಪಾಡುಪಟ್ಟ. ಸಾಧ್ಯವಾಗಲಿಲ್ಲ. ರಾಜನಿಗೆ ಗೂಡಚಾರರು ಸುದ್ದಿ ಮುಟ್ಟಿಸಿದರು. ಭೀಮದೇವ ಸರ್ವ ಸನ್ನದ್ಧನಾದ. ಅಲ್ಲಾವುದ್ದಿನ್ ಹೆಜ್ಜೆ ಇಡುವ ಮುನ್ನವೇ ಮುಗಿಬೀಳಲು ಯೋಜನೆ ಹಾಕಿದ.
ಯುದ್ಧವೆಂದರೇನೇ ಕಳೆಗಟ್ಟುವ ಕುಲ ರಜಪೂತರದು. ಕದನವೇ ಇಲ್ಲದೆ ಒರೆಯೊಳಗಿಟ್ಟಿದ್ದ ಕತ್ತಿಯನ್ನು ಹೊರಗೆಳದರು ಸೈನಿಕರು. ರಣೋತ್ಸಾಹ ಮೈಮೇಲೇರಿತು.

ಇತ್ತ ಖಿಲ್ಜಿ ಹಗಲಿರುಳು ಪದ್ಮಿನಿ… ಪದ್ಮಿನಿ ಎನ್ನುತ್ತ ಮೈಮರೆತಿದ್ದ. ಭುವನದೊಳಗಿನ ಅಪ್ರತಿಮ ಸುಂದರಿ ಪದ್ಮಿನಿಯನ್ನು ಭೋಗಿಸಬೇಕೆನ್ನುವ ಬಯಕೆ ಅವನನ್ನು ಮೇವಾಡದ ಗಡಿಗೆ ಕರೆತಂದಿತ್ತು. ಗುರ್ಜರದ ರಾಣಿ ಕಮಲಾ ದೇವಿಯನ್ನು ಅಪಹರಿಸಿ ಅವಳ ಸೌಂದರ್ಯ ಸೂರೆಗೊಂಡಿದ್ದ ಅವನಿಗೆ ಪದ್ಮಿನಿ ಇಲ್ಲದ ತನ್ನ ಜನಾನಾ ಮೌಲ್ವಿಯಿಲ್ಲದ ಮಸೀದಿ ಎನಿಸುತ್ತಿತ್ತಂತೆ! ಈಗ ಅವನು ಅಲ್ಲಿಗೆ ಬಂದಿದ್ದು ಅದೇ ಕಾರನಕ್ಕೆ. ಮೋಸದಿಂದ ಪದ್ಮಿನಿಯನ್ನು ತನ್ನ ಜನಾನಾಗೆ ಒಯ್ಯುವುದಕ್ಕೆ!

ರಜಪೂತರೇನೂ ಬಾಯಿಗೆ ಬೆಟ್ಟು ಹಾಕಿ ಕುಳಿತಿರಲಿಲ್ಲ. ಈ ಬಾರಿ ಅಲ್ಲಾದ್ದೀನನ ಎದೆ ಝಲ್ಲೆನ್ನುವಂತೆ ಹೋರಾಡಿದರು. ಕತ್ತಿಗೆ ಕತ್ತಿಯ ಉತ್ತರ ಕೊಟ್ಟರು. ಬೆಂಕಿಯ ಚೆಂಡಿಗೆ ಬೆಂಕಿಯೇ ಪ್ರತಿಕ್ರಿಯೆಯಾಯ್ತು. ರಜಪೂತರ ಕದನದ ಕಾವಿಗೆ ಖಿಲ್ಜಿಯ ಸೇನೆ ಭಸ್ಮವಾಯ್ತು. ಕಂಡು ಕೇಳರಿಯದ ಸೋಲು ಖಿಲ್ಜಿಗೆ! ಅವನನ್ನು ಬಂಧಿಸಿ ರಾಜನೆದುರು ನಿಲ್ಲಿಸಿದರೆ, ನಾಚಿಕೆ ಬಿಟ್ಟು ಗೋಗರೆದ; “ಪ್ರಭೂ, ದೇವರ ದೇವ… ನನ್ನ ಬಿಟ್ಟುಬಿಡು ತಂದೆ. ತಪ್ಪಿ ನಿನ್ನೆದುರು ಕಾಳಾಗಕ್ಕೆ ನಿಂದೆ” ಎಂದ!
ಶರಣಾಗತರನ್ನು ಕ್ಷಮಿಸುವುದು ನಮ್ಮ ಧರ್ಮವಲ್ಲವೆ? ಭೀಮದೇವನ ಮನ ಕರಗಿತು. ಧರ್ಮದ ಮಾತಿಗೆ ಬೆಲೆ ಕೊಟ್ಟು ಅಧರ್ಮಿಯನ್ನು ಬಿಟ್ಟುಬಿಟ್ಟ!

ಜೀವವೇನೋ ಉಳಿಯಿತು. ಆದರೆ ಪದ್ಮಿನಿ!? ಖಿಲ್ಜಿ ಚಡಪಡಿಸಿದ. ಅವನ ಅಂಗಾಂಗಗಳೆಲ್ಲ ಸೋತವು. ಪದ್ಮಿನಿಯನ್ನು ಕಾಣದೇ ಬದುಕುವುದು ದುಸ್ತರವೆಂದು ಕೂಗಾಡಿದ. ಕಾಮೋದ್ರೇಕದಿಂದ ಮತ್ತನಾದ ಒಡೆಯನನ್ನು ರಕ್ಷಿಸಲು ಅವನ ಭಂಟ ಮಲ್ಲಿಕಾಫರ್ ಸಂಚು ಹೂಡಿದ. ‘ರಾಣಿಯನ್ನು ದೂರದಿಂದಲಾದರೂ ನೋಡಲು ಅವಕಾಶ ಕೊಡಿ’ ಎಂದು ಬಿನ್ನಯಿಸಿ ಖಿಲ್ಜಿಯಿಂದ ಭೀಮದೇವನಿಗೆ ಪತ್ರ ಬರೆಸಿದ. ಭೀಮದೇವನಿಗೆ ಅದೇನು ಮಂಕು ಕವಿದಿತ್ತೋ? ಇದೊಂದು ನಿರುಪದ್ರವ ಕೋರಿಕೆ ಎಂದು ಪರಿಗಣಿಸಿದ. ಪದ್ಮಿನಿಯ ವಿರೋಧದ ನಡುವೆಯೂ ಆಗಲೆಂದು ತನ್ನ ಸಮ್ಮತಿಪತ್ರ ಕಳಿಸಿಕೊಟ್ಟ.

