ರಾಷ್ಟ್ರ ಶಕ್ತಿ ಕೇಂದ್ರ

ಗಿಳಿ ಹೇಳಿದ ಪಾಠಗಳು

Posted in ಕಥಾ ಕಾಲಕ್ಷೇಪ by yuvashakti on July 14, 2008

ಹೀಗೇ ಒಂದು ದಿನ ದೇವೇಂದ್ರ ತನ್ನ ಪರಿವಾರದೊಂದಿಗೆ ಲಕ್ಷ್ಮೀ ಕಟಾಕ್ಷ ಹೊಂದುವ ಸಲುವಾಗಿ ಹೊರಟಿದ್ದ. ದಾರಿಯುದ್ದಕ್ಕೂ ಬಗೆ ಬಗೆಯ ವೃಕ್ಷರಾಜಿಗಳು ಕಂಗೊಳಿಸ್ತಿದ್ದವು. ಬಗೆ ಬಗೆಯ ಹೂ ಹಣ್ಣು ಹೊತ್ತ ಮರಗಳು. ಅವುಗಳಲ್ಲಿ ಮನೆ ಮಾಡಿ ಚಿಲಿಪಿಲಿಗುಟ್ಟುತ್ತ ಹರ್ಷಿಸುತ್ತಿದ್ದ ಹಕ್ಕಿಗಳು, ಚಿನ್ನಾಟವಾಡುತ್ತಿದ್ದ ಮೃಗ ಸಮೂಹ ಇವೆಲ್ಲವೂ ಶಚೀಪತಿಯ ಮನಸ್ಸನ್ನು ಉಲ್ಲಾಸಗೊಳಿಸಿತ್ತು.
ಹೀಗಿರಲಾಗಿ, ದಾರಿಯಲ್ಲೊಂದು ದೈತ್ಯಾಕಾರದ ವೃಕ್ಷವೊಂದು ಎದುರಾಯ್ತು. ಆದರೆ ಅದು ಪೂರ್ತಿಯಾಗಿ ಒಣಗಿ, ಬೋಳಾಗಿಹೋಗಿತ್ತು. ಜೀವವಿಲ್ಲದ ತೊಗಟೆಗಳನ್ನು ಹೊದ್ದು ನಿಂತಿದ್ದ ಆ ಮರ ವಿಕಾರವಾಗಿಯೂ ಭಯಾನಕವಾಗಿಯೂ ತೋರುತ್ತಿತ್ತು. ಅದರ ಕೆಳ ಟೊಂಗೆಯ ತುದಿಯಲ್ಲೊಂದು ಸೊರಗಿದ ಗಿಳಿ. ಅದಂತೂ ನಿಶ್ಶಕ್ತಿಯಿಂದ ಪೂರಾ ಬಳಲಿಹೋಗಿತ್ತು. ಆದರೂ ಏನೋ ಧ್ಯಾನಿಸುತ್ತ ಕುಳಿತಿದ್ದ ಅದರ ಮುಖದಲ್ಲಿ ತೇಜಸ್ಸು ಹೊಮ್ಮುತ್ತಿತ್ತು.

gili patha

ದೇವೇಂದ್ರ ಒಣಗಿದ ಮರದಲ್ಲಿ ಕುಳಿತು ಈ ಗಿಳಿ ಏನು ಮಾಡುತ್ತಿದೆ? ಎಂದು ಅಚ್ಚರಿಪಟ್ಟ. ಅದನ್ನು ಕುರಿತು ಮಾತನಾಡಿಸಿದ.
“ಶುಕ ರಾಜ, ಸತ್ತುಹೋಗಿರುವ ಈ ಮರದಲ್ಲಿ ಇನ್ನೂ ಯಾಕೆ ನೆಲೆಸಿದ್ದೀ? ಹಣ್ಣು ಹಂಪಲುಗಳಿಲ್ಲದ ನೀನು ಅದೆಷ್ಟು ಕೃಶವಾಗಿ ಹೋಗಿದ್ದೀ ನೋಡಿಕೊಳ್ಳಬಾರದೆ? ಮತ್ತೆರಡು ದಿನ ನೀನು ಇಲ್ಲೇ ನಿಂತೀಯಾದರೆ ಖಂಡಿತ ಜೀವ ಕಳೆದುಕೊಳ್ಳುವೆ. ಹೋಗು. ಯಾವುದಾದರೂ ಸಂಪದ್ಭರಿತ ಮರಕ್ಕೆ ಹೋಗು. ಬೇಕಾದಲ್ಲಿ ನನ್ನ ಭಟರು ನಿನಗೆ ಸಹಾಯ ಮಾಡುವರು” ಎಂದು ತಿಳಿ ಹೇಳಿದ.

