ಇಂಥದೊಂದು ಯೋಜನೆಯಿದೆ…
ಒಂದಿಡೀ ಗ್ರಂಥ ಹೇಳಬಹುದಾದ ತತ್ತ್ವವನ್ನು ಒಂದು ಚಿಕ್ಕ ಕಥೆ ಅತಿ ಸಮರ್ಥವಾಗಿ ನಿರೂಪಿಸಬಲ್ಲದು. ನಮ್ಮ ಜಾನಪದ ಕಥೆಗಳು, ದೃಷ್ಟಾಂತ ಕಥೆಗಳು ಇದಕ್ಕೆ ಸಾಕ್ಷಿ. ಶ್ರೀ ರಾಮ ಕೃಷ್ಣ ಪರಮಹಂಸರು ಈ ಬಗೆಯ ದೃಷ್ಟಾಂತ ಕಥೆಗಳಿಂದಲೇ ಬಹುತೇಕ ಗೃಹೀ ಭಕ್ತರಿಗೆ ಜೀವನ ಸಾರವನ್ನು ಬೋಧಿಸುತ್ತಿದ್ದರು. ಓಶೋ ಹೇಳುತ್ತಿದ್ದ ಕಥೆಗಳು, ಸೂಫೀ ಸಂತರ, ಝೆನ್ ಪಂಗಡದ ಕಥೆಗಳು ಇವೆಲ್ಲವೂ ಗಹನ ತತ್ತ್ವ ಜ್ಞಾನವನ್ನು ಅತ್ಯಂತ ಸರಳೀಕರಿಸಿ ಹೇಳಬಲ್ಲಂಥವು. ಕೆಲವೇ ಸಾಲುಗಳ ನಿರೂಪಣೆಯಿಂದ ತಿಂಗಳು- ವರ್ಷಗಟ್ಟಲೆ ಚಿಂತನೆಗೆ ಹಚ್ಚಬಲ್ಲಂಥವು.
ನಮ್ಮ ರಾಷ್ಟ್ರದ, ಸಂಸ್ಕೃತಿಯ ಹೆಮ್ಮೆಯ ಕೃತಿಗಳಾದ ರಾಮಾಯಣ, ಮಹಾಭಾರತ, ವೇದ- ಉಪನಿಷತ್ತುಗಳೂ ಕೂಡ ಬೋಧನೆಗೆ ಇದೇ ತಂತ್ರವನ್ನು ಅನುಸರಿಸಿವೆ. ಈ ಮಹತ್ಕೃತಿಗಳಲ್ಲಿ ನಡುನಡುವೆ ಬರುವ ಉಪಮೆಗಳು, ದೃಷ್ಟಾಂತಗಳು ಆ ಇಡಿಯ ಕೃತಿಯ ಒಟ್ಟಾರೆ ಆಶಯವನ್ನು ಬಿಂಬಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ವಿಶ್ವಾದ್ಯಂತ ಭೋರ್ಗರೆಯುತ್ತಿರುವ ಕಥಾಸಾಗರವನ್ನು ತಂದಿಲ್ಲಿ ಹರಿಸುವುದು ಸಾಧ್ಯವಾಗದ ಕೆಲಸ… ಸಾಧ್ಯವೇ ಆಗದ ಕೆಲಸ! ಆದರೆ ಬೊಗಸೆಯಲ್ಲಿ ಸಿಕ್ಕಷ್ಟನ್ನು ನಿಮಗೆ ನೀಡುವ ಪ್ರಾಮಾಣಿಕ ಯತ್ನ ನಾನು ಮಾಡುತ್ತೇನೆ. ಹೀಗೆ ಕಥೆಗಳನ್ನೆಲ್ಲ ಒಟ್ಟು ಮಾಡಬೇಕೆನ್ನುವ ಸ್ಫೂರ್ತಿ ದೊರಕಿದ್ದು ತೆಲುಗಿನ (ಇಂಗ್ಲೀಶ್ ಬ್ಲಾಗ್) ಮಾರಲ್ ಸ್ಟೋರೀಸ್ ಬ್ಲಾಗಿನಿಂದ. ಆದರೆ ಅಲ್ಲಿ ಕೇವಲ ಭಾರತದ, ಭಾರತೀಯರ ಕಥೆಗಳು ಮಾತ್ರವೇ ಇದ್ದು, ನಾನು ಆ ಮಿತಿಯನ್ನು ದಾಟಿ ಇತರ ದೇಶ- ಭಾಷೆ- ಸಂಸ್ಕೃತಿಗಳತ್ತಲೂ ಕೈಚಾಚಬೇಕು ಅಂದುಕೊಂಡಿದ್ದೇನೆ.
ನನ್ನ ಮುಂದಿನ ಯೋಜನೆಗಳೇನೋ ದೊಡ್ಡದೊಡ್ಡದಿವೆ. ಓದಿನ ಕುತೂಹಲಕ್ಕೆ ಕಥೆಗಳು, ರಾಷ್ಟ್ರವೀರರ- ಮಹಾತ್ಮರ ಸಂಗತಿಗಳು, ಮಾಹಿತಿಗಳು… ಹೀಗೆ ಎಲ್ಲವನ್ನೂ ಒಳಗೊಂಡು ಅಚ್ಚುಕಟ್ಟಾಗಿ ಈ ಬ್ಲಾಗನ್ನು ನಡೆಸಿಕೊಂಡುಹೋಗಬೇಕೆಂದಿದ್ದೇನೆ. ಮತ್ತು, ಇವೆಲ್ಲವನ್ನೂ ನಾನು ‘ರಾಷ್ಟ್ರ ಶಕ್ತಿ ಕೇಂದ್ರ’ದ ಯೋಜನೆಗಳ ಒಂದು ಭಾಗವಾಗಿ ಮಾಡುತ್ತೇನೆ. ಈ ಎಲ್ಲ ಕಥೆ- ಮಾಹಿತಿಗಳನ್ನು ಕಲೆ ಹಾಕಲು ಸಾಕಷ್ಟು ಶ್ರಮ- ಓದು- ಪ್ರಯತ್ನಗಳನ್ನು ಹಾಕಿರುವುದರಿಂದ, ಮತ್ತು ಚಕ್ರವರ್ತಿಯವರ ಭಾಷಣ- ಬರಹಗಳು ಪುಸ್ತಕ ರೂಪದಲ್ಲಿ ಬರುತ್ತಿರುವುದರಿಂದ ಲೇಖನಗಳಿಗೆ ಕಾಪಿ ರೈಟ್ ಇದ್ದು, ಯಾರೇ ಆಗಲಿ ಅದನ್ನು ಬಳಸಿಕೊಳ್ಳಲು ಪೂರ್ವಾನುಮತಿ ಪಡೆಯಬೇಕಾಗುತ್ತದೆ. (ಲಿಂಕ್ ಕೊಡಲು ಅಲ್ಲ, ಲೇಖನ ಬಳಕೆಗೆ ಮಾತ್ರ)
ಧನ್ಯವಾದ.
ಚಕ್ರವರ್ತಿ,
ಕಾಯ್ತಾ ಇದೇವೆ. ಬೇಗ ಬರೆಯಲು ಪ್ರಾರಂಭಿಸಿ!!