ರಾಣಿ ಪದ್ಮಿನಿಯ ಚೆಲುವಿಗಿಂತ ಆಕೆಯ ಬುದ್ಧಿ ಒಂದು ಗುಲಗಂಜಿ ತೂಕದಷ್ಟು ಹೆಚ್ಚು. ತಾನು ಕಳುಹಿಸುವ ರಾಖಿ ಕಟ್ಟಿಸಿಕೊಂಡು ‘ಅಣ್ಣ’ನಾದರೆ ಮಾತ್ರ ಮುಖ ತೋರುವೆನೆಂದಳು. ಆಸ್ಥಾನಕ್ಕೆ ಬಂದ ಕಾಮುಕ ಖಿಲ್ಜಿಗೆ ತನ್ನ ಮುಖವನ್ನು ಕನ್ನಡಿಯ ಬಿಂಬದಲ್ಲಿ ತೋರಿಸಿ ಮಾತು- ಮಾನಗಳನ್ನು ಉಳಿಸಿಕೊಂಡಳು!

ಅಷ್ಟಕ್ಕೇ ಖಿಲ್ಜಿಯ ಎದೆಬಡಿತ ಏರುಪೇರಾಗಿಹೋಯ್ತು. ತನ್ನ ಜನಾನಾದ ಎಲ್ಲ ಹೆಂಗಸರನ್ನು ಇವಳ ಪಾದಸೇವೆಗಿಟ್ಟರೂ ಕಡಿಮೆಯೇ ಎಂದುಕೊಂಡ. ಅವನ ಚಡಪಡಿಕೆಯ ಹೊತ್ತಿಗೆ ಅವನ ಸೇವಕರು ಕೋಟೆಯ ಉದ್ದಗಲಗಳನ್ನು ಅಳೆದುಸುರಿದಿದ್ದರು. ಮನೆಗೆ ಬಂದ ಅತಿಥಿಯನ್ನು ಬೀಳ್ಕೊಡುವ ಸಂಪ್ರದಾಯ ಪಾಲಿಸಲು ಭೀಮದೇವ ಖಿಲ್ಜಿಯ ಡೇರೆವರೆಗೂ ನಡೆದ. ಖಿಲ್ಜಿಯ ಹುಟ್ಟುಬುದ್ಧಿ ಎಲ್ಲಿಹೋಗಬೇಕು?  ತನ್ನ  ಭಂಟರಿಗೆ ಸನ್ನೆ ಮಾಡಿ ರಾಜನನ್ನು ಬಂಧಿಸಿಬಿಟ್ಟ! ‘ನಿನ್ನ ಬಿಡುಗಡೆಯಾಗಬೇಕು ಅಂದರೆ, ನಿನ್ನ ರಾಣಿ ನನ್ನ ತೊಡೆಯ ಮೇಲೆ ಕೂರಬೇಕು’ ಎಂದು ಷರತ್ತು ಹಾಕಿದ. ರಜಪೂತರ ರಕ್ತ ಕುದಿಯಿತು. ಪರಸ್ತ್ರೀ ತಾಯಿ ಸಮಾನ ಎನ್ನುವ ಧರ್ಮ ನಮ್ಮದು. ರಾಣಿಯಂತೂ ಸಾಕ್ಷಾತ್ ದೇವಿಯೇ ಸರಿ. ಚಿತ್ತೋಡ ಮತ್ತೊಂದು ಕದನಕ್ಕೆ ಸಜ್ಜಾಯಿತು. ಈ ಬಾರಿ ಬಲು ಎಚ್ಚರಿಕೆಯ ಕದನ ನಡೆಯಬೇಕು. ರಾಜನ ಪ್ರಾಣ ಎದುರಾಳಿಯ ಕೈಲಿದೆ. ರಾಣಿಯ ಮಾನವೂ ಉಳಿಯಬೇಕಿದೆ!

ಮುನ್ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಖಿಲ್ಜಿಯ ಕಡೆ ಹೊರಟವು. “ಬರಿ ರಾಣಿಯೊಬ್ಬಳೇಕೆ? ಜನಾನಾ ಅಲಂಕರಿಸಲು ರಾಣೀವಾಸದ ಹೆಂಗಸರೆಲ್ಲ ಬರುತ್ತಿದ್ದಾರೆ” ಎಂಬ ಮಾತು ಕೇಳಿಕೇಳಿಯೇ ಖಿಲ್ಜಿ ನಿದ್ದೆ ಕಳೆದುಕೊಂಡ. ಕಾಮುಕತೆಯಿಂದ ಹಸಿದ ನಾಯಿಗಿಂತಲೂ ಕಡೆ ಅವನು!

ಇತ್ತ ಡೇರೆ ಸಮೀಪಿಸಿದ ಪಲ್ಲಕ್ಕಿಗಳಲ್ಲೊಂದು ರಾಜ ಭೀಮದೇವನನ್ನು ಮಾತನಾಡಿಸಿತು. ಹಾಗೇ ಅವನನ್ನು ಹತ್ತಿಸಿಕೊಂಡು ಪಾರುಗಾಣಿಸಿಬಿಟ್ಟಿತು!
ಅಷ್ಟೇ,
ಪಲ್ಲಕ್ಕಿಯೊಳಗಿಂದ ಸುಂದರ ಹೆಣ್ಣುಗಳು ಹರಿದಾಡುವುದನ್ನು, ರಾಣಿ ಪದ್ಮಿನಿಯ ಕಾಣ್ಕೆಯ ತುಣುಕನ್ನು ಕಾಯುತ್ತ ಕುಳಿತಿದ್ದ ಖಿಲ್ಜಿ ಬಸವಳಿದು ಬಿದ್ದ!
ಪಲ್ಲಕ್ಕಿಯಿಂದ ಶಸ್ತ್ರ ಸಜ್ಜಿತರಾದ ರಜಪೂತ ಯೋಧರು! ಕದನಿಕಲಿಗಳಂತೆ ಮೈಮೇಲರಗಿದವರ ದಾಳಿಗೆ ತತ್ತರಿಸಿಹೋಯ್ತು ಖಿಲ್ಜಿಯ ತಂಡ.
ಸುಂದರ ಮೈಕಟ್ಟಿನ ಬಾದಲ್ ಪದ್ಮಿನಿಯ ವೇಷ ಧರಿಸಿದ್ದರೆ, ಉಳಿದ ಯೋಧರು ಸಖಿಯರ ವೇಷ ತೊಟ್ಟಿದ್ದರು. ಅಂತೂ ತಮ್ಮ ರಾಜನ ಪ್ರಾಣ, ರಾಣಿಯ ಮಾನ ಕಾಪಾಡುವಲ್ಲಿ ಯಶಸ್ವಿಯಾದರು. ಖಿಲ್ಜಿ, ಕಾಫರರನ್ನು ಬಂಧಿಸಿದರು.

ಆದರೇನು? ಧರ್ಮ ಬುದ್ಧಿ ಬಿಡಬೇಕಲ್ಲ? ರಣರಂಗದಲ್ಲಲ್ಲದೆ ಇಲ್ಲಿ ಕೊಲ್ಲುವುದು ಬೇಡವೆಂದು ಖಿಲ್ಜಿಗೆ ಜೀವದಾನ ಮಾಡಿಬಂದರು.

ಇತ್ತ ಚಿತ್ತ ಸ್ವಾಸ್ಥ್ಯ ಕಳಕೊಂಡ ಖಿಲ್ಜಿ ತನ್ನೂರಿಗೆ ಪಲಾಯನ ಮಾಡಿದ. ಪದ್ಮಿನಿಯ ಮೋಹದಲ್ಲಿ ಮತ್ತನಾಗಿ ಹೋಗಿದ್ದ. ಪದ್ಮಿನಿಯನ್ನು ಪಡೆಯದೆ ರಾಜನ ಹುಚ್ಚು ಬಿಡದೆಂದು ತೀರ್ಮಾನಿಸಿದ ಮಲ್ಲಿಕಾಫರ್ ದೊಡ್ಡದೊಂದು ಸೇನೆ ಸಜ್ಜುಗೊಳಿಸಿದ. ಕೋಟೆಯ ಆಯಕಟ್ಟಿನ ಜಾಗಗಳನ್ನಂತೂ ಮೊದಲೇ ಗೊತ್ತುಮಾಡಿಕೊಂಡಿದ್ದರು. ಈಗ ಏಕಾಏಕಿ ಚಿತ್ತೋಡಿನ ಮೇಲೆ ದಾಳಿಮಾಡಿಯೇಬಿಟ್ಟ.

ಈ ಬಾರಿ ಭೀಮದೇವ ನಿಜಕ್ಕೂ ಗಲಿಬಿಲಿಗೊಳಗಾಗಿದ್ದ. ಅವನ ಸೇನೆ ಸಿದ್ಧಗೊಳ್ಳುವ ಮುನ್ನವೇ ಕಾಫರನ ಸೇನೆ ಮುಗಿಬಿತ್ತು. ಮೂರ್ನಾಲ್ಕು ದಿನಗಳೊಳಗೆ ರಜಪೂತರ ಸಂಖ್ಯೆ ಕರಗಿತು. ‘ಪ್ರಾಣ ಕೊಟ್ಟೇವು, ಶರಣಾಗೆವು’ ಎನ್ನುತ್ತಲೇ ಅವರು ರಣಾಂಗಣದಲ್ಲಿ ವೀರಮರಣ ಕಂಡರು.

ಇನ್ನು…. ಭೀಮದೇವನ ಸಾವು. ಆನಂತರ ರಾಣಿ ಪದ್ಮಿನಿ, ಖಿಲ್ಜಿಯ ತೊಡೆ ಮೇಲೆ!?
ಇದನ್ನು ನೆನೆದಾಗಲೆಲ್ಲ ರಾಣಿಯ ದೇಹ ಕಂಪಿಸುತ್ತಿತ್ತು. ಪರಪುರುಷನನ್ನು ಕಣ್ಣೆತ್ತಿಯೂ ನೋಡದ ಮಹಾತಾಯಿ, ಅವನ ಜನಾನಾದಲ್ಲಿ ಲಲ್ಲೆಗರೆಯುತ್ತಾಳೆನ್ನುವುದು ಊಹೆಗೂ ಸಾಧ್ಯವಿಲ್ಲದ ಸಂಗತಿಯಾಗಿತ್ತು.
ಅಂದು ರಾತ್ರಿ ಪದ್ಮಿನಿ ಭಿಮದೇವನ ಬಳಿಸಾರಿದಳು. ಆತ ಎಂದಿನಂತಿಲ್ಲ. ‘ನಿನ್ನ ರಕ್ಷಿಸಲಾಗಲಿಲ್ಲವಲ್ಲ’ ಎಂಬ ಭಾವದಿಂದ ಸೋತ ಕಣ್ಣುಗಳವು. ಅದನ್ನು ಗುರುತಿಸಿದ ಪದ್ಮಿನಿ, ಪತಿಯನ್ನು ಹಿಂಬದಿಯಿಂದ ಬಳಸಿದಳು. ಇದು ನನ್ನ- ನಿಮ್ಮ ಕೊನೆಯ ರಾತ್ರಿ ಎಂದಳು. ಮಾನಕ್ಕಾಗಿ ಪ್ರಾಣ ತ್ಯಾಗ ಮಾಡುವ ಬಯಕೆ ಹೇಳಿಕೊಂಡಳು. ಭೀಮದೇವನ ಎದೆ ನಡುಗಿತು.
ನಿಗಿನಿಗಿ ಉರಿಯುವ ಅಗ್ನಿಕುಂಡದೊಳಗೆ ಹಾರಿ ಆತ್ಮಾಹುತಿ ಮಾಡಿಕೊಳ್ಳುವ ‘ಜೀವಹರ’ (ಜೌಹರ್) ವಿಧಾನವೇ ಅಷ್ಟು ಭಯಂಕರ.
ಆದರೇನು? ಸೈತಾನನ ತೆವಲಿಗೆ ಮಡದಿಯನ್ನು ಒಪ್ಪಿಸುವುದಕ್ಕಿಂತ ಅಗ್ನಿದೇವನ ಮಡಿಲಿಗೆ ಹಾಕುವುದು ಒಳಿತೆನ್ನಿಸಿತವನಿಗೆ. ಅವಳ ತಲೆ ನೇವರಿಸಿ ಬಿಸಿಮುತ್ತನಿಟ್ಟು ಹೊರಟುಬಿಟ್ಟ. ಅದು, ಮುಂದಿನದಕ್ಕೆ ಅನುಮತಿ.