ದೇವ ರಾಜನ ಮಾತಿಗೆ ಗಿಳಿ ಕಣ್ತೆರೆಯಿತು. ಆ ಮಾತುಗಳಿಂದ ಅದು ವಿಸ್ಮಯಗೊಂಡಿತ್ತು. ವಿನಮ್ರವಾಗಿ ನಮಸ್ಕರಿಸುತ್ತ ಅದು ತನ್ನ ವೃತ್ತಾಂತವನ್ನು ತಿಳಿಸಿತು.
“ ದೇವತೋತ್ತಮ, ನಾನು ಕುಳಿತಿರುವ ಈ ವೃಕ್ಷ ಸಾಮಾನ್ಯವಾದುದಲ್ಲ. ಇದು ಕಲ್ಪ ವೃಕ್ಷ. ನನ್ನ ಪೂರ್ವಜರು ಇಲ್ಲಿಯೇ ಜನಿಸಿ, ಇಲ್ಲಿಯೇ ನೆಲೆ ನಿಂತರು. ಲೆಕ್ಕಕ್ಕೆ ಸಿಗದಷ್ಟು ತಲೆಮಾರುಗಳಿಂದ ನನ್ನ ವಂಶಸ್ಥರು ಇಲ್ಲಿ ಆಗಿ ಹೋಗಿದ್ದಾರೆ. ನಾನೂ ಇಲ್ಲಿಯೇ ಹುಟ್ಟಿದೆ, ಇಲ್ಲಿಯೇ ಈ ಮರದ ಸ್ವಾದಿಷ್ಟ ಫಲಗಳನ್ನು ಉಣ್ಣುತ್ತ, ದಟ್ಟ ಎಲೆಗಳ ತಣ್ಣನೆಯ ಆಸರೆಯಲ್ಲಿ ಬೆಳೆದೆ. ಆದರೆ, ವಿಧಿ ನಿಯಮದಂತೆ ಒಂದು ಕಲ್ಪದ ವರೆಗೆ ಬದುಕಿದ್ದ ಈ ವೃಕ್ಷವು ನಿಯಮಿತ ಅವಧಿ ಮುಗಿಸಿ ಜೀವ ತೊರೆಯಿತು.
ಆದರೇನು? ಈ ವೃಕ್ಷವು ಹೂ ಹಣ್ಣೂಗಳನ್ನು ಕೊಡುವಾಗ ನಾನು ಇಲ್ಲಿಯೇ ಇದ್ದೆನಲ್ಲವೇ? ಈಗ ಅದು ಒಣಗಿಹೋಗಿದೆ ಎಂದಾದಾಗ ಬಿಟ್ಟುಹೋಗುವುದು ಕೃತಘ್ನತೆಯಾಗುವುದಿಲ್ಲವೇ?”

ಗಿಳಿಯ ಮಾತಿನಿಂದ ದೇವೇಂದ್ರನಿಗೆ ಮತ್ತಷ್ಟು ಅಚ್ಚರಿಯಾಯಿತು. ಅವನು ಮತ್ತೆ ತಿಳಿಹೇಳಿದ,
“ ಖಗೋತ್ತಮ, ನೀನು ಜ್ಞಾನಿಯೂ ಮೇಧಾವಿಯೂ ಆಗಿರುವೆ. ಆದರೂ ಹೇಳುತ್ತಿದ್ದೇನೆ ಕೇಳು: ಈ ವನಸ್ಪತಿಯು ತನ್ನ ಸ್ವಧರ್ಮವನ್ನು ( ಹೂ- ಹಣ್ಣುಗಳನ್ನು ನೀಡದೆ ಇರುವ ಮೂಲಕ) ಬಿಟ್ಟುಕೊಟ್ಟಿದೆ. ಆದರೂ ನೀನು ನಿನ್ನ ಸ್ವಭಾವವನ್ನು ಅನುಸರಿಸುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ನೀನು ಈ ನಿರ್ಜೀವ ಕಲ್ಪ ವೃಕ್ಷದ ಬದಲು ಯಾವುದಾದರೂ ಫಲ ವೃಕ್ಷವನ್ನು ಆಶ್ರಯಿಸುವುದೇ ಸೂಕ್ತವೆನಿಸುತ್ತದೆ”

