ಭಾರತ ಭಾಗ್ಯವಿಧಾತರು- ೨
ಚಾಫೇಕರ್ ಸಹೋದರರು
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾವು ಆರಿದ ನಂತರ ಮೊತ್ತ ಮೊದಲ ಕ್ರಾಂತಿ ಕಹಳೆ ಊದಿದ್ದು ವಾಸುದೇವ ಫಡ್ಕೆ. ಅದನ್ನು ಮುಂದುವರಿಸಿದ್ದು ಚಾಫೇಕರ್ ಸಹೋದರರು. ಮಹಾರಾಷ್ಟ್ರದಲ್ಲಿ ಜನಿಸಿದ ದಾಮೋದರ, ಬಾಲಕೃಷ್ಣ, ವಾಸುದೇವ ಎಂಬ ಈ ಮೂವರು ಸಹೋದರರು ಬಲಿದಾನದ ಪಾಠವನ್ನು ಸಾರಿ ಸ್ಫೂರ್ತಿ ತುಂಬಿದವರು. ಸ್ವಾತಂತ್ರ್ಯ ಹೋರಾಟಕ್ಕೆ ಸಮರ್ಪಣೆಯಾಗಬೇಕೆಂಬ ಅಸೀಮ ಉತ್ಸಾಹಕರೊಂದಿಗೆ ಅದಕ್ಕೆ ಅಗತ್ಯವಿರುವ ಪ್ರತಿಯೊಂದನ್ನೂ ರೂಢಿಸಿಕೊಂಡರು. ಅವರು ಒಬ್ಬೊಬ್ಬರೂ ಪ್ರತಿ ದಿನವೂ ೧೨೦೦ ಸೂರ್ಯ ನಮಸ್ಕಾರಗಳನ್ನು ಹಾಕುತ್ತ ತಮ್ಮ ಶರೀರವನ್ನು ಹುರಿಗೊಳಿಸಿಕೊಂಡಿದ್ದರು, ಕೀರ್ತನೆ ನಡೆಯುತ್ತ ತಂದೆಯೊಂದಿಗೆ ಊರೂರು ಸುತ್ತುತ್ತಿದ್ದ ಅವರು ಈ ಪ್ರವಾಸಗಳಿಂದಲೇ ಸಾಕಷ್ಟು ಅನುಭವ ಗಳಿಸಿದರು, ’ಚಾಫೇಕರ್ ಕ್ಲಬ್’ ಆರಂಭಿಸಿ, ಗೆಳೆಯರನ್ನು ಕಲೆಹಾಕಿ ಕ್ರಾಂತಿಕಾರ್ಯಕ್ಕೆ ಸಜ್ಜಾದರು. ಈ ಕಾಲಕ್ಕೆ ಹಿರಿಯ ದಾಮೋದರನಿಗೆ ೨೬ ವರ್ಷ, ಮಧ್ಯಮನಿಗೆ ೨೨ ವರ್ಷ, ಕಿರಿಯವನಿಗೆ ಕೇವಲ ೧೬ ವರ್ಷ!
ಮಹಾರಾಷ್ಟ್ರಕ್ಕೆ ತಗುಲಿಕೊಂಡ ಪ್ಲೇಗ್ ಮಾರಿ ದುಷ್ಟ ಅಧಿಕಾರಿ ರ್ಯಾಂಡನ್ನ ಕ್ರೂರ ಮುಖವನ್ನು ಪರಿಚಯಿಸಿತು. ರೋಗ ನಿರ್ಮೂಲನೆ ಹೆಸರಿನಲ್ಲಿ ಆತ ರೋಗಿಗಳ ಸಹಿತ ಅವರ ಮನೆಗಳನ್ನು ಸುಟ್ಟು ಹಾಕುವಂತೆ ಆದೇಶ ನೀಡಿಬಿಟ್ಟ! ಔಷಧ, ಅನ್ನ-ನೀರಿಗೂ ಕೊರತೆಯಾಗತೊಡಗಿತು. ಜನರಿಗೆ ಅಕ್ಷರಶಃ ’ನರಕ’ದರ್ಶನವಾಗತೊಡಗಿತು. ರ್ಯಾಂಡನ್ನ ಸಂಹಾರವಾಗದೆ ಅವರಿಗೆ ಮುಕ್ತಿಯೇ ಇರಲಿಲ್ಲ. ಚಾಫೇಕರ್ ಸಹೋದರರು ತಡಮಾಡಲಿಲ್ಲ. ಸೂಕ್ತ ಮುಹೂರ್ತ ಆರಿಸಿ ತೆಗೆದರು. ಧ್ಯಾನ, ಜಪ ಪೂರೈಸಿ, ಉಪವಾಸ ಮಾಡಿ ಯಶಸ್ಸಿಗೆ ಪ್ರಾರ್ಥಿಸಿದರು. ವಿಕ್ಟೋರಿಯಾ ರಾಣಿಯ ಪಟ್ಟಾಭಿಷೇಕದ ವಜ್ರಮಹೋತ್ಸವದ ಆಚರಣೆಗೆ ಬಂದಿದ್ದ ರ್ಯಾಂಡನ್ ಪಾಲಿಗೆ ಆ ದಿನವೇ ಕೊನೆಯ ದಿನವಾಗಿತ್ತು. ದಾಮೋದರ, ವಾಸುದೇವರು ಅವನ ಕಥೆ ಮುಗಿಸಿದರು. ಆದರೆ, ಚಾಣಾಕ್ಷಮತಿಗಳಾಗಿದ್ದ ಅವರು ಸಿಕ್ಕಿಬೀಳಲಿಲ್ಲ. ಈ ನಡುವೆ ಗಣೇಶ ಶಂಕರ ದ್ರವಿಡ ಎಂಬ ದ್ರೋಹಿ ’ಚಾಫೇಕರ್ ಕ್ಲಬ್’ ವಿವರಗಳನ್ನು ಪೋಲಿಸರಲ್ಲಿ ಬಹಿರಂಗಗೊಳಿಸಿದ. ವಿಚಾರಣೆ ನಾಟಕ ನಡೆದು ದಾಮೋದರನಿಗೆ ಮರಣದಂಡನೆ ವಿಧಿಸಲಾಯ್ತು. ೧೮೯೮ ರ ಏಪ್ರಿಲ್ ೧೮ ರಂದು ಫಾಸಿಯಾಯ್ತು. ಈ ವೇಳೆಗೆ ರ್ಯಾಂಡನ್ ಹತ್ಯೆ ಸಂದರ್ಭದಲ್ಲಿ ಸಂಹರಿಸಲ್ಪಟ್ಟಿದ್ದ ಆರ್ಯಸ್ಟನ್ ಸಾವಿಗೆ ಬಾಲಕೃಷ್ಣನನ್ನು ಆರೋಪಿಯನ್ನಾಗಿಸಲಾಗಿತ್ತು, ಪೋಲಿಸರು ಅವನ ತಲಾಷೆಯಲ್ಲಿದ್ದರು.
ದ್ರವಿಡ ಸಹೋದರರ ವಿದ್ರೋಹ ಚಾಫೇಕರ್ ಸಹೋದರರಿಗೆ ಕಿಚ್ಚು ಹಚ್ಚಿತ್ತು. ಉಪಾಯದಿಂದ ಯೋಜನೆ ಹೆಣೆದ ಅವರು, ಅವರಿಬ್ಬರನ್ನು ಕೊಂದು ದ್ರೋಹಕ್ಕೆ ತಕ್ಕ ಶಿಕ್ಷೆ ವಿಧಿಸಿದರು. ಮುಂದೆ ಬಾಲಕೃಷ್ಣ ಮತ್ತು ವಾಸುದೇವ ಬಂಧನವಾಯಿತು. ಒಂದು ತಿಂಗಳ ಅವಧಿಯಲ್ಲಿಯೇ( ವಾಸುದೇವ- ೮/೫/೧೮೯೯, ಬಾಲಕೃಷ್ಣ ೧೨/೫/೧೮೯೯) ಅವರಿಬ್ಬರಿಗೂ ಫಾಸಿಯಾಯ್ತು. ಅವರಿಗೆ ಸಹಕಾರ ನೀಡಿದ್ದ ರಾನಡೆ ಎಂಬಾತನೂ ಗಲ್ಲಿಗೇರಿಸಲ್ಪಟ್ಟ.
ಹೀಗೆ ಮಾತೃಭೂಮಿಯ ಪೂಜೆಗಾಗಿ ಒಂದೇ ಕುಟುಂಬದ ಮೂರು ಪುಷ್ಪಗಳು ಅರ್ಪಣೆಯಾದವು.