ಅಂತಃಪುರದೆದುರು ವಿಶಾಲವಾದ ಅಗ್ನಿಕುಂಡ ರಚನೆಯಾಯ್ತು. ಕಟ್ಟಿಗೆಗಳನ್ನು ಉರಿಸಲಾಯ್ತು. ಅತ್ತ ರಣಾಂಗಣದಲ್ಲಿ ಭೀಮದೇವನ ಪಡೆ ನೆಲಕಚ್ಚುತ್ತಿದ್ದ ಸುದ್ದಿ ಬಂದೊಡನೆ ರಾಣಿ ಪದ್ಮಿನಿ ಭಗವಂತನನ್ನು ನೆನೆಯುತ್ತ, ಪಾತಿವ್ರತ್ಯದ ಬಲ ರಕ್ಷಿಸಲಿ ಎನ್ನುತ್ತ ಅಗ್ನಿ ಕುಂಡಕ್ಕೆ ಹಾರಿದಳು.  

ಬೆಂಕಿಯ ಕೆನ್ನಾಲಗೆ ಅವಳನ್ನು ಆವರಿಸಿತು. ಅಂತಃಪುರದ ಇತರ ಸ್ತ್ರೀಯರೂ ರಾಣಿಯನ್ನನುಸರಿಸಿದರು.
ಕರ್ಪೂರದ ಗೊಂಬೆ, ಕರಗಿಯೇ ಹೋಯ್ತು….
ಖಿಲ್ಜಿ ಧಾವಿಸಿ ಬಂದ. ಪದ್ಮಿನಿಯನ್ನು ಅಪ್ಪುವ ತವಕ ಅವನಲ್ಲಿ ತೀವ್ರವಾಗಿತ್ತು. ಆದರೆ ಅಲ್ಲಿ ನೋಡಿದ್ದೇನು? ರಾಣಿ ವಾಸ ಬಿಕೋ ಎನ್ನುತ್ತಿತ್ತು. ಎದೆ ಬಡಿತ ಹೆಚ್ಚಾಯಿತು. ಪದ್ಮಿನಿ ಸಿಗದಿದ್ದರೆ ತಾನು ಸತ್ತಂತೆಯೇ ಅಂದುಕೊಂಡ. ನಿಜ ಹೇಳಬೇಕೆಂದರೆ ಅವನು ಪ್ರತಿದಿನವೂ ಸತ್ತಿದ್ದ. ಪರ ಸ್ತ್ರೀಯನ್ನು ಬಯಸುವ ದೇಹ ಇದ್ದರೂ ಸತ್ತಂತೆಯೇ ಅಲ್ಲವೆ?

ರಜಪೂತ ಯೋಧನೊಬ್ಬ ಓಡೋಡಿ ಬಂದ. ಅಗ್ನಿ ಕುಂಡದ ಬೂದಿಯನ್ನು ಮುಷ್ಟಿಯಲ್ಲಿ ಹಿಡಿದು, ‘ಇದೋ, ರಾಣಿ ಪದ್ಮಿನಿ!’ ಎಂದ. ಆಕೆಯ ಭಸ್ಮ ಮುಟ್ಟುವ ಯೋಗ್ಯತೆಯೂ ನಿನಗಿಲ್ಲ, ಹೋಗು ಹೋಗೆಂದ.

ಖಿಲ್ಜಿ ಕಾಫಿರರನ್ನು ಹತ್ಯೆ ಮಾಡಲು ಬಂದಿದ್ದ. ಪವಿತ್ರವಲ್ಲದ ಭೂಮಿಯನ್ನು(!) ಅತಿಕ್ರಮಿಸಲು ಬಂದಿದ್ದ. ಆಕ್ರಮಿಸಿಯೂ ಇದ್ದ. ಕಾಫಿರರ ಹೆಂಡತಿಯರನ್ನು ಮಾತ್ರ ತನ್ನ ಜನಾನಾದೊಳಗೆ ಸೇರಿಸಿಕೊಳ್ಳಲಾಗದೆ ಸೋತು ಹೋಗಿದ್ದ.
ಅವನ ಈ ತಪ್ಪಿಗೆ ಖಂಡಿತ ಅವನಿಗೆ ಜನ್ನತ್ ನಲ್ಲಿ ಜಾಗ ಸಿಕ್ಕಿರಲಾರದು. ಎಪ್ಪತ್ತು ಹೆಂಗಸರ ಭೋಗವೂ ದಕ್ಕಿರಲಾರದು!

ಧನ್ಯೆ ಪದ್ಮಿನಿ! ನೀನು ಸತ್ತಾದರೂ ಕಾಮಾಂಧನೊಬ್ಬನಿಗೆ ನರಕದ ರುಚಿ ತೋರಿಸುವಲ್ಲಿ ಗೆದ್ದುಬಿಟ್ಟೆ!!

~ ಚಕ್ರವರ್ತಿ ಸೂಲಿಬೆಲೆ

( ಶಿರೋನಾಮೆಯ ಸಾಲು- ಒಂದು ಲಾವಣಿಯದ್ದು. ಅದರ ಪೂರ್ಣ ಪಾಠ ನನ್ನಲ್ಲಿಲ್ಲ. ಯಾರ ಬಳಿಯಾದರೂ ಇದ್ದರೆ ದಯವಿಟ್ಟು ಕಳಿಸಿಕೊಡಿ)

ಇವೆಲ್ಲ ನಡೆದು ನೂರಾಹದಿನೈದು ವರ್ಷ!