ದೇವೇಂದ್ರ ಹೆಳಿದಂತೆ, ಗಿಳಿ ನಿಜಕ್ಕೂ ಮೇಧಾವಿ.
“ದೇವ ರಾಜ, ಖಗ- ಮೃಗಗಳು ಚಲನಶೀಲ ಚೈತನ್ಯವನ್ನು ಹೊಂದಿರುತ್ತವೆ. ನಾವು ಕಾಲ ಧರ್ಮಕ್ಕೆ ಒಳಗಾದರೂ ನಮ್ಮ ಸ್ವಭಾವವನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಹೊಂದಿದ್ದೇವೆ. ಆದರೆ ವೃಕ್ಶಗಳು ಜಡ ಚೈತನ್ಯಶಾಲಿಗಳು. ಅವುಗಳಿಗೆ ಕಾಲಧರ್ಮಕ್ಕೆ ತಲೆಬಾಗುವ ವಿನಃ ಅನ್ಯ ಮಾರ್ಗವಿಲ್ಲ. ಹೀಗಗಿ ಅವು ತಮ್ಮ ಸ್ವಧರ್ಮವನ್ನೂ ಸ್ವಭಾವವನ್ನೂ ತ್ಯಜಿಸಬೇಕಾಗುತ್ತದೆ. ಇಷ್ಟಕ್ಕೂ ಚೈತನ್ಯ ಕಳೆದುಕೊಂಡಿರುವ ವೃಕ್ಷದ ಧರ್ಮ ಕಳೆದಿದೆ ಎಂದ ಮಾತ್ರಕ್ಕೆ ಇನ್ನೂ ಸಚೇತನನಾಗಿರುವ ನಾನು ಸ್ವಭಾವ ಕಳೆದುಕೊಳ್ಳುವುದು ಹೇಗೆ ಸೂಕ್ತವಾದೀತು? ಇಷ್ಟಕ್ಕೂ, ನಿನಗೆ ತಿಳಿಯದ ಸಂಗತಿ ಯಾವುದಿದೆ ಹೇಳು?” ಎಂದು ಮಾರ್ನುಡಿದು ಇಂದ್ರನ ಮೆಚ್ಚುಗೆಗೆ ಪಾತ್ರವಾಯಿತು.

ಶುಕರಾಜನ ಮಾತಿಗೆ ತಲೆದೂಗಿದ ದೇವ ರಜ ಕೇಳ್ದಿಅ, “ನಿನಗೆ ಈ ಎಲ್ಲ ಸಂಗತಿ ಹೇಗೆ ತಿಳಿಯಿತು? ನೀನು ಹೇಗೆ ಈ ಜ್ಞಾನವನ್ನು ಪಡೆದುಕೊಂಡೆ?”
ಗಿಳಿ ಹೇಳಿತು, ” ನಾನು ಎಂದೂ ಸುಳ್ಳನ್ನಾಡಲಿಲ್ಲ. ಇತರರ ಆಹಾರ ಕಸಿದುಕೊಳ್ಳಲಿಲ್ಲ. ಮಿತ್ರ ದ್ರೋಹ ಮಾಡಲಿಲ್ಲ. ಎಂದೂ ಯಾರನ್ನೂ ಅವಮಾನಿಸಲಿಲ್ಲ. ಈ ಕಾರಣದಿಂದಲೇ ನನಗೆ ಸಹಜವಾದ ನಿರ್ಮಲ ಜ್ಞಾನ ದೊರಕಿದೆಯೆಂದುಕೊಳ್ಳುವೆ”

ಗಿಳಿಯ ವಿನಯವಂತಿಕೆ ಮತ್ತು ಸಚ್ಚರಿತ್ರೆಯಿಂದ ಪ್ರಭಾವಿತನಾದ ದೇವೇಂದ್ರ, ಏನಾದರೊಂದು ವರ ಕೇಳುವಂತೆ ಹೇಳಿದ. ಸ್ವರ್ಗ ಲೋಕದಲ್ಲಿ ಸ್ಥನ ಕೊಡುವೆನೆಂದ. ಅದನ್ನು ನಿರಾಕರಿಸಿದ ಗಿಳಿ, ತನಗೆ ಅತ್ಯಂತ ಪ್ರೀತಿ ಪಾತ್ರವಾಗಿದ್ದ ಕಲ್ಪವೃಕ್ಷದ ಪುನರುಜ್ಜೀವನವನ್ನೇ ಬಯಸಿತು. ಇಂದ್ರ ‘ತಥಾಸ್ತು’ ಎನ್ನುತ್ತಾ, ಕಲ್ಪ ವೃಕ್ಷಕ್ಕೆ ಜೀವದಾನ ಮಾಡಿದ.