ಶ್ರೀ ನಾರಾಯಣ ಗುರು
ಪ್ರವಾದಿ, ಸಂತ, ಋಷಿ, ಸಮಾಜಸುಧಾರಕ… ಹೀಗೆ ಹಲವು ಬಗೆಯಲ್ಲಿ ಗುರುತಿಸಲ್ಪಡುವ ಕ್ರಾಂತಿಯೋಗಿ ಶ್ರೀನಾರಾಯಣ ಗುರುಗಳು. ಸಮಾಜದ ಏಳ್ಗೆಗೆ ಆಧ್ಯಾತ್ಮಿಕ ಬದುಕು ಪೂರಕವಾಗಿರಬೇಕೆಂದು ಸಾಧಿಸಿತೋರಿದರು. ಮುಖ್ಯವಾಗಿ ಅವರು ಹಿಂದೂ ಧರ್ಮಕ್ಕೆ ಮುಸುಕಿನಂತೆ ಆವರಿಸಿಕೊಂಡಿರುವ ಜಾತಿಪದ್ಧತಿ-ಅಸಮಾನತೆಗಳ ನಿರ್ಮೂಲನಕ್ಕೆ ಬಹುವಾಗಿ ಶ್ರಮಿಸಿದರು.
ನಾರಾಯಣ ಗುರುಗಳು ಜನಿಸಿದ್ದು ಕೇರಳದ ತಿರುವನಂತಪುರ ಸಮೀಪದ ಒಂದು ಹಳ್ಳಿಯಲ್ಲಿ. ಅವರ ತಂದೆ ಕೃಷಿ ಕಾರ್ಯದ ಜೊತೆಗೆ ಪುರಾಣ ವಾಚನವನ್ನು ಮಾಡುತ್ತಿದ್ದರು. ಇದರಿಂದಾಗಿ ನಾರಾಯಣರಿಗೆ ಬಾಲ್ಯದಿಂದಲೇ ಧಾರ್ಮಿಕ ಸಂಗತಿಗಳಲ್ಲಿ ಆಸಕ್ತಿ ಬೆಳೆಯುವಂತಾಯಿತು. ವಯಸ್ಕರಾದಂತೆಲ್ಲ ಅವರ ಆಂತರಿಕ ಜಗತ್ತಿನ ಹಂಬಲ ಬಲಿತು, ತಮ್ಮ ತಂದೆ ಮತ್ತು ಪತ್ನಿ ತೀರಿಕೊಂಡ ಬಳಿಕ ಮನೆಬಿಟ್ಟು ಹೊರಟು ಪರಿವ್ರಾಜಕ ಬದುಕನ್ನು ಪ್ರವೇಶಿಸಿದರು. ಮುಂದಿನ ದಿನಗಳಲ್ಲಿ ಹಠಯೋಗ ಸಾಧನೆ ಬದುಕನ್ನು ಪ್ರವೇಶಿಸಿದರು. ಇದು ಅವರ ಆಧ್ಯಾತ್ಮಿಕ ಬದುಕನ್ನು ಮತ್ತಷ್ಟು ಪ್ರಕರಗೊಳಿಸಿತು. ಅವರು ಕನ್ಯಾಕುಮಾರಿ ಬಳಿಯ ಗುಹೆಯೊಂದರಲ್ಲಿ ಏಳೆಂಟು ವರ್ಷಗಳ ಕಾಲ ನಿರಂತರ ತಪಶ್ಚರ್ಯೆಯಲ್ಲಿ ತೊಡಗಿಕೊಂಡಿದ್ದರು.
ಶಕ್ತಿಯನ್ನು(ಅಂಬಾ) ಇಷ್ಟದೇವತೆಯಾಗಿ ಸ್ವೀಕರಿಸಿದ ಗುರುಗಳು ದೇವಾಲಯ ಕಟ್ಟಿ ಪೂಜೆಯಲ್ಲಿ ನಿರತರಾಗುವುದಕ್ಕಿಂತ ಶಾಲೆಯನ್ನು ತೆರೆದು ಜ್ಞಾನದಾಸೋಹ ಮಾಡುವುದೇ ಶ್ರೇಷ್ಠವೆಂದು ಬಗೆದರು.