Posted in ಚಕ್ರವರ್ತಿ ಅಂಕಣ by yuvashakti on ಸೆಪ್ಟೆಂಬರ್ 19, 2008

ಸೆಪ್ಟೆಂಬರ್ ಹನ್ನೊಂದು ಅಂತಾದರೂ ಕರೆಯಿರಿ, ೯/೧೧ ಅಂತಾದರೂ ಹೇಳಿ. ಮನಸ್ಸು ಅಮೆರಿಕಾದತ್ತ ಧಾವಿಸಿಬಿಡುತ್ತದೆ. ವಿಶ್ವ ವ್ಯಾಪರ ಕೇಂದ್ರದ ಎರಡು ಕಟ್ಟಡಗಳನ್ನು ಭಯೋತ್ಪಾದಕರು ಉರುಳಿಸಿದ್ದು ಕಣ್ಮುಂದೆ ಅಲೆಅಲೆಯಾಗಿ ತೇಲಿ ಹೋಗುತ್ತದೆ. ಅಲ್ಲದೆ ಮತ್ತೇನು? ಉರುಳುವ ಕಟ್ಟಡಗಳನ್ನು ಟಿವಿಯ ಮುಂದೆ ಕುಳಿತು ನೇರ ಪ್ರಸಾರದಲ್ಲಿ ನೋಡಿದವರಲ್ಲವೆ ನಾವು!?

ಆದರೆ ಈ ಅಮೆರಿಕಾ ಸೆಪ್ಟೆಂಬರ್ ಹನ್ನೊಂದರಂದೇ ಇನ್ನೊಂದು ಸಾತ್ತ್ವಿಕ ಸುನಾಮಿಗೆ ಸಿಲುಕಿ ಅಲುಗಾಡಿದ್ದು ಬಹುತೆಕರಿಗೆ ಮರೆತೇಹೋಗಿದೆ. ಅವತ್ತು ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದ ವೇದಿಕೆ ಮೆಲೆ ನಿಂತು, ಕೇವಲ ಮೂರೂವರೆ ನಿಮಿಷಗಳಲ್ಲಿ ಸಾಕ್ಷಾತ್ ಅಮೆರಿಕೆಯನ್ನೇ ಧರೆಗೆ ಕೆಡವಿದ್ದರು.

ಸ್ವಲ್ಪ ವಿಚಾರ ಮಾಡಿ. ಎರಡರಲ್ಲೂ ಅದೆಷ್ಟು ಅಂತರ! ರಾಕ್ಷಸೀ ವೃತ್ತಿಯಿಂದ, ಧರ್ಮಾಂಧತೆಯ ಮೂರ್ತ ರೂಪವಾಗಿದ್ದ ಲ್ಯಾಡೆನ್ ಕೆಡವಿದ್ದು ಅಮೆರಿಕೆಯ ಹೊರರೂಪದ ಎರಡು ಕಟ್ಟಡಗಳನ್ನು ಮಾತ್ರ. ಬಂದೂಕು, ಮದ್ದು ಗುಂಡುಗಳನೆಲ್ಲ ಬಳಸಿ ಲ್ಯಾಡೆನ್ ಮತ್ತವನ ಸಹಚರರು ಕಟ್ಟಡಗಳಿಗೆ ಧಕ್ಕೆ ನೀಡಿದರು, ಒಂದಷ್ಟು ಜೀವ ತೆಗೆದರು.
ಆದರೆ ಸ್ವಾಮಿ ವಿವೇಕಾನಂದರು ವೇದಿಕೆಯ ಮೇಲೆ ನಿಂತು ಬರೀ ಮಾತಿನ ತುಪಾಕಿಯಿಂದ ಅಮೆರಿಕನ್ನರ ಅಂತಃಸತ್ತ್ವವನ್ನೇ ಅಲುಗಾಡಿಸಿಬಿಟ್ಟರು. ಅಲ್ಲಿನ ಜ್ಞಾನಿಗಳು, ಪಂಡಿತರು, ಅಲ್ಲಿ ನೆರೆದಿದ್ದ ಅನ್ಯ ಧರ್ಮೀಯರೆಲ್ಲರೂ ತಲೆದೂಗುವಂತೆ ಮಾಡಿಬಿಟ್ಟರು. ಆಧ್ಯಾತ್ಮಿಕತೆಯ ಗಂಧ ಗಾಳಿಯಿಲ್ಲದ ಭೋಗ ಭೂಮಿಯ ಜನತೆಗೆ ಮಾತಿನ ಅಮೃತ ಸಿಂಚನ ಹರಿಸಿ ಜೀವದಾನ ಮಾಡಿದರು.

ಈ ಎರಡೂ ಘಟನೆಗಳ ಪರಿಣಾಮವೂ ಸ್ವಾರಸ್ಯಕರ. ಒಂದು ಘಟನೆಯ ನಂತರ ಅಮೆರಿಕಾ ಆಫ್ಘಾನಿಸ್ತಾನಕ್ಕೆ ನುಗ್ಗಿ, ಲ್ಯಾಡೆನ್ನನ ದೇಶವನ್ನು ಸಂಪೂರ್ಣ ನಾಶಗೈದರೆ, ವಿವೇಕಾನಂದರ ಮಾತಿಗೆ ಮರುಳಾದ ಪಾಶ್ಚಾತ್ಯರನೇಕರು ಭಾರತದ ಸೇವೆಗೆ ಸಿದ್ಧರಾಗಿ ನಿಂತರು!

ಸ್ವಾಮಿ ವಿವೇಕಾನಂದರ ಈ ಜೈತ್ರಯಾತ್ರೆ ನಿಜಕ್ಕೂ ಅದ್ಭುತ ಪವಾಡವೇ ಸರಿ. ಪರದೇಶಗಳ ಪರಿಚಯವೇ ಇಲ್ಲದ, ಹೊಟ್ಟೆ- ಬಟ್ಟೆಗಳ ಪರಿವೆ ಇಲ್ಲದ, ಎಲ್ಲಿಗೆ ಹೇಗುವುದು, ಏನು ಮಾತನಾಡುವುದೆಂಬುದರ ಅರಿವಿಲ್ಲದ, ಕೊನೆಗೆ- ತಾನಾರೆಂಬ ಪರಿಚಯ ಪತ್ರವೂ ಇಲ್ಲದ ವ್ಯಕ್ತಿಯೊಬ್ಬ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತನಾಗಿದ್ದು ಪವಾಡವಲ್ಲದೆ ಮತ್ತೇನು?