                                                      * * *
ಬಹುಶಃ ನೀವು ಕೆಳಬಹುದು. ಈ ಕಥೆ ಏನು ಹೇಳುತ್ತದೆ? ಎಂದು. ಅದಕ್ಕಿಂತಲೂ, ಇಂಥ ಕಥೆಗಳಿಂದ ಏನು ಪ್ರಯೋಜನ? ಎಂದು.
ಮೊದಲಿಗೆ ಇಲ್ಲಿ “ಜನನೀ ಜನ್ಮ ಭೂಮಿಶ್ಚ….” ಅನ್ನುವ ಭಾವ ಎದ್ದು ಕಾಣುವುದನ್ನ ಧಾರಾಳವಾಗಿ ಗುರುತಿಸಬಹುದು.
ಎರಡನೆಯದಾಗಿ ಗಿಳಿ ನಿರ್ಮಲ ಜ್ಞಾನವನ್ನು  ಹೊಂದಿದ ಬಗೆ. ಅದರ ನಡವಳಿಕೆ ನಮಗೆ ಮಾದರಿ. ಬರಿಯ ಓದು- ವಿದ್ಯೆ, ಜ್ಞಾನವಾಗುವುದಿಲ್ಲವಲ್ಲ!?
ಮೂರನೆಯದಾಗಿ ಅಥವಾ ಮೊತ್ತ ಮೊದಲನೆಯದಾಗಿ ನಾವು ಈ ಕಥೆಯನ್ನು ಹೆಣೆದ ನಮ್ಮ ಪೂರ್ವಜರ ಜ್ಞಾನ ಭಂಡಾರದ ವ್ಯಾಪ್ತಿಯನ್ನು ತಿಳಿಯಬಹುದು. ಜಡತೆ, ಚಲನಶೀಲತೆ, ಚೈತನ್ಯಗಳ ವಿಶ್ಲೇಷಣೆ ಅವರ ಜೀವ ಭೌತಿಕ ಶಾಸ್ತ್ರದ ಅರಿವನ್ನು ಹೇಳುತ್ತದೆ. ‘ಕಲ್ಪ’ದ ಉಲ್ಲೇಖ, ಅವರ ಕಾಲ ಜ್ಞಾನದ ಬಗ್ಗೆ ಮಾಹಿತಿ ನೀಡುತ್ತದೆ.

ಪಠ್ಯಗಳಲ್ಲಿ ಅರವತ್ತು ಸೆಕೆಂಡಿಗೆ ಒಂದು ನಿಮಿಷ, ಗಂಟೆಗೆ ಅರವತ್ತು ನಿಮಿಷ, ಇಪ್ಪತ್ನಾಲ್ಕು ಗಂಟೆಗೆ ದಿನ, ಮುನ್ನೂರರವತ್ತೈದು ದಿನಕ್ಕೆ ವರ್ಷ… ಎಲ್ಲ ಓದಿಕೊಂಡಿದ್ದೇವೆ. ಆಮೇಲೆ?
ಮನೆಯಲ್ಲಿ ಅಪ್ಪ ಅಮ್ಮನಿಂದ ಒಂದಷ್ಟು ಕಲಿತವರಿಗೆ ಅರವತ್ತು ವರ್ಷ ಸೇರಿ ಒಂದು ಸಂವತ್ಸರ ಅನ್ನುವ ವರೆಗೆ ಗೊತ್ತಿರುತ್ತದೆ ಸದ್ಯ! ಆಮೇಲೆ?
ಅದನ್ನ ಪದವಿ ನಂತರ ವಿಶೇಷವಾಗಿ ಅಧ್ಯಯನ ಮಾಡಬಹುದು ಎಂದೇನೋ ನೀವು ಹೇಳಬಹುದು. ಅಲ್ಲಿ ಕೊಡಮಾಡುವ ಕಬ್ಬಿಣದ ಕಡಲೆಗಳನ್ನು ಜಗಿಯುತ್ತ ಅರಗದೆ ಹೋಗಬಹುದು. ಎಲ್ಲೋ ಕೆಲವರಿಗೆ ಸಿದ್ಧಿ ದಕ್ಕಿದರೂ ದಕ್ಕಬಹುದು!