ತ್ರಿಶೂರ್, ಕಣ್ಣೂರ್, ಕಲ್ಲಿಕೋಟೆ, ಮಂಗಳೂರುಗಳಲ್ಲಿ ದೇವಾಲಯಗಳನ್ನು ತೆರೆದು ಅಲ್ಲಿ ಎಲ್ಲ ವರ್ಗದ ಜನರಿಗೂ ಮಕ್ತ ಪ್ರವೇಶ ಘೋಷಿಸುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ನಾಂದಿ ಹಾಡಿದರು. ೧೯೧೩ರ ಸುಮಾರಿಗೆ ’ಅದ್ವೈತ ಆಶ್ರಮ’ ವೊಂದನ್ನು ಸ್ಥಾಪಿಸಿ ಓಂ ಸಹೋದರ್ಯಮ್ ಸರ್ವತ್ರ (ಭಗವಂತನ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು) ಎಂಬ ಧ್ಯೇಯ ವಾಕ್ಯವನ್ನು ಹೊರಡಿಸಿದರು ಮತ್ತು ಅದನ್ನು ನೆರವೇರಿಸಲು ತಮ್ಮ ಬದುಕನ್ನು ಮುಡಿಪಾಗಿಟ್ಟರು. ಆಧ್ಯಾತ್ಮಿಕ ಬಲದ ಜೊತೆ ಜೊತೆಗೆ ಪ್ರತಿಯೊಬ್ಬ ಮನುಷ್ಯನ ಶಿಕ್ಷಣ, ಶುಚಿತ್ವ , ಭಕ್ತಿ , ಕೃಷಿಗಾರಿಕೆ, ವ್ಯವಹಾರ-ಕುಶಲತೆ, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಮತ್ತು ಅದನ್ನು ಪಡೆಯಲು ಎಲ್ಲಾ ವರ್ಗದವರಿಗೂ ಅಧಿಕಾರವಿದೆ ಎಂದು ಶ್ರೀ ನಾರಾಯಣ ಗುರುಗಳು ನುಡಿದರು. ೧೯೨೮ ರಲ್ಲಿ ತಮ್ಮ ೭೩ನೇ ವಯಸ್ಸಿನಲ್ಲಿ ಚಿರಸಮಾಧಿಗೆ ತೆರಳಿದ ನಾರಯಣಗುರುಗಳು ಇಂದಿಗೂ ಕೇರಳದಲ್ಲಿ ’ಸಾಮಾಜಿಕ ಕ್ರಾಂತಿಯ ಹರಿಕಾರ’ ಎಂದು ನೆನೆಯಲ್ಪಡುತ್ತಾರೆ . ೧೯೯೯ ರಲ್ಲಿ ಕೇರಳದ ಪ್ರಮುಖ ವೃತ್ತಪತ್ರಿಕೆ ’ಮಲಯಾಳ ಮನೋರಮಾ’ ನಾರಾಯಣ ಗುರುಗಳನ್ನು ಶತಮಾನದ ವ್ಯಕಿ ಎಂದು ಕರೆದು ಗೌರವಿಸಿದೆ.
ಕಿತ್ತೂರು ಚೆನ್ನಮ್ಮ
ಬ್ರಿಟಿಷರ ದೆಬ್ಬಾಳಿಕೆ ಮಿತಿ ಮೀರಿದಾಗ ಮೊಟ್ಟ ಮೊದಲ ಬಾರಿಗೆ ಅದಕ್ಕೆ ಸೆಡ್ಡುಹೊಡೆದು ನಿಂತು ಸ್ವಾತಂತ್ರ್ಯಹೋರಾಡಿದ ಕಹಳೆಯೂದಿದ ಭಾರತದ ವೀರನಾರಿ ನಮ್ಮ ಹೆಮ್ಮೆಯ ಚೆನ್ನಮ್ಮಾಜಿ.