“ನ ರತ್ನಂ ಅನ್ವಿಷ್ಯತಿ ಮೃಗ್ಯಾತೇ ಹಿ ತತ್’ (ರತ್ನ ತಾನೇ ಯಾರನ್ನೂ ಅರಸುತ್ತ ಹೋಗುವುದಿಲ್ಲ, ಅದು ಹುಡುಕಲ್ಪಡುತ್ತದೆ) ಎನ್ನುವಂತೆ ವಿವೇಕಾನಂದರ ಪ್ರಭೆ ತಾನೇತಾನಾಗಿ ಹರಡಿತು. ಇವರ ಪ್ರಭಾವಕ್ಕೆ ಸಿಕ್ಕು ಮನೆಗೆ ಆಹ್ವಾನಿಸಿದ ಹಾರ್ವರ್ಡ್ ಯುನಿವರ್ಸಿಟಿಯ ಪ್ರೊಫೆಸರ್ ರೈಟ್ ಎರಡು ದಿನ ಇವರೊಡನೆ ಮಾತು ಕತೆಯಾಡಿ ಉದ್ಗರಿಸಿದ್ದರು- “ಅಮೆರಿಕದ ನೆಲದ ಮೇಲೆ ಕಳೆದ ನಾಲ್ಕುನೂರು ವರ್ಷಗಳಲ್ಲಿ ಇಂತಹ ಜ್ಞಾನಿ ತಿರುಗಾಡಿದ ಉಲ್ಲೇಖಗಳೇ ಇಲ್ಲ!” ಎಂದು. ಸ್ವಾಮೀಜಿ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಮ್ಮ ಬಳಿ ಪರಿಚಯ ಪತ್ರವಿಲ್ಲ ಎಂದಾಗ ಆತ ನಕ್ಕುಬಿಟ್ಟಿದ್ದರು. “ನೀವು ಯಾರೆಂದು ಕೇಳುವುದೂ, ಸೂರ್ಯನಿಗೆ ಹೊಳೆಯಲು ಏನಧಿಕಾರ ಎಂದು ಕೇಳುವುದೂ ಒಂದೇ!!” ಎಂದಿದ್ದರು.

ಚಿಕಾಗೋ ವೇದಿಕೆಯ ಮೇಲಿಂದ ಭುವಿ ಬಿರಿಯುವಂತೆ ಮೊಳಗಿದ ವಿವೇಕಾನಂದನ ಪಾದ ಚುಂಬಿಸಲು ಅಮೆರಿಕವೇ ಸಿದ್ಧವಾಗಿ ನಿಂತಿತ್ತು. (ಕ್ರಿಶ್ಚಿಯನ್ ಪಾದ್ರಿಗಳನ್ನು ಬಿಟ್ಟು. ಏಕೆಂದರೆ, ಅವರ ಉದ್ಯೋಗಕ್ಕೇ ಈತ ಸಂಚಕಾರ ತಂದುಬಿಟ್ಟಿದ್ದ!). ವಿವೇಕಾನಂದ ಎಗ್ಗಿಲ್ಲದೆ ನುಡಿದ. ಕ್ರಿಶ್ಚಿಯನ್ನರ ನಾಡಿನಲ್ಲಿ ನಿಂತು, ನಮ್ಮ ನಾಡಿಗೆ ಬೇಕಾಗಿದ್ದುದು ಅನ್ನವೇ ಹೊರತು ಧರ್ಮವಲ್ಲವೆಂದ. ಸಾಧ್ಯವಿದ್ದರೆ ಅನ್ನ ಕೊಡಿ, ಇಲ್ಲವಾದರೆ ತೆಪ್ಪಗಿರಿ ಎಂದುಬಿಟ್ಟ. ತನ್ನ ರಾಷ್ಟ್ರದ ಬಗ್ಗೆ, ಧರ್ಮದ ಶ್ರೇಷ್ಠತೆಯ ಬಗ್ಗೆ ಆತನಿಗೆ ಹೆಮ್ಮೆಯಿತ್ತು. ಅವನು ಮಾತಾಡಿದ್ದು ಸಂಗೀತವಾಯ್ತು. ನುಡಿದಿದ್ದೆಲ್ಲ ತುಪಾಕಿಯ ಗುಂಡಾಯ್ತು. ಶ್ರೀಮತಿ ಅನಿಬೆಸೆಂತರು ಹೇಳಿದರು; “ಆತ ಸಂನ್ಯಾಸಿಯಲ್ಲ, ತಾಯಿ ಭಾರತಿಯ ಅಂತರಾಳದ ಮಾತುಗಳನ್ನಾಡುವ ಯೋಧ”. ಅಮೆರಿಕದ ಪತ್ರಿಕೆ ಬರೆಯಿತು;“ಇವನಂತಹ ಬುದ್ಧಿವಂತರಿರುವ ನಾಡಿಗೆ ಮಿಷನರಿಗಳನ್ನು ಕಳಿಸುವುದೇ ಮೂರ್ಖತನ. ಭರತದಿಂದ ಇವನಂತಹ ಮಿಷನರಿಗಳನ್ನು ನಾವು ಕರೆಸಿಕೊಳ್ಳಬೇಕಷ್ಟೆ!”

ಗುಲಾಮರ ನಾಡಿನಿಂದ ಹೊರಟಿದ್ದವ ಚಕ್ರವರ್ತಿಯಾಗಿಬಿಟ್ಟಿದ್ದ. ತನ್ನ ಹೃದಯ ತುಂಬಿದ್ದ ಪ್ರೇಮದ ಸುಧೆಯಿಂದ ಎಲ್ಲರನ್ನೂ ತೋಯಿಸಿಬಿಟ್ಟಿದ್ದ. ಜರ್ಮನಿಯ ಥಾಮಸ್ ಕುಕ್ ಹೇಳಿದ್ದರು; “ಅದೊಮ್ಮೆ ಅವರ ಕೈಕುಲುಕಿ ಮೂರು ದಿನ ಕೈ ತೊಳೆದುಕೊಂಡಿರಲಿಲ್ಲ. ಆವರ ಪ್ರೇಮದ ಸ್ಪರ್ಷ ಆರದಿರಲೆಂದು!”