ಇರಲಿ. ಸಧ್ಯಕ್ಕೆ, ನಮ್ಮ ಪೂರ್ವಜರು ಲೆಕ್ಕ ಹಾಕಿಟ್ಟ ಕಾಲ ಗಣನೆಯ ವಿಧಾನವನ್ನು ಇಲ್ಲಿ ಕೊಡುತ್ತಿದ್ದೇನೆ. ಇದನ್ನೂ ಈಗ ಮೂರು- ನಾಲ್ಕು ದಶಕಗಳಿಂದ ವಿಜ್ಞಾನಿಗಳು ಗಂಭೀರವಾಘಿ ಅಧ್ಯಯನ ನಡೆಸಿ ಅತ್ಯಂತ ವೈಜ್ಞಾನಿಕವೆಂದು ಘೋಶಿಸಿದ್ದಾರೆ. ನಮ್ಮ ಋಷಿಪರಂಪರೆಯ ಜ್ಞಾನಕ್ಕೆ ಬಾಗಿ ಶರಣೆಂದಿದ್ದಾರೆ, ತಾವೂ ಈ ನಿಧಿಯಿಂದ ಅಗತ್ಯ ಮಾಹಿತಿಗಳನ್ನು ಬಳಸಿ ಸಂಶೋಧನೆ ನಡೆಸುತ್ತಿದ್ದಾರೆ.

ಈ ಮುವ್ವತ್ತು- ನಲ್ವತ್ತು ವರ್ಷಗಳಿಂದಲೇ ಯಾಕೆ?
ಯಾಕೆಂದರೆ ಅರವತ್ತು ವರ್ಷಗಳ ಮುನ್ನ ನಾವು ಗುಲಾಮರಾಗಿದ್ದೆವು. ನಮ್ಮ ಯಾವ ಮಾತಿಗೂ ಗೌರವ- ಮನ್ನಣೆ ಸಿಗುತ್ತಿರಲಿಲ್ಲ. ನಾವು ಸ್ವತಂತ್ರರಾಗಿ, ಅದನ್ನು ಉಳಿಸಿಕೊಳ್ಳುವ ತಾಕತ್ತು ತೋರಿದ ನಂತರವಷ್ಟೇ ನಮಗೆ ಜಗತ್ತಿನಲ್ಲಿ ಮತ್ತೆ ಜಾಗ ಸಿಕ್ಕಿದ್ದು. ಇಂಥ ಗೌರವ ಗಳಿಸಿಕೊಟ್ಟವರು, ಮತ್ತದೇ, “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದುಕೊಂಡು ಅದಕ್ಕಾಗಿ ಪ್ರಾಣ ತೆತ್ತ, ಹೋರಾಡಿದ ಮಹಾತ್ಮರು.

ಅದನ್ನು ಬೇರೊಂದು ಶಿರೋನಾಮೆಯಡಿಯಲ್ಲಿ ಚರ್ಚಿಸೋಣ. ಸಧ್ಯಕ್ಕೆ, ವೇದಗಳಲ್ಲಿ ಉಲ್ಲೇಖವಾಗಿರುವಂತೆ ಕಾಲ ಗಣನೆ ಮಾಪನಗಳನ್ನು ಇಲ್ಲಿ ನೀಡಿದ್ದೇವೆ, ಗಮನಿಸಿ.