ಚೆನ್ನಮ್ಮ ಹುಟ್ಟಿದ್ದು ಬೆಳಗಾವಿಯಲ್ಲಿ. ಮದುವೆಯಾಗಿ ಸೇರಿದ್ದು ಮಲ್ಲಸರ್ಜನ ಪತ್ನಿಯಾಗಿ-ಕಿತ್ತೂರು ಸಂಸ್ಥಾನವನ್ನು, ಚೆನ್ನಮ್ಮಳಿಗೆ ಮಕ್ಕಳಾಗದ ಕಾರಣ ಅವಳು ತನ್ನ ಮಲ ಮಗ ಶಿವಲಿಂಗರುದ್ರ ಸರ್ಜನನ್ನೇ ತನ್ನ ಮಗನಂತೆ ಕಾಣುತ್ತಿದ್ದಳು. ಪತಿಯ ಮರಣಾನಂತರ ಆತನಿಗೇ ಪಟ್ಟಕಟ್ಟಿ ಆಡಳಿತ ನಡೆಸಿದಳು. ಆದರೆ ಶಿವಲಿಂಗರುದ್ರನೂ ಮಕ್ಕಳಿಲ್ಲದೆ ತೀರಿಕೊಂಡ. ಅದಕ್ಕೆ ಮುನ್ನ ಆತ ಶಿವಲಿಂಗಪ್ಪ ಎನ್ನುವ ಬಾಲಕನನ್ನು ದತ್ತುತಗೆದುಕೊಂಡ. ಆ ವೇಳೆಗೆ ಬ್ರಿಟಿಷರು’ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎನ್ನುವ ದುರ್ನೀತಿಯನ್ನು ಜಾರಿ ಮಾಡಿದ್ದರು. ಇದೇ ಕಾರಣವೊಡ್ಡಿ ಧಾರವಾಡದ ಕಲೆಕ್ಟರನಾಗಿದ್ದ ಥ್ಯಾಕರೆ ಈ ದತ್ತಕವನ್ನು ಪ್ರಶ್ನಿಸಿ ತನಗೆ ನಿಷ್ಠರಾಗಿದ್ದ ಮಲ್ಲಪ್ಪ ಶೆಟ್ಟಿ ಹಾಗೂ ವೆಂಕಟರಾಯನನ್ನು ಪ್ರತಿನಿಧಿಯಾಗಿ ನೇಮಿಸಿಬಿಟ್ಟ.
ಆದರೆ ಚೆನ್ನಮ್ಮ ಸುಮ್ಮನಗಲಿಲ್ಲ, ರಾಜಮನೆತನಕ್ಕೆ ಬೆಂಬಲವಾಗಿದ್ದವರ ಸಹಕಾರದಿಂದ ಮೊಮ್ಮಗನಿಗೆ ಪಟ್ಟಕಟ್ಟಿ, ತಾನು ರಕ್ಷಣೆಗೆ ನಿಂತಳು. ಕಪ್ಪ ಕೇಳಲು ಬಂದ ಥ್ಯಾಕರೆಗೆ ಮಾರುತ್ತರ ನೀಡಿ ಕಳುಹಿಸಿ ತನ್ನ ಕೆಚ್ಚು ಮೆರೆದಳು. ಮುಂದೆ, ಕೋಟೆಗೆ ಮುತ್ತಿಗೆ ಹಾಕಲು ಬಂದ ಥ್ಯಾಕರೆ ತನ್ನ ಜೀವ ಕಳೆದುಕೊಂಡ. ಇಷ್ಟೆಲ್ಲ ಹೋರಾಟದ ನಡುವೆಯೂ ಸ್ವಜನರ ದ್ರೋಹದಿಂದ ಚೆನ್ನಮ್ಮ ಬ್ರಿಟಿಷರ ಸೆರೆಯಾಳಾಗುವ ದುರ್ದಿನ ಬಂದೇ ಬಂತು. ಆದರೂ ಈ ವೀರರಾಣಿ ಅಂತಿಮ ಕ್ಷಣದವರೆಗೂ ತನ್ನ ಪ್ರತಿರೋಧ ತೋರಿದಳು. ಸೆರೆಮನೆಯಿಂದಲೇ ಸಂಗೊಳ್ಳಿ ರಾಯಣ್ಣ ಎಂಬ ವೀರನಿಗೆ ಮಾರ್ಗದರ್ಶನ ನೀಡುತ್ತಿದ್ದಳು. ಆದರೂ ಸ್ವಾತಂತ್ರ್ಯ ಕಳೆದುಕೊಂಡು ಬೋನಿಗೆ ಬಿದ್ದ ಸಿಂಹಿಣಿಯಂತಾಗಿದ್ದ ಕಿತ್ತೂರಿನ ರಾಣಿ ಚೆನ್ನಮ್ಮ ಜರ್ಝರಿತಳಾಗಿ ಹೋಗಿದ್ದಳು. ನಾಲ್ಕು ವರ್ಷ ಸೆರೆವಾಸ ಅನುಭವಿಸಿ ಅಸುನೀಗಿದಳು.
2 comments