ರಕ್ ಫೆಲ್ಲರನಂತಹ ಸಿರಿವಂತರು ಅವನಡಿಗೆ ಬಿದ್ದರು. ಪಾದಗಳಿಗೆ ಅರ್ಪಿತವಾದ ಕುಸುಮವಾದರು. ವಿವೇಕಾನಂದರು ಗರ್ವದಿಂದ ಬೀಗಲಿಲ್ಲ. ಬದಲಿಗೆ ತಾಯಿ ಭಾರತಿಯೆಡೆಗೆ ಮತ್ತಷ್ಟು ಬಾಗಿದ. ನಿಮ್ಮ ಸೇವೆ ಮಾಡಬೇಕೆಂಬ ಮನಸಿದೆ. ಏನು ಮಾಡಲಿ?” ಎಂದು ಕೇಳಿದವರಿಗೆ, “ನನ್ನ ಸೇವೆ ಮಾಡಬೇಕೆಂದರೆ ಭಾರತವನ್ನು ಪ್ರೀತಿಸಿ” ಎಂದ. ಸಿದ್ಧರಾದವರನ್ನು ಕರೆತಂದ. ಹಗಲಿರುಳು ಭಾರತದ ಏಳ್ಗೆಯ ಕುರಿತು ಚಿಂತಿಸಿದ. ಅಮೆರಿಕದ ಬೀದಿಬೀದಿಗಳಲ್ಲಿ ತನ್ನ ಆಳೆತ್ತರದ ಕಟೌಟು ರಾರಾಜಿಸುತ್ತಿದ್ದರೂ ತಾನು ಸರಳವಾಗೇ ಉಳಿದ. ಭಾರತಕ್ಕೆ ಮರಳಿದ. ಭಾರತದ ಜಪ ಮಾಡುತ್ತಲೇ ದೇಹ ತ್ಯಾಗ ಮಾಡಿದ.
ಹಾಗೆ ದೇಹ ಬಿಟ್ಟ ವಿವೇಕಾನಂದರಿಗೆ ಕೇವಲ ಮೂವತ್ತೊಂಭತ್ತು ವರ್ಷ.

ಸ್ವಾಮೀ ವಿವೇಕಾನಂದರು ಚಿಕಾಗೋ ಭಾಷಣ ಮಾಡಿ ಸೆಪ್ಟೆಂಬರ್ ಹನ್ನೊಂದಕ್ಕೆ ನೂರಾ ಹದಿನೈದು ವರ್ಷಗಳಾದವು. ಅದಕ್ಕೇ ಇವೆಲ್ಲ ನೆನಪಾಯ್ತು. ಅಷ್ಟೇ.

– ಚಕ್ರವರ್ತಿ ಸೂಲಿಬೆಲೆ

ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸ

Posted in ನಮ್ಮ ಇತಿಹಾಸ by yuvashakti on ಸೆಪ್ಟೆಂಬರ್ 17, 2008
 

ಸ್ವಾಮಿ ವಿವೇಕಾನಂದರ ಸರ್ವಧರ್ಮ ಸಮ್ಮೇಳನದ ‘ಚಿಕಾಗೋ ಉಪನ್ಯಾಸ’ ಎಂದೇ ಖ್ಯಾತವಾದ ಭಾಷಣದ ಕನ್ನಡಾನುವಾದವಿದು. ಇದನ್ನು ಪರಮ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರ ‘ವಿಶ್ವ ವಿಜೇತ ವಿವೇಕಾನಂದ’ ಪುಸ್ತಕದಿಂದ ಸಂಗ್ರಹಿಸಲಾಗಿದೆ.

 

ವಿವೇಕಾನಂದ

 “ಅಮೆರಿಕದ ಸೋದರಿಯರೇ ಮತ್ತು ಸೋದರರೇ!
ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬೌದ್ಧ ಧರ್ಮ, ಜೈನ ಧರ್ಮಗಳೆರಡೂ ಯಾವುದರ ಶಾಖೆಗಳು ಮಾತ್ರವೋ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತ್ತು ವಿವಿಧ ಜಾತಿ ಮತಗಳಿಗೆ ಸೇರಿದ ಕೋತ್ಯಂತರ ಹಿಂದುಗಳ ಪರವಾಗಿ ನಾನು ನಿಮಗೆ ಖ್ರುತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ, ‘ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತಾಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆ’ ಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

 ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವ ಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದುಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು.

ಪ್ರಪಂಚದ ಎಲ್ಲ ಧರ್ಮಗಳ ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವಿತ್ತ ರಾಷ್ಟ್ರಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ರೋಮನ್ನರ ದಬ್ಬಾಳಿಕೆಗೆ ಗುರಿಯಾಗಿ ತಮ್ಮ ಪವಿತ್ರ ದೇವಾಲಯವು ನುಚ್ಚುನೂರಾದಾಗ ದಕ್ಷಿಣಭಾರತಕ್ಕೆ ವಲಸೆ ಬಂದ ಇಸ್ರೇಲೀಯರ ಒಂದು ಗುಂಪನ್ನು ನಾವು ಆಶ್ರಯಕೊಟ್ಟು ಮಡಿಲಲ್ಲಿಟ್ಟುಕೊಂಡಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ. ಘನ ಜರತೃಷ್ಟ್ರ ಜನಾಂಗದ ಅವಶೇಷಕ್ಕೆ ಆಶ್ರಯವಿತ್ತ ಹಾಗೂ ಅವರನ್ನು ಈಗಲೂ ಪೋಷಿಸುತ್ತಿರುವ ಧರ್ಮಕ್ಕೆ ನಾನು ಸೇರಿದವನೆಂಬುದು ನನ್ನ ಹೆಮ್ಮೆ.