* * *

 ಒಂದು ಕಮಲದ ಹೂವಿನ ದಳವನ್ನು ಹರಿತವಾದ ಮೊನೆಯ ಸೂಜಿಯಿಂದ ಚುಚ್ಚಿ ರಂಧ್ರ ಮಾಡಲು ಬೇಕಾಗುವ ಕಾಲವನ್ನು ‘ತ್ರುಟಿ’ ಎಂದು ಕರೆದು ಅದರಿಂದ ದೀರ್ಘಕಾಲಗಳ ಮಾಪನೆ ಮಾಡುತ್ತಿದ್ದ ಬೆಳವಣಿಗೆ ಬೆರಗುಮೂಡಿಸುತ್ತದೆ.
ಕಮಲದ ಎಸಳನ್ನು ರಂಧ್ರ ಮಾಡಲು
ಅಗತ್ಯವಾಗುವ ಸಮಯ  = ೧ ತ್ರುಟಿ
೧೦೦ ತ್ರುಟಿಗಳು  = ೧ಲವ
೧೦೦ ಲವಗಳು  = ೧ನಿಮೆಷ (ಕಣ್ಣು ಮಿಟಿಕಿಸುವಷ್ಟು ಸಮಯ)
೪ ೧/೨ ನಿಮೆಷ  = ೧ ದೀರ್ಘ ಅಕ್ಷರ ಉಚ್ಚರಣಾ ಸಮಯ
೪ ದೀರ್ಘ ಅಕ್ಷರ  = ೧ ಕಾಷ್ಠ
೨ ೧/೨ ಕಾಷ್ಠಗಳು  = ೧ ವಿಘಟಿಕ
೬೦ ವಿಘಟಿಕಗಳು  = ೧ ಘಟಿಕಾ (ಈಗಿನ ೨೪ ನಿಮಿಷಗಳು)
೬೦ ಘಟಿಕಾಗಳು  = ೧ ದಿನ
೩೦ ದಿನಗಳು  = ೧ ಮಾಸ
೧೨ ಮಾಸಗಳು  = ೧ ವರ್ಷ
೪೩,೨೦,೦೦೦ ವರ್ಷಗಳು  = ೧ ಯುಗ
೭೨ ಯುಗಗಳು  = ೧ ಮನ್ವಂತರ
೧೪ ಮನ್ವಂತರಗಳು  = ೧ ಕಲ್ಪ
೨ ಕಲ್ಪಗಳು  = ಬ್ರಹ್ಮನ ಒಂದು ದಿನ (ಹಗಲು – ರಾತ್ರಿಗಳು)
ಬ್ರಹ್ಮನ ೩೦ ದಿನಗಳು  = ಬ್ರಹ್ಮನ ಒಂದು ತಿಂಗಳು
ಬ್ರಹ್ಮನ ೧೨ ತಿಂಗಳುಗಳು  = ಬ್ರಹ್ಮನ ಒಂದು ವರ್ಷ
ಬ್ರಹ್ಮನ ೧ ವರ್ಷ  = ೭೨೧೪೨೩೦೧೨ ಯುಗ
   ೭,೨೫,೭೬೦ ಯುಗಗಳು
ಬ್ರಹ್ಮನ ೧೦೦ ವರ್ಷ  = ಒಂದು ಮಹಾಕಲ್ಪ ಅಥವಾ ಬ್ರಹ್ಮನ ಆಯುಷ್ಯ

4 Responses

Subscribe to comments with RSS.

  1. ಬಾಲ said, on July 14, 2008 at 12:26 pm

    ಬದಲಾದ ವಾತವರಣದಲ್ಲಿಯೂ ತನ್ನತನವನ್ನು ಮರೆಯದ ಗಿಳಿಯ ಕಥೆ ಮತ್ತು ವೇದದಲ್ಲಿನ ಕಾಲಗಣನೆಯ ಉಪಯುಕ್ತವಾದ ಮಾಹಿತೆಗೆ ಧನ್ಯವಾದಗಳು.

  2. Vishal said, on July 15, 2008 at 6:22 pm

    Namasakara.
    nimma ee kathe mattu thayanadige thorisida prethi mattu kalaji ge nanna hrudayapurvaka namaste. Jai karnataka mathe, jai hind…

    Matte sigona…. baritha iri…. nanna blog ge beti nidee…..
    vishal

  3. namratha said, on July 19, 2008 at 11:48 am

    namasthe, edannella oodida mele nanagannisiddu manushya yeshtu svarthi. thanna karya tannadu. a gili marakke thorida preethi gouravavannu ee shatha manada so called inteligents thamma thande thayi yarigu thorisuvudilla. kala mathomme badalaga beku.a giliya hage yochisuva manassu nammellarigagabeku. mahaithi kotta nimage dhanyavadagalu.

  4. nagaraja said, on May 1, 2009 at 11:38 am

    nimma kate channagide


Leave a Reply