ಸೋದರರೇ, ನಾನು ಬಾಲ್ಯದಿಂದಲೂ ಪಟಿಸುತ್ತಿದ್ದ, ಮತ್ತು ಈಗಲೂ ಲಕ್ಷಾಂತರ ಹಿಂದೂಗಳು ಪಠಿಸುವ ಶ್ಲೋಕವೊಂದರಿಂದ ಕೆಲ ಸಾಲುಗಳನ್ನು ಉದ್ಧರಿಸಿ ನಿಮಗೆ ಹೇಳುತ್ತೇನೆ;
ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣಮತಿ|
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ||
ರುಚೀನಾಂ ವೈಚಿತ್ರ್ಯಾತ್ ಋಜ್ ಕುಟಿಲ ನಾನಾ ಪಥ ಜುಷಾಂ|
ನೃಣಾಮೇಕೋ ಗಮ್ಯಃ ತ್ವಮಸಿ ಪಯಸಾಂ ಅರ್ಣವ ಇವ||

ಎಂದರೆ, “ಹೇ ಭಗವಂತ! ಭಿನ್ನ ಭಿನ್ನ ಸ್ಥಾನಗಳಿಂದ ಉದಿಸಿದ ನದಿಗಳೆಲ್ಲವೂ ಹರಿದು ಕೊನೆಯಲ್ಲಿ ಸಾಗರವನ್ನು ಸೇರುವಂತೆ, ಮಾನವರು ತಮ್ಮತಮ್ಮ ವಿಭಿನ್ನ ಅಭಿರುಚಿಗಳಿಂದಾಗಿ ಅನುಸರಿಸುವ ಅಂಕುಡೊಂಕಿನ ಬೇರೆಬೇರೆ ದಾರಿಗಳೆಲ್ಲವೂ ಕೊನೆಗೆ ಬಂದು ನಿನ್ನನ್ನೇ ಸೇರುತ್ತವೆ”

ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆಸಲ್ಪಟ್ಟ ಮಹಾದ್ಭುತ ಸಮ್ಮೇಳನಗಳಲ್ಲಿ ಒಂದಾದ ಇಂದಿನ ಈ ಸಭೆಯು, ಭಗವದ್ಗೀತೆಯು ಬೋಧಿಸಿರುವ ಈ ಅದ್ಭುತ ತತ್ತ್ವಕ್ಕೆ ಸಾಕ್ಷಿಯಾಗಿದೆ, ಮತ್ತು ಅದನ್ನೇ ಸಾರುತ್ತದೆ;
ಯೇ ಯಥಾಂ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ|
ಮಮ ವರ್ತ್ಯಾನುವರ್ತಂತೇ ಮನುಷ್ಯಾಃ ಪಾರ್ಥಃ ಸರ್ವಶಃ||

ಅರ್ಥ- ‘ಯಾರು ಯಾರು ನನ್ನಲ್ಲಿಗೆ ಯವ ಯವ ಮಾರ್ಗದಿಂದ ಬರುತ್ತಾರೋ ಅವರವರನ್ನು ನಾನು ಅದದೇ ಮಾರ್ಗದಿಂದ ತಲುಪುತ್ತೇನೆ. ಮಾನವರು ಅನುಸರಿಸುವ ಮಾರ್ಗಗಳೆಲ್ಲ ಕೊನೆಗೆ ಬಂದು ಸೇರುವುದು ನನ್ನನ್ನೇ’

ಗುಂಪುಗಾರಿಕೆ, ತಮ್ಮ ಮತದ ಬಗ್ಗೆ ದುರಭಿಮಾನ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂಧತೆಗಳು ಬಹುಕಾಲದಿಂದ ಈ ಸುಂದರ ಭೂಮಿಯನ್ನು ಆಕ್ರಮಿಸಿಕೊಂಡಿವೆ. ಅವು ವಿಶ್ವವನ್ನು ಹಿಂಸೆಯಿಂದ ತುಂಬಿ, ಮತ್ತೆಮತ್ತೆ ಮಾನವನ ರಕ್ತದಿಂದ ತೋಯಿಸಿವೆ; ಅದೆಷ್ಟೋ ನಾಗರಿಕತೆಗಳನ್ನು ನಾಶ ಮಾಡಿವೆ. ದೇಶದೇಶಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಆ ಘೋರ ರಾಕ್ಷಸತನವಿಲ್ಲದಿದ್ದಲ್ಲಿ ಮಾನವ ಸಮಾಜವು ಈಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಮುಂದುವರೆದಿರುತ್ತಿತ್ತು. ಆದರೆ ಈಗ ಆ ರಾಕ್ಷಸತನದ ಅಂತ್ಯಕಾಲ ಸಮೀಪಿಸಿದೆ. ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಿಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ, ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ- ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ”

ಈ ಭಾಷಣ ಅಂದಿನ ಅತ್ಯಂತ ಪ್ರಭಾವೀ ಭಾಷಣವೆಂದು ಪರಿಗಣಿಸಲ್ಪಟ್ಟಿತ್ತು. ಎಲ್ಲ ದೇಶ-ಧರ್ಮಗಳ ಸಭಿಕರು- ಶ್ರೋತೃಗಳು ಸ್ವಾಮೀಜಿಯವರ ತೇಜಸ್ಸಿಗೆ, ವಾಗ್ವೈಖರಿಗೆ, ಪಂಡಿತ್ಯಕ್ಕೆ, ಹಿಂದೂ ಧರ್ಮದ ಶ್ರೇಷ್ಠತೆಗೆ ಮಾರುಹೋದರು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಣದ ಆರಂಭದಲ್ಲಿನ ಅವರ ಸಂಬೋಧನೆ ಅವರೆಲ್ಲರನ್ನೂ ಭಾವೋನ್ನತಿಗೆ ಏರಿಸಿಬಿಟ್ಟಿತ್ತು.

ಈ ಭಾಷಣವನ್ನು ಸ್ವಾಮೀಜಿ ಮಾಡಿದ್ದು ಸಾವಿರಾರು ಶ್ರೋತೃಗಳ ಎದುರಿಗೆ. ಗುಲಾಮಗಿರಿಯಿಂದ ನರಳುತ್ತಿದ್ದ ದೇಶವೊಂದರಿಂದ ಬಂದ ಬಡ ಸಂನ್ಯಾಸಿಯಾಗಿದ್ದರು ಅವರು. ಈ ಹಿನ್ನೆಲೆಯನ್ನೂ, ಭಾಷಣಾನಂತರದ ಪರಿಣಾಮಗಳನ್ನೂ ತಾಳೆ ಹಾಕಿದಾಗ ಸ್ವಾಮಿ ವಿವೇಕಾನಂದರ ಪ್ರಭಾವ ಎಷ್ಟಿತ್ತು ಎನ್ನುವುದು ಅರ್ಥವಾಗುತ್ತದೆ.